ತುಮಕೂರು : 

     ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ನೆಪವಾಗಿಟ್ಟುಕೊಂಡು ನಗರಾಡಳಿತ ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ಸೇರದಂತೆ ವರ್ಷದ ತೊಡಕು ದಿನವಾದ ಇಂದು ಮಾಂಸ ಮಾರಾಟವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಚಿಕನ್, ಮಟನ್ ಖರೀದಿಗಾಗಿ ಮಾಂಸ ಪ್ರಿಯರ ಪರದಾಟ ಹೇಳತೀರದಾಗಿತ್ತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನೆಪದಲ್ಲಿ ನಗರದಲ್ಲಿ ಇಂದು ಮಾಂಸ ಮಾರಾಟ ನಿಷೇಧಿಸಿರುವುದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

      ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕನ್ನು ಆಚರಿಸಲು ಮಾಂಸ ಪ್ರಿಯರು ಬಹಳ ಉತ್ಸುಕತೆಯಿಂದ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಈ ಬಾರಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಿರುವುದಿಂದ ಮಟನ್ ಮತ್ತು ಚಿಕನ್ ಅಂಗಡಿಗಳು ಬಂದ್ ಆಗಿದ್ದವು.

      ಏಕಾಏಕಿ ಮಾಂಸ ಮಾರಾಟ ಅಂಗಡಿಗಳು ಬಾಗಿಲು ತೆಗೆಯದೇ ಇರುವುದರಿಂದ ವರ್ಷದ ತೊಡಕಿಗೆ ಕೊಂಚ ಅಡ್ಡಿಯಾಗಿದ್ದು, ನಗರದ ಜನತೆ ಚಿಕನ್ ಮತ್ತು ಮಟನ್ ಖರೀದಿಗಾಗಿ ಗ್ರಾಮೀಣ ಪ್ರದೇಶಗಳಿಗೆ ಮುಗಿ ಬಿದ್ದಿದ್ದರು.
ಯಾವುದೇ ಮುನ್ಸೂಚನೆಯನ್ನು ನೀಡದೆ ದಿಢೀರನೆ ಮಾಂಸ ಮಾರಾಟ ನಿಷೇಧಿಸಿರುವುದು ನಗರದ ಜನತೆಯ ಸಿಟ್ಟಿಗೆ ಕಾರಣವಾಗಿದ್ದು, ನಗರಾಡಳಿತಕ್ಕೆ ಹಿಡಿಶಾಪ ಹಾಕಿದ್ದಾರೆ.

      ನಗರ ವ್ಯಾಪ್ತಿ ಹೊರತುಪಡಿಸಿ ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿರುವ ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿಗಾಗಿ ಜನತೆ ಮುಗಿ ಬಿದ್ದಿರುವುದರಿಂದ ಅಂಗಡಿಗಳ ಮುಂದೆ ಕಿ.ಮೀ. ಗಟ್ಟಲೆ ಸರದಿಯ ಸಾಲುಗಳು ಕಂಡು ಬಂದವು.

ಗುಡ್ಡೆ ಬಾಡಿಗೆ ಹೆಚ್ಚಿದ ಬೇಡಿಕೆ :

      ವರ್ಷದ ತೊಡಕನ್ನು ಆಚರಿಸಲು ಹಳ್ಳಿಗಳಲ್ಲಿ ಬಾಡಿನ ಚೀಟಿ ಮಾಡಿಕೊಂಡಿರುತ್ತಾರೆ. ಇಂತಹ ಹಳ್ಳಿಗಳ ಮಾಹಿತಿ ಪಡೆದುಕೊಂಡಿರುವ ನಗರ ಪ್ರದೇಶದ ಜನತೆ ತಮ್ಮ ಸ್ನೇಹಿತರ ಮೂಲಕ ಗುಡ್ಡೆ ಬಾಡಿಗೆ ಬೇಡಿಕೆ ಇಟ್ಟಿರುವ ಪರಿಣಾಮ ಹಳ್ಳಿಗಳಲ್ಲೂ ಮಾಂಸ ಮಾರಾಟಕ್ಕೆ ಹೊಸ ಹುರುಪು ಬಂದಂತಾಗಿದೆ.

ತಡರಾತ್ರಿಯೇ ಹಳ್ಳಿಗಳಿಗೆ ತೆರಳಿರುವ ನಗರದ ಜನತೆ ಬೆಳಗಿನ ಜಾವದವರೆಗೂ ಅಲ್ಲಿಯೇ ಕಾದು ಕುಳಿತು ಮಾಂಸ ಖರೀದಿಸಿಕೊಂಡು ನಗರಗಳತ್ತ ಮರಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಅಂಬೇಡ್ಕರ್ ಜಯಂತಿ ನೆಪದಲ್ಲಿ ಏಕಾಏಕಿ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಿರುವುದು ಮಾಂಸ ಮಾರಾಟಗಾರರ ಆಕ್ರೋಶಕ್ಕೂ ಕಾರಣವಾಗಿದ್ದು, ಯಾವ ಜಿಲ್ಲೆಯಲ್ಲೂ ಹೇರದ ನಿರ್ಬಂಧ ನಮ್ಮ ಜಿಲ್ಲೆಯಲ್ಲಿ ಏಕೆ ಎಂಬ ಪ್ರಶ್ನೆ ಅವರದ್ದಾಗಿದೆ.

 

(Visited 26 times, 1 visits today)