ತುಮಕೂರು:

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ
ಕಮೀಷನ್ ದಂಧೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್
ಸಚಿವರ್ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ
ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ. ಸೂಲಗಿತ್ತಿ
ನರಸಮ್ಮನವರ 102ನೇ ಜಯಂತ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ
ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಪರ್ಸಂಟೆಜ್ ದಂಧೆ ನಡೆದಿರುವ ಬಗ್ಗೆ
ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ
ಕುಮಾರಸ್ವಾಮಿಯವರು ಈಗ ಹೇಳಿದ್ದರೆ ಯಾವ ಸಚಿವಾಲಯದಲ್ಲಿ, ಯಾವ
ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ
ಮುಖ್ಯಮಂತ್ರಿಯಾಗಿದ್ದವರು ಅವರು, ಹಾಗಾಗಿ ಜವಾಬ್ದಾರಿಯಿಂದ ಈ ಹೇಳಿಕೆ
ನೀಡಿದ್ದಾರೆ ಎಂದೆನಿಸುತ್ತದೆ. ಆದರೆ
ನಮ್ಮ ಕಾಂಗ್ರೆಸ್‍ನ ಸಚಿವರು ಯಾರೂ ಸಹ ಈ ಪರ್ಸಂಟೆಜ್ ದಂಧೆಯಲ್ಲಿ
ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40 ಪರ್ಸಂಟೆಜ್ ಕಮೀಷನ್
ಪಡೆಯುತ್ತಿದೆ. ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿಯವರಿಗೆ
ಗುತ್ತಿಗೆದಾರ ಕೆಂಪಣ್ಣನವರು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ
ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ
ಕೈಗೊಳ್ಳಬೇಕು ಎಂದರು.
ರಾಜ್ಯದ ಜನ ಬಿಜೆಪಿ ಸರ್ಕಾರದ ಆಡಳಿತವನ್ನು ಗಮನಿಸುತ್ತಿದ್ದಾರೆ. ಮುಂಬರುವ
2023ರಲ್ಲಿ ಬಿಜೆಪಿಗೆ ಪ್ರತ್ಯುತ್ತರವನ್ವು ಜನರೇ ಕೊಡಲಿದ್ದಾರೆ ಎಂದರು.
ತುಮಕೂರು ವಿವಿಯಲ್ಲಿ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು
ವಿವಿ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದೆ ಎಂಬ ಪ್ರಶ್ನೆಗೆ ವಿ.ವಿ. ಸಿಂಡಿಕೇಟ್ ಸದಸ್ಯರಿಗೆ
ಸರ್ಕಾರದ ಸೂಚನೆ ಕೊಟ್ಟಿರಬಹುದು. ಹಾಗಾಗಿ ರಾಜಕೀಯ ಒತ್ತಡದಿಂದ
ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು ಮುಂದಾಗಿರಬಹುದು. ಏಕಾಏಕಿ
ಕುಲಪತಿಗಳು, ಕುಲಸಚಿವರು, ವಿವಿ ಸಿಂಡಿಕೇಟ್ ಸದಸ್ಯರುಗಳು ತೀರ್ಮಾನ
ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ತುಮಕೂರು ವಿವಿಯನ್ನು ಇದುವರೆಗೆ ಆಡಳಿತ ನಡೆಸಿರುವ ಎಲ್ಲ
ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ನನ್ನ ಪ್ರಯತ್ನದಿಂದ
ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯಾಯಿತು. ಆದರೆ
ಇದುವರೆಗೂ ಹೊಸ ಕ್ಯಾಂಪಸ್‍ಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ
ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಅನುದಾನ ಬಿಡುಗಡೆ ಮಾಡಿ ಆದಷ್ಟು
ಬೇಗ ಹೊಸ ಕ್ಯಾಂಪಸ್‍ಗೆ ತುಮಕೂರು ವಿವಿ ಸ್ಥಳಾಂತರವಾಗುವಂತೆ
ಮಾಡಬೇಕು ಎಂದು ಒತ್ತಾಯಿಸಿದರು.
ಮುನಿಯಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. 7 ಬಾರಿ
ಲೋಕಸಭಾ ಸದಸ್ಯರಾಗಿದ್ದವರು. ಅವರು ನಮ್ಮ ಪಕ್ಷ ಬಿಡುವುದಿಲ್ಲ.
ಮಾದಾರ ಚನ್ನಯ್ಯ ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ
ನನಗೆ ಗೊತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

(Visited 1 times, 1 visits today)