ತುಮಕೂರು:

     ದಿನಪತ್ರಿಕೆಗಳು ಸಮಾಜಮುಖಿಯಾಗಿದ್ದರೆ ಮಾತ್ರ ಜನಮನ್ನಣೆ ಸಿಗಲು ಸಾಧ್ಯ ಈ ನಿಟ್ಟಿನಲ್ಲಿ ಬೆಂಕಿಯಬಲೆ ಪತ್ರಿಕೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಮಸಾಲೆ ಜಯರಾಂ ಅಭಿಪ್ರಾಯಪಟ್ಟರು.

      ನಗರದ ಕೆಇಬಿ ಇಂಜನಿಯರ್ಸ್ ಸಂಘ ಕಚೇರಿಯಲ್ಲಿ ನಡೆದ ಬೆಂಕಿಯ ಬಲೆ ಪತ್ರಿಕೆಯ 17 ನೇ ವಾರ್ಷಿಕೋತ್ಸವ ಹಾಗೂ ಹಿಂಗ್ಯಾಕೆ ಕಿರುಚಿತ್ರ ಬಿಡುಗಡೆ ಮತ್ತು ಬಡ ಮಕ್ಕಳಿಗೆ ವಸ್ತ್ರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಸದಾ ಚಟುವಟಿಕೆಯಿಂದ ಇರುವ ಧನಂಜಯ ಅವರು, ಈ ಹಿಂದೆ ತುರುವೇಕೆರೆಯಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನಿರ್ವಹಿಸಿ, ತೇಜು ಮಸಾಲೆಯನ್ನು ಪರಿಚಯಿಸಿದ್ದರು, ಶಾಸಕನಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಸಲಹೆ ನೀಡುವ ಮೂಲಕ ಪರೋಕ್ಷವಾಗಿ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪತ್ರಿಕೋಧ್ಯಮದಲ್ಲಿ ಯಾವುದಕ್ಕೂ ಅಂಜದೆ ದಿಟ್ಟತನದಿಂದ ಸುದ್ದಿ ಬರೆಯುವಲ್ಲಿ ಧನಂಜಯವರ ಸಾಧನೆ ಮೆಚ್ಚುವಂತಹದ್ದು. ಪ್ರತಿ ಕ್ಷಣ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪತ್ರಿಕಾ ರಂಗದಲ್ಲಿ ತನ್ನದೆ ಆದ ಮೌಲ್ಯವನ್ನು ಉಳಿಸಿಕೊಂಡು ಬರವಣಿಗೆಯಲ್ಲಿ ಭಿನ್ನತೆ ಹೊಂದಿರುವುದು ಬೆಂಕಿಯ ಬಲೆಯ ವಿಶಿಷ್ಟತೆ ಎಂದರು.

      ಬೆಂಕಿಯಬಲೆ ಪತ್ರಿಕೆ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು, ಜನಮುಖಿ ಪತ್ರಿಕೆಯೊಂದಿಗೆ ಕಿರುಚಿತ್ರ ಮಾಡಿರುವುದು ಶ್ಲಾಘನೀಯ, ಪತ್ರಿಕೆ ನಡೆಸುವುದು ಕಷ್ಟಕರ ಇಂತಹ ಸಂದರ್ಭದಲ್ಲಿ ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಬೇಕು ಆಗ ಮಾತ್ರ ಪತ್ರಿಕೆಗಳು ಉಳಿಯಲು ಸಾಧ್ಯ ಎಂದರು.

      ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ರಮಾನಂದ್ ಅವರು ಕಿರುಚಿತ್ರಕ್ಕೆ ಜಾಗತಿಕ ಮನ್ನಣೆ ಇದೆ, ಇದರಿಂದ ಹಿರಿತೆರೆಗೆ ಅವಕಾಶ ಸಿಗುತ್ತಿತ್ತು, ಇಂದಿನ ಡಿಜಿಟಲ್ ಯುಗದಲ್ಲಿ ಕಿರುಚಿತ್ರಗಳಿಗೆ ಉತ್ತಮ ಅವಕಾಶ ಇದೆ, ರಿಯಾಲಿಟಿ ಷೋಗಳಿಂತ ಕಡಿಮೆ ಇಲ್ಲದ ಅವಕಾಶ ಈಗ ಕಿರುಚಿತ್ರಗಳಿಗಿದೆ ಎಂದರು.

      ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದು ಪ್ರತಿಯೊಬ್ಬರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಪತ್ರಿಕಾ ಮಾಧ್ಯಮ ನಮ್ಮನ್ನು ಬೆಳೆಸುವುದರೊಂದಿಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ಓಡಿಸಲು ಪತ್ರಿಕೆಗಳ ಪಾತ್ರ ಮಹತ್ವದ್ದು, ನಾಲ್ಕು ಅಂಗಗಳ ನಡುವೆ ಪತ್ರಿಕೋದ್ಯಮ ವಿಶಿಷ್ಟವಾಗಿದೆ, ಇದೇ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿ ಪತ್ರಿಕಾ ರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಧನಂಜಯ ದೈರ್ಯ ಮೆಚ್ಚುವಂತಹದ್ದು. ಮೊದಲಿನಿಂದಲೂ ಯಾವುದೇ ಭಯವಿಲ್ಲದೆ ಹಲವು ಭ್ರಷ್ಟರ ಬಗ್ಗೆ ನಿರ್ಭೀಯವಾಗಿ ಸುದ್ದಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜಿಟಲ್ ಮಾಧ್ಯಮಗಳ ಭರಾಟೆಯಲ್ಲಿ ಪತ್ರಿಕೆ ನಡೆಸುವುದು ಸಾಹಸ ಈ ಹಂತದಲ್ಲಿ ಬೆಂಕಿಯ ಬಲೆ ಪತ್ರಿಕೆಯನ್ನು ನಡೆಸುವ ಮೂಲಕ ಕಿರುಚಿತ್ರ ನಿರ್ಮಿಸಿರುವುದು ಸಂತಸದ ವಿಷಯ ಎಂದು ಹೇಳಿದರು. 2020ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಗೆಲುವು ಸೋಲಿನ ಲೆಕ್ಕಾಚಾರ ಹಾಕುವಲ್ಲಿ ಜನರ ನಡುವೆ ನೇರವಾಗಿ ಸಂದರ್ಶನ ನಡೆಸಿದ ಕೀರ್ತಿ ಧನಂಜಯವರದ್ದು.ಜಿಲ್ಲೆಯಲ್ಲಿ ನಿಖರವಾಗಿ ಯಾರ ಬಗ್ಗೆ ಬೇಕಾದರೂ ಬರೆಯಬಲ್ಲ ಛಾತಿ ಇರುವುದು ಧನಂಜಯ ಅವರಿಗೆ ಮಾತ್ರ, ರಾಜಕೀಯ ವಿಶ್ಲೇಷಣೆ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಪ್ರಬುದ್ಧತೆ ಇದೆ, ಜನರಿಗೆ ಬೇಕಿರುವ ಮಾಹಿತಿಯನ್ನು ಕಿರುಚಿತ್ರಗಳ ಮೂಲಕ ನೀಡುವಂತಾಗಲಿ, ಸಂಶೋಧನೆ ಮಾಡಿ ಕಿರುಚಿತ್ರಗಳನ್ನು ತಯಾರಿಸುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಕಿರುಚಿತ್ರ ನಿರ್ಮಿಸಿದ ಬೆಂಕಿಯ ಬಲೆ ಪತ್ರಿಕೆಯ ಸಂಪಾದಕ ಧನಂಜಯರವರಿಗೆ ಅಭಿನಂದನೆ ಎಂದರು. ಕಾರ್ಯಕ್ರಮದಲ್ಲಿ ‘ಹಿಂಗ್ಯಾಕೆ’ ಕಿರುಚಿತ್ರ ಮತ್ತು ಬೆಂಕಿಯಬಲೆ ವಿಶೇಷಾಂಕದಲ್ಲಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

(Visited 29 times, 1 visits today)