ತುಮಕೂರು


75ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಮತ್ತು ಅರ್ಥ ಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ವತಿಯಿಂದ ದೇಶಕ್ಕಾಗಿ ನಡಿಗೆ ರಾಷ್ಟ್ರ ಜಾಗೃತಿ ಅಭಿಯಾನವನ್ನು ನಗರದಲ್ಲಿ ನಡೆಸಲಾಯಿತು.
ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ದೇಶಕ್ಕಾಗಿ ನಡಿಗೆ(ವಾಕಥಾನ್)ಗೆ ಬಿಗ್‍ಬಾಸ್ ಖ್ಯಾತಿಯ ಹಾಗೂ ಕಿರುತೆರೆ ನಟಿ ಕುಮಾರಿ ಚಂದನ ಅನಂತಕೃಷ್ಣ ಚಾಲನೆ ನೀಡಿದರು.
ನಂತರ ಮಾತನಾಡಿದ ಕು. ಚಂದನ ಅವರು, ನಾವೆಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತ ಎಂದಾಕ್ಷಣ ನಮಗೆಲ್ಲ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ದೇಶದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ರಾಷ್ಟ್ರ ಜಾಗೃತಿ ಅಭಿಮಾನ ಮಾಡುತ್ತಿರುವುದು ದೇಶದಲ್ಲಿ 75 ವರ್ಷದ ಹಿಂದೆ ಇದ್ದಂತಹ ಸ್ವಾತಂತ್ರ್ಯದ ಕಿಚ್ಚಿನ ವಾತಾವರಣವನ್ನು ಮತ್ತೊಮ್ಮೆ ನಮ್ಮೆಲ್ಲರ ನಡುವೆ ನಿರ್ಮಾಣವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ದೇಶವನ್ನು ವಿಶ್ವದಲ್ಲೇ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 75ನೇ ಅಮೃತ ಮಹೋತ್ಸವ ವರ್ಷಾಚರಣೆ ಮಾಡುತ್ತಿದ್ದೇವೆ. ಇಂದಿನಿಂದ ಆ. 15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 4.5 ಲಕ್ಷ ಮನೆಗಳ ಮೇಲೆ ಪ್ರತಿಯೊಬ್ಬರೂ ಧ್ವಜಾರೋಹಣ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಜಿಲ್ಲೆಯಲ್ಲಿ ಪ್ರತಿ ಮನೆ ಮೇಲೂ ಸಹ ತ್ರಿವರ್ಣ ಧ್ವಜ ಹಾರಿಸುತ್ತಿರುವುದು ದೇಶ ಪ್ರೇಮವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ನಮ್ಮ ರಕ್ತದ ಕಣ ಕಣದಲ್ಲೂ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ಇರಬೇಕು ಎಂದು ಅವರು ಕರೆ ನೀಡಿದರು.
ತುಮಕೂರು ವಿ.ವಿ. ಕುಲಪತಿ ಪೆÇ್ರ. ಎಂ.ವೆಂಕಟೇಶ್ವರಲು ಮಾತನಾಡಿ, ಇಡೀ ರಾಷ್ಟ್ರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮೂರು ದಿನಗಳ ಕಾಲ ನಡೆಯುವ ಹರ್ ಘರ್ ತಿರಂಗಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ವಾಕಥಾನ್‍ನಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ಸರ್ಕಾರಿ ಕಿರಿಯ ಕಾಲೇಜು, ಟೌನ್‍ಹಾಲ್ ವೃತ್ತ, ಅಶೋಕ ರಸ್ತೆ, ಸ್ವತಂತ್ರ ಚೌಕ ಮಾರ್ಗವಾಗಿ ಗಾಜಿನ ಮನೆವರೆಗೆ ದೇಶಕ್ಕಾಗಿ ನಡಿಗೆ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ಮುಖ್ಯಾಧಿಕಾರಿ ರಾಹುಲ್‍ಕುಮಾರ್ ಶಹಪುರ್‍ವಾಡ್, ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಬಸವರಾಜು, ಗೌರವಾಧ್ಯಕ್ಷ ಎಸ್.ಪಿ. ಚಿದಾನಂದ್, ಜಿ.ಕೆ. ಶ್ರೀನಿವಾಸ್, ವಾಸವಿ ಗುಪ್ತ, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

(Visited 2 times, 1 visits today)