ಹುಳಿಯಾರು:

      ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ದೂರವಿದ್ದರೆ ಒಂದು ಐಪಿ ಸೆಟ್‍ಗೆ, ಹತ್ತಿರವಿದ್ದರೆ ಎರಡು ಐಪಿ ಸೆಟ್ಟಿಗೊಂದರಂತೆ ಪ್ರತ್ಯೇಕ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಭದ್ರಾ ನಾಲಾ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

      ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ತಾಲೂಕಿನ ಗಡಿಭಾಗವಾದ ಡಿಂಕನಹಳ್ಳಿಯಲ್ಲಿ 400 ಕೋಟಿ ರೂ. ವೆಚ್ಚದ 400 ಕೆವಿ ಸಾಮಧ್ರ್ಯದ ಸ್ವಿಚ್ ಗೇರ್ ಸ್ಟೇಷನ್ ಮಾಡಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿಯ ಭೂಮಿ ಪೂಜೆ ಮಾಡಲಾಗುವುದು ಎಂದರಲ್ಲದೆ ದೊಡ್ಡಎಣ್ಣೇಗೆರೆ, ಮತಿಘಟ್ಟ, ಜೆ.ಸಿ.ಪುರ, ಬೆಳಗುಲಿ, ದೊಡ್ಡಅಗ್ರಹಾರದಲ್ಲಿ ಬೆಸ್ಕಾಂ ಎಂವಿಎಸ್‍ಎಸ್ ಮಾಡಲಾಗುವುದು ಎಂದು ಭರವಸೆ ನೀಡಿದರು.

      ಕೊಳವೆ ಬಾವಿ ಅಳೆಯುವ ಉಪಕರಣ: ಸರ್ಕಾರದ ಕೊಳವೆ ಬಾವಿ ಕೊರೆಯುವ ದಂದೆಗೆ ಕಡಿವಾಣ ಹಾಕುವ ಸಲುವಾಗಿ ಎಷ್ಟು ಅಡಿ ಆಳ ಕೊರೆದಿದೆ, ಎಷ್ಟು ಕೇಸಿಂಗ್ ಬಿಟ್ಟಿದ್ದಾರೆ, ಎಷ್ಟು ಅಡಿಯಲ್ಲಿ ನೀರು ಸಿಕ್ಕಿದೆ, ಎಷ್ಟು ಇಂಚು ನೀರು ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಉಪಕರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‍ಗೆ ಕೊಳವೆ ಬಾವಿ ಅಳೆಯುವ ಉಪಕರಣ ಸಿದ್ಧಪಡಿಸಲು ಮನವಿ ಸಹ ಮಾಡಲಾಗಿದೆ.

    ಆಡಿಟಿಂಗ್ ಆಫ್ ಬೋರ್‍ವೆಲ್:

      ಸರ್ಕಾರದ ವಿವಿಧ ಯೋಜನೆಯಿಂದ ಎಷ್ಟೇ ಕೊಳವೆ ಬಾವಿ ಕೊರೆಸಿದ್ದರೂ ಜನರು ಮಾತ್ರ ನೀರಿನ ಸಮಸ್ಯೆ ಬಗ್ಗೆ ದೂರುವುದು ನಿಂತಿಲ್ಲ. ಹಾಗಾಗಿ ಇಡೀ ಜಿಲ್ಲೆಯಲ್ಲಿಆಡಿಟಿಂಗ್ ಆಫ್ ಬೋರ್‍ವೆಲ್ ಮಾಡಿಸುತ್ತಿದ್ದೇನೆ. ಎಲ್ಲೆಲ್ಲಿ ಕೊಳವೆ ಬಾವಿ ಕೊರೆದಿದ್ದಾರೆ, ಎಷ್ಟು ಕೇಸಿಂಗ್ ಬಿಟ್ಟಿದ್ದಾರೆ, ಕೇಬಲ್ ಎಷ್ಟು ಮೀಟರ್ ಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು 2 ತಿಂಗಳ ಒಳಗಾಗಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

     ಭದ್ರಾ ನಾಲೆಯ ಗುತ್ತಿಗೆದಾರ ಜಿ.ಶಂಕರ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ಜಯಣ್ಣ, ವಸಂತಯ್ಯ, ತಾಪಂ ಸದಸ್ಯರುಗಳಾದ ಶ್ರೀಹರ್ಷ, ಕೇಶವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷೆ ಆಶಾಉಮೇಶ್, ಕೆ.ಮಂಜುನಾಥ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾಮದ ಮುಖಂಡ ವಿಶ್ವೇಶ್ವರಯ್ಯ, ಗುತ್ತಿಗೆದಾರರಾದ ದಿನೇಶ್, ಬರಕನಹಾಲ್ ಶಿವು, ಯಳನಾಡು ಜಯಸಿಂಹ, ಮೋಹನ್, ಪಾತ್ರೆ ಪರಮೇಶ್, ಮೆಡಿಕಲ್ ದೇವರಾಜು ಮತ್ತಿತರರು ಇದ್ದರು.

(Visited 19 times, 1 visits today)