ತುಮಕೂರು:

      ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ತರಕಾರಿ ತಲುಪಿಸಲು ತೋಟಗಾರಿಕೆ ಇಲಾಖೆ ಹಾಗೂ ಹಾಪ್‍ಕಾಮ್ಸ್ ಮುಂದಾಗಿದ್ದು, ಸಂಚಾರಿ ತರಕಾರಿ, ಹಣ್ಣು ಮಾರಾಟದ ವಾಹನಕ್ಕೆ ಚಾಲನೆ ನೀಡಲಾಯಿತು.

       ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಜನಸಾಮಾನ್ಯರಿಗೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ತರಕಾರಿ, ದಿನ ಪದಾರ್ಥ ಖರೀದಿಸಲು ಅವಕಾಶ ನೀಡಲಾಗಿದೆ. ಆದರೆ ಜನರು ಕೊರೊನಾ ಸೋಂಕಿನ ಭೀತಿಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಗರದ ಜನರ ಮನೆ ಬಾಗಿಲಿಗೆ ತರಕಾರಿ ತಲುಪಿಸಲು ಸಂಚಾರಿ ತರಕಾರಿ ಮಾರಾಟ ಮಳಿಗೆ ಕಾರ್ಯಾರಂಭ ಮಾಡಿದೆ.

      ಸಂಚಾರಿ ತರಕಾರಿ ಮಾರಾಟ ವಾಹನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಾಪ್‍ಕಾಮ್ಸ್ ಅಧ್ಯಕ್ಷ ವಿಜಯಗೌಡ, ಕಳೆದ ಬಾರಿ ಕೊರೊನಾ ಲಾಕ್‍ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು 40 ರಿಂದ 45 ಸಂಚಾರಿ ತರಕಾರಿ, ಹಣ್ಣು ಮಾರಾಟ ವಾಹನಗಳನ್ನು ಬಿಡಲಾಗಿತ್ತು. ಅದರಂತೆ ಈ ಬಾರಿ ಮೊದಲ ಬಾರಿಗೆ ಎರಡು-ಮೂರು ವಾಹನಗಳನ್ನು ಪ್ರಾಯೋಗಿಕವಾಗಿ ಬಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.

      ನಗರದ ಪ್ರತಿ ಬಡಾವಣೆಯ ಮನೆ ಮನೆಗೆ ತೆರಳಿ ಈ ವಾಹನ ತರಕಾರಿ ಮಾರಾಟ ಮಾಡಲಿದೆ. ಜನಸಾಮಾನ್ಯರು ನ್ಯಾಯಯುತ ದರದಲ್ಲಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

     ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ಕಳೆದ ಬಾರಿ ಮನೆ ಮನೆಗೆ ತೆರಳಿ ತರಕಾರಿ ಮಾರಾಟ ಮಾಡಲು ವಾಹನಗಳನ್ನು ಬಿಡಲಾಗಿತ್ತು. ಅದರಂತೆ ಈ ಬಾರಿಯೂ ತರಕಾರಿ ಮಾರಾಟ ಮಾಡಲು ವಾಹನಗಳನ್ನು ಬಿಡಲಾಗುತ್ತಿದ್ದು, ಪ್ರಥಮವಾಗಿ ಎರಡು-ಮೂರು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಬೇಡಿಕೆ ಬಂದರೆ ಮತ್ತಷ್ಟು ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.

    ಗ್ರಾಹಕರಿದೆ ತರಕಾರಿ ಮಾರಾಟ ದರದಲ್ಲಿ ಹೊರೆಯಾಗದಲ್ಲಿ ವಾಹನದಲ್ಲೇ ತರಕಾರಿ ಮತ್ತು ಹಣ್ಣುಗಳ ಬೆಲೆಯನ್ನು ಪ್ರಕಟಿ ಸಲಾಗಿರುತ್ತದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಹಾಪ್‍ಕಾಮ್ಸ್ ನಿರ್ದೇಶಕರು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 13 times, 1 visits today)