ತುಮಕೂರು :

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಂಗಡಿ, ಹೋಟೆಲ್‍ಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಕವರ್, ಬ್ಯಾಗ್ ಸೇರಿದಂತೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತಮ್ಮ ಕಚೇರಿಯ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಾತಿ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 2021ರಿಂದ ಈವರೆಗೂ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ 137 ದಾಳಿಗಳನ್ನು ನಡೆಸಿದ್ದು, 3545 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದ್ದು, 3.85ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ಹೊರವಲಯಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಸ್ಥಳವನ್ನು ಗುರುತಿಸಲಾಗಿದ್ದು, ಸೂಕ್ತ ರೀತಿಯಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರಲ್ಲದೆ, ಮನೆ ಮನೆಗೆ ಭೇಟಿ ನೀಡಿ ಹಸಿ-ಒಣ, ಮಿಶ್ರ ಕಸಗಳನ್ನು ಪ್ರತ್ಯೇಕಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ 2510 ಟನ್‍ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಗಧಿತ ವಿಲೇವಾರಿ ಘಟಕಗಳಲ್ಲಿ ಸುಡುವುದು ಮತ್ತು ಮರು ಬಳಸಲಾಗುವ ವಸ್ತುಗಳಾಗಿ ಮಾರ್ಪಡಿಸಿ ಲಾಭವನ್ನು ಗಳಿಸುವ ಮಾರ್ಗವಿದ್ದು, ವ್ಯವಸ್ಥಿತವಾಗಿ ನಿರ್ವಹಿಸಬೇಕು. ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಮಿಶ್ರಗೊಬ್ಬರ ತಯಾರಿಸುವುದರಿಂದ ಸ್ಥಳೀಯ ಸಂಸ್ಥೆಗಳು ಹೆಚ್ಚು ಆದಾಯವನ್ನು ಗಳಿಸಬಹುದು ಎಂದರಲ್ಲದೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಕಟ್ಟಡ ತೆರಿಗೆಯನ್ನು ಸಂಗ್ರಹಿಸುವಾಗ ನಿಯಮಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮನೆಮನೆ ಕಸ ಸಂಗ್ರಹಣೆಗೆ ಅವಶ್ಯಕವಿರುವ 93 ಆಟೋ ಟಿಪ್ಪರ್‍ಗಳು ಮತ್ತು ದ್ವಿತೀಯ ಹಂತದ ಕಸ ಸಾಗಣಿಕೆಗಾಗಿ 4 ಕಾಂಪ್ಯಾಕ್ಟರ್ ವಾಹನಗಳಿಗೆ ಚಾಲಕರನ್ನು ಒದಗಿಸಲು ಟೆಂಡರ್ ಕರೆಯಲಾಗಿದ್ದು, ಗಣೇಶ್ ಶಂಕರ್ ಎನ್ವಿರಾನ್ಮೆಂಟಲ್ ಸೊಲ್ಯುಷನ್ ಪ್ರೈ.ಲಿ.ಇವರು ಟೆಂಡರ್ ಷರತ್ತಿನಲ್ಲಿ ನಿಗಧಿಪಡಿಸಲಾದ ದಾಖಲಾತಿಗಳನ್ನು ಸಲ್ಲಿಸಿದ್ದು ತಾಂತ್ರಿಕವಾಗಿ ಅರ್ಹರಾಗಿರುತ್ತಾರೆ. ಸದರಿಯವರ ಆರ್ಥಿಕ ಬಿಡ್ ತೆರೆಯಲು ಸರ್ವಾನುಮತದಿಂದ ಒಪ್ಪಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ.ಅಜಯ್ ಪಿಡಬ್ಲ್ಯುಡಿ, ಎನ್ವಿರಾನ್ಮೆಂಟಲ್ ಇಂಜಿನಿಯರ್‍ಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

(Visited 6 times, 1 visits today)