ತುಮಕೂರು:

      ಅಭಿವೃದ್ಧಿಯ ದೃಷ್ಠಿಯಿಂದ ಸರ್ಕಾರ ತುಮಕೂರಿಗೆ ಸ್ಮಾರ್ಟ್‍ಸಿಟಿಯನ್ನು ಘೋಷಿಸಿದೆ. ಆದರೆ ತುಮಕೂರು ನಗರದ ಹೃದಯ ಭಾಗದ ಅಂತರಸನಹಳ್ಳಿಯಲ್ಲಿ ಕೋಳಿ ಮಾಂಸದ ಕಸದ ರಾಶಿರಾಶಿ ರಸ್ತೆ ಪಕ್ಕ ಬಿದಿದ್ದರೂ ಅಧಿಕಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲವೆಂಬಂತೆ ಸುಮ್ಮನಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.

      ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಇತ್ತೀಚೆಗಷ್ಟೇ ನಗರದ ಸಿಟಿ ಮಾರುಕಟ್ಟೆಯಲ್ಲಿ ಜಾಗ ಸಾಕಾಗುವುದಿಲ್ಲ ಎಂದು ತುಮಕೂರು ನಗರದ ಅಂತರಸನಹಳ್ಳಿಯ ಬಳಿಯಿರುವ ವಿಶಾಲವಾದ ಸ್ಥಳಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರಿಸಿದ್ದರು. ಆದರೆ ಇದೇ ಸ್ಥಳದಲ್ಲಿ ಮಾಂಸದ ತ್ಯಾಜ್ಯವನ್ನು ತಮ್ಮ ಮನಸ್ಸಿಗೆ ಬಂದಂತೆ ರಸ್ತೆಯ ಪಕ್ಕದಲ್ಲಿ ಎಸೆದು ಹೋಗುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ತಮಗೇನೂ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.

      ಅಂತರಸನಹಳ್ಳಿಯ ಬೆಂಗಳೂರು ಮಾರ್ಗದ ಕಡೆಯಿರುವ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಮಾಂಸದ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಎಷ್ಟೋ ಬಾರಿ ಈ ಬಗ್ಗೆ ದೂರುಗಳನ್ನು ನೀಡಿದ್ದರೂ ಸಹ ತಮಗೇನೂ ಸಂಬಂಧವಿಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇನ್ನೂ ಜನಪ್ರತಿನಿಧಿಗಳು ಕೈಮುಗಿದು ಓಟು ಕೇಳಿ ನಂತರ ಸಾರ್ವಜನಿಕರೇ ಕೈ ಮುಗಿಯುತ್ತಿದ್ದರೂ ಇಲ್ಲಿನ ಸಮಸ್ಯೆ ಆಲಿಸುತ್ತಿಲ್ಲ.

       ರಾತ್ರಿಯ ಸಮಯದಲ್ಲಿ ಕೋಳಿ ಮತ್ತು ಮಾಂಸದ ತ್ಯಾಜ್ಯದ ವಾಸನೆ ಕುಡಿದು ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ವಾಸನೆಯಲ್ಲಿ ಬದುಕುವಂತಹ ಪರಿಸ್ಥಿತಿ ಇಲ್ಲಿನ ಅಕ್ಕಪಕ್ಕದವರದ್ದು. ಕೊರೋನಾ ಸಂದರ್ಭದಲ್ಲಿ ರಸ್ತೆಯಪಟ್ಟ ಬೇಕಾಬಿಟ್ಟಿ ಕಸವನ್ನು ಎಸೆದು ಹೋಗುತ್ತಿರುವುದನ್ನು ಗಮನಿಸಿದರೆ ದಿನನಿತ್ಯ ಭಯದ ವಾತಾವರಣ ಉಂಟಾಗುತ್ತಿದೆ ಎಂದು ಇಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ.

       ಹಲವಾರು ಭಾರಿ ಮಹಾ ನಗರಪಾಲಿಕೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ವಿಷಯ ತಿಳಿಸಿದ್ದೇವೆ. ಆದರೂ ಸಹ ಕ್ರಮ ಕೈಗೊಂಡಿಲ್ಲ. ಇದೇ ಕಸವನ್ನು ಶಾಸಕರು, ಕಾರ್ಪೋರೇಟರ್ ಮನೆಗಳ ಮುಂದೆ ತೆಗೆದುಕೊಂಡು ಹಾಕಿದರೆ ಅವರಿಗೆ ಕಷ್ಟ ಅರ್ಥವಾಗುತ್ತದೆಯೇ ಎಂದು ಕಾದು ನೋಡಬೇಕು ಎಂದು ಇಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

(Visited 3 times, 1 visits today)