ತುಮಕೂರು:

ಬ್ಲಾಕ್ ಕಮಿಟಿ,ವಿಲೇಜ್ ಕಮಿಟಿಗಳನ್ನು ಸಶಕ್ತಗೊಳಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಗುರಿಯಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಹಿರಿಯ ಮುಖಂಡರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬ್ಲಾಕ್ ಕಮಿಟಿ ಮತ್ತು ವಿಲೇಜ್ ಕಮಿಟಿಗಳು ಬಲಗೊಂಡರೆ, ಸುಲಭವಾಗಿ ಮತದಾರರನ್ನು ಸೆಳೆಯಬಹುದೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರಿದ್ದಾರೆ.ಅಂತಹವರನ್ನು ಗುರುತಿಸಿ,ಅವರ ಮತಗಳು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾಡಬೇಕಿದೆ.ಬಿಜೆಪಿಯ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಬಿಜೆಪಿಗೆ ಪರ್ಯಾಯ ಎಂಬುದನ್ನು ನಾವು ಸಾಭೀತು ಪಡಿಸಬೇಕಿದೆ.ಬಿಜೆಪಿಯ ವಿರುದ್ದ ಮತಗಳು ಎಂದಿಗೂ ಜೆಡಿಎಸ್ ಪಕ್ಷದ ಪಾಲಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ.2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದದ ಮತಗಳನ್ನು ಸೆಳೆಯುವಲ್ಲಿ ಪಕ್ಷ ವಿಫಲವಾಗಿದ್ದರಿಂದಲೇ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು.ಈ ಬಾರಿ ಹಾಗಾಗದಂತೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕೆಂದು ಮಯೂರ ಜಯಕುಮಾರ್ ತಿಳಿಸಿದರು.

ಬ್ಲಾಕ್ ಮತ್ತು ವಿಲೇಜ್ ಕಮಿಟಿಗಳು ಪಕ್ಷದ ಆಧಾರ ಸ್ತಂಭಗಳಿದ್ದಂತೆ ಹಾಗಾಗಿ ಜಿಲ್ಲೆಯಲ್ಲಿರುವ ಎಲ್ಲಾ 22 ಬ್ಲಾಕ್‍ಗಳಿಗೂ ಮುಂದಿನ 15 ದಿನಗಳ ಒಳಗೆ ಪದಾಧಿಕಾರಿಗಳ ನೇಮಕ ಮಾಡುವುದು ಕಡ್ಡಾಯ.ಇದರ ಜೊತೆಗೆ ಜಿಲ್ಲಾ ಕಾಂಗ್ರೆಸ್‍ಗೆ ಸಂಘಟನಾ ಕಾರ್ಯದರ್ಶಿಗಳನ್ನು ನೇಮಕ ಮಾಡಬೇಕಾಗಿದೆ.ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ತುಮಕೂರು ದೊಡ್ಡ ಜಿಲ್ಲೆ, ಹಾಗೂ ರಾಜಕೀಯವಾಗಿಯೂ ವಿಭಿನ್ನವಾಗಿದೆ.ಇಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಾಧನೆ ಇಳಿಮುಖದಲ್ಲಿದ್ದರೆ, ತುಮಕೂರಿನಲ್ಲಿ ಪ್ರಗತಿಯಲ್ಲಿದೆ.ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಕಾರ್ಯಕರ್ಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪಲೋಡ್ ಮಾಡುವ ಜೊತೆಗೆ,ವಿರೋಧಪಕ್ಷಗಳ ಟೀಕೆಗೆ ತಕ್ಷಣವೇ ತೀಕ್ಷ್ಣ ಪ್ರತಿಕ್ರಿಯೆ ನೀಡುವುದನ್ನು ಸಾಮಾಜಿಕ ಜಾಲತಾಣ ನಿರ್ವಹಿಸುವವರು ಮಾಡಬೇಕೆಂದು ಮಯೂರು ಜಯಕುಮಾರ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹೇಳಿದಂತೆ ಚುನಾವಣಾ ವರ್ಷವಾಗಿರುವುದರಿಂದ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಬೇಕಿದೆ.ಸಕ್ರಿಯವಾಗಿರುವ ಪದಾಧಿಕಾರಿಗಳಿಗೆ ಪ್ರೋತ್ಸಾಹ ನೀಡಿ,ನಿಷ್ಕ್ರೀಯ ಪದಾಧಿಕಾರಿಗಳನ್ನು ಬದಲಾಯಿಸಿ, ಹೊಸಬರನ್ನು ನೇಮಿಸುವ ಕೆಲಸ ಶೀಘ್ರದಲ್ಲಿಯೇ ಆಗಲಿದೆ.ಯುವ ಕಾಂಗ್ರೆಸ್, ಎನ್.ಎಸ್.ಯು.ಐ ಸೇರಿದಂತೆ ವಿವಿಧ ಮಂಚೂಣಿ ಘಟಕಗಳು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕರ್ತರನ್ನು ಕುರಿತು ಶಾಸಕ ಡಾ.ಹೆಚ್.ಡಿ.ರಂಗನಾಥ್,ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿದರು.ವೇದಿಕೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ,ಮಾಜಿ ಶಾಸಕರಾದ ಕೆ.ಷಡಕ್ಷರಿ, ಎಸ್.ಷಪಿ ಅಹಮದ್,ವಿಧಾನಪರಿಷತ್ ಸದಸ್ಯ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಆರ್.ರಮೇಶ್, ಕೆಂಚಮಾರಯ್ಯ, ಎಸ್.ವಿ.ವೆಂಕಟೇಶ್,ಕೆಪಿಸಿಸಿ ಉಸ್ತುವಾರಿ ಕೇಶವಮೂರ್ತಿ,ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದದ್ದರು

 

(Visited 1 times, 1 visits today)