ತುಮಕೂರು:

       ಸಮಾಜದಲ್ಲಿ ಕಸುಬಿನ ಮೂಲಕ ಜಾತಿಗಳು ಮಾರ್ಪಟ್ಟಿದ್ದರೂ, ತನ್ನ ಕಾಯಕದ ಮೂಲಕ ಸಮಾಜವನ್ನು ಬದಲಾಯಿಸುವ ಧ್ಯೇಯ ಹೊಂದಿದ್ದ ಏಕೈಕ ದಾರ್ಶನಿಕ ನಿಜಶರಣ ಅಂಬಿಗ ಚೌಡಯ್ಯ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಗಂಗಾ ಮತಸ್ಥರ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯ. ಸಮಾಜದಲ್ಲಿರುವ ಏರು-ಪೇರುಗಳನ್ನು ತನ್ನ ವಚನದ ಮೂಲಕ ಕಟುವಾಗಿ ಟೀಕಿಸಿದ ಮಹಾನ್ ದಾರ್ಶನಿಕ ಅಂಬಿಗ ಚೌಡಯ್ಯ. ಗಂಗಾಮತಸ್ಥರ ಸಮುದಾಯಕ್ಕೆಂದು ಸರ್ಕಾರ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಸಿಕೊಳ್ಳುವುದರ ಮೂಲಕ ಈ ಸಮಾಜದ ಯುವಜನತೆ ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ವಿಮರ್ಶಕ ಡಾ|| ರವಿಕುಮಾರ್ ನೀಹ ಉಪನ್ಯಾಸ ನೀಡುತ್ತಾ ಬೇರೆ ಶರಣರಗಿಂತ ವಿಶಿಷ್ಟವಾದವನು ಈ ಅಂಬಿಗ ಚೌಡಯ್ಯ. ಈತನ 280 ವಚನಗಳು ಇಂದಿಗೂ ಪ್ರಸ್ತುತ. ಕೇವಲ ನಾಲಿಗೆಯಲ್ಲಿ ಶಿವನಸ್ಮರಣೆ ಮಾಡಿದರೆ ಶಿವಭಕ್ತನಾಗುವುದಿಲ್ಲ. ಭಕ್ತಿಯೆಂಬುದು ಅಂತರಂಗದಲ್ಲಿ ಮೂಡಬೇಕು ಎಂಬ ನೇರ ಮಾತಿನಿಂದ ಉತ್ತರ ನೀಡುತ್ತಿದ್ದವನೇ ಈ ನಿಜಶರಣ ಅಂಬಿಗ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕು ಪಂಚಾಯಿತಿ ಸದಸ್ಯ ಎಂ.ಡಿ ರವಿಕುಮಾರ್, ಕಣ್ಣಿನ ತಜ್ಞ ಡಾ|| ವಿಶ್ವನಾಥ್, ಪ್ರಶಾಂತ್, ಚಂದ್ರಯ್ಯ, ಆನಂದ್, ನಾಗರಾಜು, ಶಿವಕುಮಾರ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿದ್ಧಲಿಂಗಯ್ಯ ಹಿರೇಮಠ ಮತ್ತು ತಂಡದವರಿಂದ “ಅಂಬಿಗ ನಾ ನಿನ್ನ ನಂಬಿದೆ” ಎಂಬ ಭಕ್ತಿಗೀತೆಗಳ ಗಾಯನವನ್ನು ಹಾಡಿದರು.

      ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ಎಂ.ಟಿ ಸತ್ಯನಾರಾಯಣ, ಎಂ.ನಾರಾಯಣ, ಕಾರ್ಯದರ್ಶಿ ಡಿ.ಕೃಷ್ಣಪ್ಪ, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

       ಇದಕ್ಕೂ ಮುನ್ನ ಟೌನ್‍ಹಾಲ್ ವೃತ್ತದಿಂದ ಬಾಲಭವನದವರೆಗೂ ವಿವಿಧ ಜಾನಪದ ಕಲಾತಂಡದೊಂದಿಗೆ ಏರ್ಪಡಿಸಿದ್ದ ಅಂಬಿಗ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಗೆ ಜ್ಯೋತಿ ಗಣೇಶ್ ಚಾಲನೆ ನೀಡಿದರು.

(Visited 54 times, 1 visits today)