ತುಮಕೂರು:

      ಸಿರಾ ತಾಲ್ಲೂಕು ಕಲ್ಲುಕೋಟೆ ಗ್ರಾಮದ ಹೆಚ್.ಪಿ. ಪೆಟ್ರೋಲ್ ಬಂಕ್ ಪಕ್ಕದಲ್ಲಿ ಜನವರಿ 20ರಂದು ಎರಡು ಟ್ಯಾಂಕರ್‍ಗಳಿಂದ ಮದ್ಯಸಾರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

      ಬಂಧಿತ ಆರೋಪಿಗಳಿಂದ 92,00,950ರೂ ಮೌಲ್ಯದ 48,910 ಲೀಟರ್ ಮದ್ಯ ಸಾರ ಹಾಗೂ 2 ಟ್ಯಾಂಕರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಉಪ ಆಯುಕ್ತ ಜೆ.ಗಿರಿ ಇವರ ಮಾರ್ಗದರ್ಶನದಲ್ಲಿ ತಿಪಟೂರು ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ. ರಂಗಪ್ಪ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಎ.ಕೆ.ನವೀನ್ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

      ತಿಪಟೂರು ನಗರದ ಹೊರ ವಲಯದಲ್ಲಿರುವ ಅಣ್ಣಾಪುರ ಗೇಟ್‍ನಲ್ಲಿ 2018ರ ಡಿಸೆಂಬರ್ 29ರಂದು ಟಾಟಾ ಸುಮೋ ಮತ್ತು 25 ರಟ್ಟಿನ ಪೆಟ್ಟಿಗೆಯಲ್ಲಿ 216 ಲೀ. ಅಕ್ರಮ ನಕಲಿ ಮದ್ಯವನ್ನು ಜಪ್ತಿಮಾಡಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಈ ಮೊಕದ್ದಮೆಗೆ ಸಂಬಂಧಿಸಿದಂತೆ ಜನವರಿ 16ರಂದು ತಿಪಟೂರು ಟೌನ್, ಹಳೆಪಾಳ್ಯ ಪೋಸ್ಟ್ ಬಳಿ ಬಂಧಿಸಲಾದ ಹರೀಶ್ ಮತ್ತು ಸುರ್ಜಿತ್ ಎಂಬ ಇಬ್ಬರು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಜನವರಿ 20ರಂದು ಕಲ್ಲುಕೋಟೆ ಗ್ರಾಮದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

(Visited 47 times, 1 visits today)