ತುಮಕೂರು : 

      ದೇಶದ ಜನರ ಮೇಲೆ 1975ರ ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಿದ ಶ್ರೀಮತಿ ಇಂದಿರಾಗಾಂಧಿ ಅವರ ಪ್ರಜಾಪ್ರಭುತ್ವ ನೀತಿಯನ್ನು ವಿರೋಧಿಸಿ 2021ರ ಜೂನ್ 25 ರಂದು ಬಿಜೆಪಿ ರಾಷ್ಟ್ರದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶಗೌಡ ತಿಳಿಸಿದ್ದಾರೆ.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ್ಯಾಯಾಲಯದಿಂದ ತಮ್ಮ ವಿರುದ್ದ ತೀರ್ಪು ಬಂತು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪ್ರಜಾಪ್ರಭುತ್ವದಲ್ಲಿ ಪ್ರಧಾನಮಂತ್ರಿಯೇ ಸುಪ್ರಿಂ ಎಂಬ ಆಹಂ ನಿಂದ 1975ರ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಅಭಿವ್ಯಕ್ತಿ ಸ್ವಾತಂತ್ರದ ಜೊತೆಗೆ, ಎಲ್ಲ ರೀತಿಯ ಸ್ವಾತಂತ್ರಕ್ಕೂ ಧಕ್ಕೆ ತರುವ ಕೆಲಸವನ್ನು ಅಂದು ಕಾಂಗ್ರೆಸ್ ಮಾಡಿತ್ತು.

      ಇದರ ವಿರುದ್ದ ಜನಸಂಘ ಸೇರಿದಂತೆ ಅನೇಕ ದೇಶ ಪ್ರೇಮಿ ಸಂಘಟನೆಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ, ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಯಿತು. ಹಾಗಾಗಿ ಇಂತಹ ಕರಾಳ ದಿನದ ನೆನಪಿಗಾಗಿ ಜೂನ್ 25ನ್ನೂ ಬಿಜೆಪಿ ದೇಶದ ಜನತೆಯ ದೃಷ್ಟಿಯಿಂದ ಕರಾಳ ದಿನವನ್ನಾಗಿ ಆಚರಿಸುತ್ತದೆ ಎಂದರು.

      ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನತೆಯ ಕಷ್ಟದ ಬಗ್ಗೆ ಮಾತನಾಡಿದ ಲಕ್ಷಾಂತರ ಜನರನ್ನು ಹಿಡಿದು ದೇಶದ್ರೋಹದ ಕೇಸಿನ ಆಧಾರದಲ್ಲಿ ಜೈಲಿಗೆ ಕಳುಹಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಬೃಹತ್ ಹೋರಾಟಗಳು ನಡೆದವು.ಅಂದು ಬೆಂಗಳೂರಿಗೆ ಬಂದಿದ್ದ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಜಾರ್ಜ್ ಫರ್ನಾಂಡೀಶ್ ಸೇರಿದಂತೆ ಹಲವರನ್ನು ಬಂಧಿಸಿ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿಡಲಾಯಿತು. ಅಲ್ಲದೆ ತುಮಕೂರಿನಗ ಟಾಡಾ ಹೆಸರಿನಲ್ಲಿ ಸುಮಾರು 434 ಜನರನ್ನು ಬಂಧಿಸಿದ್ದರು.ಅಲ್ಲದೆ 1975ರ ಆಗಸ್ಟ್ 15 ರಂದು ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಕ್ಕಾಗಿ 24 ಜನರನ್ನು 18 ತಿಂಗಳಕಾಲ ಮೀಸಾ ಬಂಧಿಗಳನ್ನಾಗಿಸಲಾಗಿತು. ಅವರಲ್ಲಿ ಕೆಲವರು ಮೃತಪಟ್ಟಿದ್ದು, ಕೆಲವೇ ಮಂದಿ ಮಾತ್ರ ಬದುಕಿದ್ದಾರೆ. ಅವರೆಲ್ಲರ ಹೋರಾಟದ ಫಲವಾಗಿ ಇಂದು ದೇಶದ ಪ್ರಜಾಪ್ರಭುತ್ವ ಉಜ್ವಲವಾಗಿದೆ ಎಂದರು.

      ಕರಾಳ ದಿನದ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಟಾಡಾ ಮತ್ತು ಮೀಸಾ ಬಂದಿಗಳಾಗಿ, ಬದುಕುಳಿದಿರುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಅಭಿನಂದಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೆ ಕೆಲವರ ಅಶೀರ್ವಾದ ಪಡೆದುಕೊಳ್ಳುವ ಕಾರ್ಯಕ್ರಮವನ್ನು ಬಿಜೆಪಿ ಪಕ್ಷ ಹಾಕಿಕೊಂಡಿದೆ. ಅಲ್ಲದೆ 1975ರ ತುರ್ತು ಪರಿಸ್ಥಿತಿ ಕುರಿತು ವೆಬ್ ಸೆಮಿನಾರ್ ಆಯೋಜಿಸಲಾಗುತ್ತಿದೆ ಎಂದು ಎಂ.ಬಿ.ನಂದೀಶ್ ತಿಳಿಸಿದರು.

      ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ನಾರು ಅಭಿವೃದ್ದಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ವಕ್ತಾರ ಕೊಪ್ಪಲ್ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಮಾಧ್ಯಮ ಪ್ರತಿನಿಧಿ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 21 times, 1 visits today)