ಹುಳಿಯಾರು:

      ಶ್ರೀಮಂತರು ತಿನ್ನುವ ಹಣ್ಣು ಎಂದೇ ಕರೆಯಲ್ಪಡುವ ಸೇಬು ಹಣ್ಣಿನ ಬೆಲೆ ಕಳೆದ ಒಂದು ವಾರದಿಂದ ಕುಸಿತ ಕಂಡಿದ್ದು ಹುಳಿಯಾರಿನಲ್ಲಿ ಸೇಬು ಹಣ್ಣಿನ ಮಾರಾಟ ಗಲ್ಲಿಗಲ್ಲಿಯಲ್ಲೂ, ಹೆಜ್ಜೆಹೆಜ್ಜೆಗೂ ಭರ್ಜರಿಯಾಗಿ ನಡೆಯುತ್ತಿದೆ. ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಿ ಹಣ್ಣು ಹುಳಿಯಾರಿಗೆ ಬರುತ್ತಿದ್ದು ಬೆಂಗಳೂರು, ಚಿತ್ರದುರ್ಗದ ಮಾರುಕಟ್ಟೆಯಿಂದ ಇಲ್ಲಿಗೆ ಸರಬರಾಜಾಗುತ್ತಿದೆ.

    ಕಳೆದ ಹತ್ತದಿನೈದು ದಿನಗಳ ಹಿಂದಷ್ಟೆ ಕೆಜಿ ಸೇಬಿಗೆ 120 ರಿಂದ 150 ರೂ. ಇದ್ದ ಬೆಲೆ ಈಗ ಶೀತದ ಕಾರಣಕ್ಕೆ ಸೇಬು ತಿನ್ನುವವರ ಸಂಖ್ಯೆ ತೀರಾ ಕಡಿಮೆಯಾಗಿ ಬೇಡಿಕೆ ಕುಸಿದಿದೆ. ಪರಿಣಾಮ ಕೆ.ಜಿ ಗೆ 80 ರೂ. ರಿಂದ 120 ರೂ ವರೆಗೆ ಮಾರಾಟವಾಗುತ್ತಿದೆ. ಐದಾರು ಕೆಜಿ ಕೊಂಡರೆ ಇನ್ನೂ ಕಡಿಮೆ ಬೆಲೆಗೆ ಕೊಡುತ್ತಿದ್ದಾರೆ.

      ಪರಿಣಾಮ ಪಟ್ಟಣದ ಬಸ್ ನಿಲ್ದಾಣ, ರಾಜಕುಮಾರ್ ರಸ್ತೆ, ರಾಮಗೋಪಾಲ್ ಸರ್ಕಲ್, ಬಿ.ಎಚ್.ರಸ್ತೆ ಎಲ್ಲಾ ಕಡೆ ಸೇಬುಹಣ್ಣಿನ ಮಾರಾಟವೆ ಕಾಣುತ್ತಿದೆ. ಸಾಲದಕ್ಕೆ ತಳ್ಳುವ ಗಾಡಿಯಲ್ಲಿ ಸೇಬಿನ ರಾಶಿ ಹಾಕಿಕೊಂಡು ತಿರುಗಿ ಮಾರಾಟ ಮಾಡುತ್ತಿರುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ. ಕೋವಿಡ್ 19 ರಿಂದ ಉದ್ಯೋಗ ಕಳೆದುಕೊಂಡ ಬಹುತೇಕ ಮಂದಿ ಸೇಬು ಮಾರಾಟಕ್ಕಿಳಿದಿದ್ದಾರೆ.
ಸೇಬು ಹಣ್ಣಿನ ಬೆಲೆ ಕುಸಿದಿರುವುದು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸದ್ಯಕ್ಕೆ ಅನುಕೂಲವಾಗಿದೆ ಪರಿಣಮಿಸಿದೆ. ಸೇಬನ್ನು ಖುಷಿಯಿಂದಲೇ ಮಕ್ಕಳಿಗೆ ಕೊಡಿಸುವಂತಾಗಿದೆ. ಆದರೆ ಸೇಬಿನ ಬೆಲೆ ಕುಸಿದಿರುವ ಸಂಗತಿ ತಿಳಿಯದೆ ಶ್ರೀಮಂತರ ಹಣ್ಣು ಎನ್ನುವ ಕಾರಣಕ್ಕೆ ಬಡವರು, ಕೃಷಿ ಕೂಲಿಕಾರರು, ಕಾರ್ಮಿಕರು ಹಣ್ಣಿನ ಅಂಗಡಿಗಳ ಕಡೆ ಬಾರದಾಗಿದ್ದಾರೆ ಎನ್ನುತ್ತಾರೆ ವ್ಯಾಪಾರಿ ನದೀಮ್.
ಸೇಬು ಔಷಧೀಯ ಗುಣಧರ್ಮ ಹೊಂದಿದ್ದು ಗಭೀರ್ಣಿಯರು, ಬಾಣಂತಿಯರು ಮತ್ತು ರಕ್ತಹೀನತೆ, ಮಕ್ಕಳ ಬುದ್ದಿ ಶಕ್ತಿ ವೃದ್ಧಿಗೆ ರಾಮಬಾಣವಾಗಿದೆ. ಅಲ್ಲದೆ ದೇಹದಲ್ಲಿ ಅನಗತ್ಯವಾಗಿ ಸಂಗ್ರಹವಾಗುವ ಟಾಕ್ಸಿನ್ ನಿವಾರಿಸುವ ಶಕ್ತಿ ಸೇಬಿಗಿದೆ. ಕಾನ್ಸರ್ ತಡೆಗಟ್ಟುವ ಹಾಗೂ ಚರ್ಮ ಸಂಬಂಧಿ ಖಾಯಿಗೆ ಸೇಬು ಒಳ್ಳೆಯದು. ಹಾಗಾಗಿ ಸಸ್ತಾ ಇರುವಾಗ ಹೆಚ್ಚು ತಿನ್ನುವುದು ಒಳಿತು ಎನ್ನುತ್ತಾರೆ ಆಯುರ್ವೇದ ವೈದ್ಯ ಬಸವರಾಜ ಪಂಡಿತ್.

(Visited 8 times, 1 visits today)