ತುಮಕೂರು :

      ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ವತಿಯಿಂದ ತಂಬಾಕು ನಿಯಂತ್ರಣ ಕಾನೂನು-2003 ರ ಪ್ರಮುಖ ನಿಯಮಗಳಡಿ ಹಾಗೂ ಕೋವಿಡ್ -19 ನಿಯಂತ್ರಣದ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತುಮಕೂರು ನಗರದ ಶಿರಾಗೇಟ್, ಊರುಕೆರೆ, ಯಲ್ಲಾಪುರದ ಕೆಲ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದವರ ವಿರುದ್ದ ಒಟ್ಟು 100 ಪ್ರಕರಣಗಳನ್ನು ದಾಖಲಿಸಿ, 11,580 ರೂ.ಗಳ ದಂಡ ವಸೂಲಿ ಮಾಡಲಾಗಿದೆ.

      ಕಾರ್ಯಾಚರಣೆಯ ಬಗ್ಗೆ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ನಾಗೇಂದ್ರಪ್ಪ ಹಾಗೂ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಾ|| ಮೋಹನ್ ದಾಸ್ ಆರ್.ವಿ ಇವರುಗಳು ಮಾತನಾಡಿ, ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್‍ಮಸಾಲ, ಜರ್ದಾ, ಖೈನಿ, ಇತ್ಯಾದಿಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರೆಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದಾಗಿದ್ದು,, ಬೀಡಿ, ಸಿಗರೇಟ್, ಸೇದುವುದರಿಂದ ಕೈಯಿಂದ ಬಾಯಿಗೆ ವೈರೆಸ್‍ಗಳು ಮಾನವನ ದೇಹವನ್ನು ಪ್ರವೇಶಿಸಲು ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ ಸೊಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದಾದ ಸಂಭವವಿದ್ದು, ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಜಿಲ್ಲೆಯ ಜನತೆ ಪಾಲನೆ ಮಾಡಿ ರೋಗ ಹರಡದಂತೆ ಕ್ರಮವಹಿಸಲು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸಲು ಮನವಿ ಮಾಡಿದರಲ್ಲದೆ ಮುಂದಿನ ದಿನಗಳಲ್ಲಿ ಈ ಕುರಿತಂತೆ ನಿಗಾವಣೆ ಹೆಚ್ಚಾಗಲಿದ್ದು ಕಾನೂನು ಉಲ್ಲಂಘಿಸುವವರು ಕಂಡು ಬಂದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು

      ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ರವಿಪ್ರಕಾಶ್.ಎಂ.ಆರ್, ಕಿರಿಯ ಪುರುಷ ಆರೋಗ್ಯ ಸಹಾಯಕರಾದ ನರಸಿಂಹರಾಜು, ಸಮಾಜ ಕಾರ್ಯಕರ್ತರಾದ ಪುಂಡಲೀಕ ಎಂ ಲಕಾಟಿ ಭಾಗವಹಿಸಿದ್ದರು.

(Visited 11 times, 1 visits today)