ತುಮಕೂರು :

      ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಯನ್ನು ಮುಟ್ಟಲು ಶಿಕ್ಷಣವು ಪ್ರಮುಖ ಸಾಧನವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅತೀಕ್ ಅಭಿಪ್ರಾಯ ವ್ಯಕ್ತಪಡಿಸಿದರು.

      ತುಮಕೂರು ನಗರದ ಪಿ.ಹೆಚ್.ಕಾಲೋನಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಖುರ್ಷಿದ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೋಟ್ ಬುಕ್ ಹಾಗೂ ಕಂಪ್ಯೂಟರ್ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,
ವಿದ್ಯೆಯು ಸಾಧಕನ ಸ್ವತ್ತು. ಶಾಲೆಗೆ ಹೋಗುವ ಮೂಲಕ ಸತತ ಪರಿಶ್ರಮದಿಂದ ಸಾಧಿಸಿದಾಗ ಮಾತ್ರ ವಿದ್ಯೆ ನಮಗೆ ಒಲಿಯುತ್ತದೆ. ಇಂದಿನ ಮಕ್ಕಳೇ ನಾಳೆಯ ಭವ್ಯ ಭಾರತದ ಪ್ರಜೆಗಳು. ಕೆಲವರಿಗೆ ಶಾಲೆಗೆ ಹೋಗಲು ಆಸಕ್ತಿ ಇದ್ದರೂ ಅವಕಾಶ ಸಿಗುವುದಿಲ್ಲ. ಆದರೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಪೋಷಕರ ಆಸೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಎಂದರು.

      ವಿದ್ಯೆಗಾಗಿ, ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ವಿದೇಶಗಳಿಗೆ ಹೋದರೂ ತಪ್ಪಿಲ್ಲ. ಜ್ಞಾನವು ವಿಶಾಲವಾದುದು. ಅದನ್ನು ಪಡೆಯಲು ಎಲ್ಲರೂ ಮುಂದಾಗಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ವ್ಯಾಸಂಗ ಮಾಡುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು.

       ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾಕಲ್ಯಾಣ್ ಮಾತನಾಡುತ್ತಾ, ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಒಬ್ಬ ವ್ಯಕ್ತಿ ಇಂದು ರಾಜ್ಯ ಸರ್ಕಾರದ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ಮಾರ್ಗದರ್ಶನ ತಮಗೆಲ್ಲಾ ದಾರಿದೀಪ ಎಂದು ಬಣ್ಣಿಸಿದರು.

      ವ್ಯಾಸಂಗದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದುವುದು ಬಿಟ್ಟರೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ವಿದ್ಯಾರ್ಥಿ ಜೀವನವನ್ನು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಮೀಸಲಿಟ್ಟು ನಿಗಧಿತ ಗುರಿ ಮುಟ್ಟಲು ಸತತ ಪರಿಶ್ರಮಪಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

      ಸರ್ಕಾರಿ ಪೌಢಶಾಲೆಯ ಮುಖ್ಯ ಶಿಕ್ಷಕಿ ಅಸ್ಮಾ ತಬಸುಂ ಅವರು, ಶಾಲೆಗೆ ಸ್ವಂತ ಕಟ್ಟಡವಿಲ್ಲದೆ ವಕ್ಫ್ ಬೋರ್ಡ್ ಕಟ್ಟಡದಲ್ಲಿ ಕಳೆದ 25 ವರ್ಷಗಳಿಂದ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಶಾಲೆಗೆ ಸ್ವಂತ ನಿವೇಶನ ನೀಡುವಂತೆ ನೆರೆದಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಖುರ್ಷಿದ್ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸಾದುಲ್ಲಾ ಖಾನ್, ಪಾಯಿಜ ಅತೀಕ್, ತುಮಕೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್ ಸೇರಿದಂತೆ ಖುರ್ಷಿದ್ ಫೌಂಡೇಶನ್ನ ಸದಸ್ಯರು, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

      ಗೇರಹಳ್ಳಿ ಸರ್ಕಾರಿ ಶಾಲೆಗೆ ಭೇಟಿ: ನಂತರ ತುಮಕೂರು ತಾಲ್ಲೂಕು ಕೋರ ಹೋಬಳಿ ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ಹಾಗೂ ಕಂಪ್ಯೂಟರ್ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

(Visited 9 times, 1 visits today)