ತುಮಕೂರು


ತುಮಕೂರು ವಿಶ್ವವಿದ್ಯಾಲಯದಿಂದ ನಡೆಸುತ್ತಿರುವ ಸ್ನಾತಕೋತ್ತರ ಪದವಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನ ಸೌಟ್ ನಲ್ಲಿ ಆಹಾರ ಬಡಿಸಿರುವುದನ್ನು ಖಂಡಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಸಚಿವ ಶಿವಚಿತ್ತಪ್ಪ ಅವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈ ಅವಾಂತರಕ್ಕೆ ಕಾರಣವಾಗಿರುವ ಅಡುಗೆ ಸಿಬ್ಬಂದಿಯ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗಮನಹರಿಸಲಾಗುವುದು. ಹಾಸ್ಟೆಲ್ ಸಿಬ್ಬಂದಿ ಮತ್ತು ಮೇಲ್ವಿಚಾರಕರನ್ನು ಬದಲಾವಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಳೆದ ಮೂರು ದಿನಗಳ ಹಿಂದೆ ಸಾಂಬಾರ್ ಬಡಿಸುವ ಸ್ಟೀಲ್ ಸೌಟ್ ನಾಪತ್ತೆಯಾಗಿದೆ ಎಂದು ಭಟ್ಟರು ತೆಂಗಿನ ಚಿಪ್ಪಿನಲ್ಲೇ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಸಾಂಬರು ಬಡಿಸಿದ್ದಾರೆ. ಮೂರು ದಿನಗಳಿಂದಲೂ ತೆಂಗಿನ ಚಿಪ್ಪಿನಲ್ಲೇ ಆಹಾರ ನೀಡುವುದನ್ನು ಖಂಡಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಿಲಯ ಪಾಲಕರು ಪ್ರತಿದಿನ ಹಾಸ್ಟೆಲ್‍ಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದು ಹಾಸ್ಟೆಲ್ ವಾರ್ಡ್‍ನ್ ಗಳ ಕರ್ತವ್ಯವಾಗಿದೆ.
ಆದರೆ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ತೆಂಗಿನ ಚಿಪ್ಪು ಬಳಸಿ ಆಹಾರ ನೀಡಿರುವುದು ಖಂಡನೀಯ. ವಿದ್ಯಾರ್ಥಿಗಳನ್ನು ಪ್ರಾಣಿಗಳಿಗಿಂತ ಅತ್ಯಂತ ಹೀನಾಯವಾಗಿ ನಡೆಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
21ನೇ ಶತಮಾನದಲ್ಲಿಯೂ ಸಹ ಇಂತಹ ಪರಿಸ್ಥಿತಿ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದಕ್ಕೆ ಕಾರಣರಾಗಿರುವ ಅಡುಗೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ನೀಡದೆ ವಿದ್ಯಾರ್ಥಿಗಳಿಗೆ ವಂಚಿಸಲಾಗುತ್ತಿದೆ. ಮತ್ತು ಗುಣಮಟ್ಟ ಆಹಾರ ಕೇಳಿದ ವಿದ್ಯಾರ್ಥಿಗಳ ಮೇಲೆ ನಿಲಯ ಪಾಲಕರು ಮತ್ತು ಕೆಲ ಸಿಬ್ಬಂದಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಆಂತರಿಕ ಅಂಕಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಪ್ರಸಂಗಗಳು ನಡೆಯುತ್ತಿವೆ. ಇಂತಹ ಬೆದರಿಕೆ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಎಸ್‍ಎಫ್‍ಐ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನು ಸರಿಪಡಿಸಲು ಮುಂದಾಗದಿದ್ದರೆ ವಿವಿ ಮುತ್ತಿಗೆ ಕಾರ್ಯಕ್ರಮವನ್ನು ಎಸ್‍ಎಫ್‍ಐ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಸ್‍ಎಫ್‍ಐ ಸದಸ್ಯ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯ ತರಗತಿಗಳು ನಡೆಯುವವರೆಗೂ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಮುಂದುವರಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೂ
ತೊಂದರೆಯಾಗದ ರೀತಿಯಲ್ಲಿ ನಿಲಯ ಪಾಲಕರು ಗಮನಹರಿಸಬೇಕು. ನಮ್ಮಿಂದ ಯಾವುದೇ ತಪ್ಪಾದರೂ ಸಹ ಅವರು ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ವಿದ್ಯಾರ್ಥಿಗಳಾದ ನರಸಿಂಹಮೂರ್ತಿ ದೊಡ್ಮನೆ, ಬಾಬು.ಡಿ ಮತ್ತು ವೆಂಕಪ್ಪ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಹಳ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು ನಮಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಹಾಸ್ಟೆಲ್‍ನಲ್ಲಿ ದಾಖಲಾಗದೇ ಇರುವಂತಹ ವ್ಯಕ್ತಿಗಳ ಹಾವಳಿಯು ಸಹ ಹೆಚ್ಚಳವಾಗಿದೆ. ಇದರಿಂದ ಹಲವಾರು ಸಂದರ್ಭದಲ್ಲಿ ಗಲಾಟೆಗಳು ಸಹ ನಡೆಯುತ್ತಿವೆ. ಆದ್ದರಿಂದ ವಿಶ್ವವಿದ್ಯಾಲಯವು ನಮಗೆ ರಕ್ಷಣೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ನಗರಾಧ್ಯಕ್ಷ ಶಶಿ ವರ್ಧನ್, ಎಂ.ಆರ್. ತ್ಯಾಗರಾಜು, ಶಿವಲಿಂಗ, ಶಿವರಾಜು, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು.

(Visited 3 times, 1 visits today)