ತುಮಕೂರು  :

      ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕೋಡಿ ಮುದ್ದನಹಳ್ಳಿ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 4ರಿಂದ ಹಮ್ಮಿಕೊಂಡಿದ್ದ ಏಳು ದಿನಗಳ ಇಂಡಕ್ಷನ್ ತರಬೇತಿ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

      ಹೊಸದಾಗಿ ನೇಮಕಗೊಂಡಿರುವ ಉಪನ್ಯಾಸಕರುಗಳಿಗಾಗಿ ಡಿಎಸ್‍ಇಆರ್‍ಟಿ ಮೂಲಕ ಇಲಾಖಾ ಸಂರಚನೆ, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿಗಾಗಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ಜಿಲ್ಲಾ ವ್ಯಾಪ್ತಿಯ 47 ಉಪನ್ಯಾಸಕರು ಪ್ರಯೋಜನ ಪಡೆದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು 35 ಅಧಿವೇಶನಗಳ ಮೂಲಕ ಉಪನ್ಯಾಸಕ ವೃತ್ತಿ ಬುನಾದಿ, ಕಲಿಕಾ ವಿಧಾನ, ನಡವಳಿಕೆ, ರಾಷ್ಟ್ರೀಯ ಶಿಕ್ಷಣ ನೀತಿ, ಉಪನ್ಯಾಸಕನ ಪಾತ್ರ ಕುರಿತು ತರಬೇತಿ ನೀಡಿದರು.

      ಸಮಾರಂಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಮಂಜುನಾಥ ಕೆ, ಹಿರಿಯ ಉಪನ್ಯಾಸಕ ಶ್ರೀಧರ್, ಡಿಎಸ್‍ಆರ್‍ಟಿ ನಿರ್ದೇಶಕ ಮಾರುತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

(Visited 26 times, 1 visits today)