ತುಮಕೂರು


ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಗೈರು ಮತ(ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟವರು)ದಾರರು ಅಂಚೆ ಮೂಲಕ ಮತದಾನ ಮಾಡಲು ಹೊಸದಾಗಿ ಪರಿಚಯಿಸಲಾಗಿರುವ ನಮೂನೆ 12ಡಿಯನ್ನು ಭರ್ತಿ ಮಾಡಿ ಹಿಂದಿರುಗಿಸಲು ಏಪ್ರಿಲ್ 18ರವರೆಗೂ ಅವಕಾಶ ನೀಡಬೇಕೆಂದು ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಸಂಜೆ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆವಾರು ಗೈರು ಮತದಾರರ ಪಟ್ಟಿ ತಯಾರಿಸಿ ಅದಕ್ಕನುಗುಣವಾಗಿ ಎಲ್ಲ ಗೈರು ಮತದಾರರಿಗೂ ನಮೂನೆ 12ಡಿಯನ್ನು ವಿತರಣೆ ಮಾಡಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಿರುವ ವಾಟ್ಸಪ್ ಗ್ರೂಪ್ ಅನ್ನು ಅಧಿಕಾರಿಗಳು ತಪ್ಪದೇ ಗಮನಿಸಿ ಯಾವುದೇ ಸಬೂಬು ಹೇಳದೆ ಜಿಲ್ಲಾ ಚುನಾವಾಣಾಧಿಕಾರಿಗಳು ನೀಡುವ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದರು.
ನಮೂನೆ 12ಡಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಗೈರು ಮತದಾರರ ಮನೆಗೆ ಭೇಟಿ ನೀಡಿ ತಲುಪಿಸಬೇಕು. ಭರ್ತಿ ಮಾಡಿದ ನಮೂನೆಯನ್ನು ಏಪ್ರಿಲ್ 18ರೊಳಗೆ ಹಿಂಪಡೆಯಬೇಕು. ಏಪ್ರಿಲ್ 18ರ ನಂತರ ಸಲ್ಲಿಸಿದ ನಮೂನೆಗಳು ತಿರಸ್ಕøತಗೊಳ್ಳುತ್ತದೆ ಎಂದು ಮತದಾರರಿಗೆ ಮಾಹಿತಿ ನಿಡಬೇಕು. ನಮೂನೆ 12ಡಿ ವಿತರಿಸುವ ಹಾಗೂ ಅರ್ಹ ಗೈರು ಮತದಾರರಿಂದ ಭರ್ತಿ ಮಾಡಿದ ನಮೂನೆಯನ್ನು ಹಿಂಪಡೆಯುವ ಪ್ರಕ್ರಿಯೆ ಕುರಿತು ಬಿಎಲ್‍ಒಗಳಿಗೆ ತರಬೇತಿ ನೀಡಬೇಕೆಂದು ನಿರ್ದೇಶನ ನೀಡಿದರು.
ಬಿಎಲ್‍ಒಗಳು ನಮೂನೆ 12ಡಿಯನ್ನು ಮತದಾರರಿಗೆ ನೀಡುವ ಸಂದರ್ಭದಲ್ಲಿ ಅವರ ಸಹಿ ಪಡೆದು ಮೊಬೈಲ್ ನಂಬರ್‍ಗಳನ್ನು ವಹಿಯಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೆ ಮತದಾನ ದಿನದಂದು ಮತಗಟ್ಟೆಗೆ ಭೇಟಿ ನೀಡಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಗೈರು ಮತದಾರರಿಗೆ ಉತ್ತೇಜನ ನೀಡಬೇಕು. ಮತಗಟ್ಟೆಗೆ ಭೇಟಿ ನೀಡಲು ಸಾಧ್ಯವಿಲ್ಲದಿರುವವರಿಗೆ ನಮೂನೆ 12ಡಿಯನ್ನು ನೀಡಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛೆ ಪಟ್ಟವರಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಬೇಕು. ಒಮ್ಮೆ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡಲು ಅವಕಾಶ ಇರುವುದಿಲ್ಲವೆಂದು ಮನವರಿಕೆ ಮಾಡಬೇಕು ಎಂದರು.
ಭೂದಾಖಲೆಗಳ ಉಪನಿರ್ದೇಶಕ ಸುಜಯ್‍ಕುಮಾರ್ ಮಾತನಾಡಿ ಜಿಲ್ಲೆಯಲ್ಲಿರುವ 29720 ವಿಕಲಚೇತನ ಹಾಗೂ 80 ವರ್ಷ ಮೇಲ್ಪಟ್ಟ 55827 ಗೈರು ಮತದಾರರಿಗೆ ನಮೂನೆ 12ಡಿಯನ್ನು ವಿತರಣೆ ಮಾಡಲಾಗುವುದು. ನಮೂನೆ ವಿತರಣೆ ಮಾಡುವುದು, ಹಿಂಪಡೆಯುವುದು, ಮತದಾನದ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರಲ್ಲದೆ ಮತದಾನದ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ವೀಡಿಯೋಗ್ರಫಿ ಮಾಡಿಸಬೇಕು. ಗೈರು ಮತದಾರರು ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಂಬಂಧಿಸದವರು ಇರಬಾರದು. ಆದರೆ ಮತದಾರನು ದೈಹಿಕ ದುರ್ಬಲತೆ ಇದ್ದು, ಸ್ವತಃ ಮತದಾನ ಮಾಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ವಯಸ್ಕ ವ್ಯಕ್ತಿಯ ಸಹಾಯ ಪಡೆಯಲು ಅವಕಾಶವಿದೆ. ಮತದಾನವನ್ನು ಬಹಿರಂಗ ಪಡಿಸದೆ ಗೌಪ್ಯವಾಗಿಡುವುದು ಕಡ್ಡಾಯ ಎಂದು ತಿಳಿಸಿದರಲ್ಲದೆ, ಚುನಾವಣಾ ಅಭ್ಯರ್ಥಿಗಳ ಎಜೆಂಟ್‍ಗಳು ದೂರದಿಂದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ತಹಶೀಲ್ದಾರ್ ಸಿದ್ಧೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)