ತುಮಕೂರು:

      ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ನಿರ್ಮಾಣ ಕಾಮಗಾರಿಯು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ನವೆಂಬರ್ ೧೮ ರಿಂದ ಜೆಸಿ ರಸ್ತೆಯಲ್ಲಿರುವ ಕೆಸ್ಸಾರ್ಟಿಸಿ ಘಟಕ ೧ ರ ಸ್ಥಳಕ್ಕೆ ತಾತ್ಕಾಲಿಕವಾಗಿ ಬಸ್ಸು ನಿಲ್ದಾಣವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಕೆಸ್ಸಾರ್ಟಿಸಿ, ಸ್ಮಾರ್ಟ್ ಸಿಟಿ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ತುಮಕೂರು ನಗರದಲ್ಲಿರುವ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣವನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲು ಸ್ಮಾಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯು ಪೂರ್ಣ ಗೊಳ್ಳುವರೆಗೂ ಈಗಿರುವ ಬಸ್ಸು ನಿಲ್ದಾಣದ ಹತ್ತಿರದಲ್ಲಿರುವ ಜೆಸಿ ರಸ್ತೆಯ ಕೆಸ್ಸಾರ್ಟಿಸಿ ಬಸ್ಸು ಡಿಪೋ ಸ್ಥಳಕ್ಕೆ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿ ಅಲ್ಲಿಂದ ಬಸ್ಸುಗಳನ್ನು ಓಡಿಸಿದರೆ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂಬುದರ ಬಗ್ಗೆ ಚರ್ಚಿಸಿ ಈ ನಿರ್ದಾರ ಕೈಗೋಳ್ಳಲಾಗಿದೆ ಎಂದರು.

      ಬಸ್ಸುಗಳು ಹೊಸ ಸ್ಥಳದಿಂದ ಕಾರ್ಯಾಚರಣೆ ಆರಂಭಿಸುವ ಮೊದಲು ಅಶೋಕ ರಸ್ತೆ, ಜೆಸಿ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿದಂತೆ ನಿಲ್ದಾಣವನ್ನು ಸಂಧಿಸುವ ರಸ್ತೆಗಳು ಸ್ವಚ್ಛವಾಗಿ ರಬೇಕು ಹಾಗೂ ಬಸ್ಸುಗಳ ಸಂಚಾರಕ್ಕೆ ಸಮರ್ಪಕವಾಗಿರುವಂತೆ ನವೆಂಬರ್ ೧೫ರೊಳಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಪೊರ್ಣಗೋಳಿಸಬೇಕು ಎಂದು ಸ್ಮಾಟ್‌ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜೆಸಿ ರಸ್ತೆ, ಪ್ರಶಾಂತ ಚಿತ್ರಮಂದಿರ ರಸ್ತೆ, ಕೆನರಾಬ್ಯಾಂಕ್ ರಸ್ತೆ ಹಾಗೂ ಆಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮುಕ್ತ ರಸ್ತೆಯನ್ನಾಗಿ ಘೋಷಿಸಬೇಕಾಗಿದೆ. ಗುಬ್ಬಿವೀರಣ್ಣ ಕಲಾ ಕ್ಷೇತ್ರದ ರಸ್ತೆಯಲ್ಲಿ ಕ್ಯಾಂಟರ್‌ಗಳು ಗೂಡ್ಸ್ ವಾಹನಗಳ ನಿಲ್ದಾಣವಿದ್ದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ವಾಹನಗಳು ಟ್ರಕ್ ಟರ್ಮಿನಲ್ಲಿ ನಿಲುಗಡೆ ಮಾಡಿಕೊಳ್ಳಲ್ಲಿ ನಗರದ ಒಳಗಡೆ ದೊಡ್ಡ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿಲ್ಲ ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕು ಗಳನ್ನು ತರುವ ದೊಡ್ಡ ವಾಹನಗಳಿಗೆ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಿದರೆ ಸೂಕ್ತ. ಇದರಿಂದ ನಗರದ ಸಂಚಾರ ದಟ್ಟಣೆಯನ್ನು ತಡೆಗಟ್ಟಬಹುದು. ಈ ಕುರಿತು ಅಧಿಸೂಚನೆ ಹೊರಡಿಸಲು ಸೂಕ್ತ ಪ್ರಸ್ತಾವನೆಯನ್ನು ಇನ್ನೆರಡು ದಿನಗಳಲ್ಲಿ ಸಲ್ಲಿಸುವಂತೆ ತುಮಕೂರು ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

     ಬಸ್ಸು ನಿಲ್ದಾಣದ ಬದಲಾವಣೆ ಹಾಗೂ ರಸ್ತೆ ಮಾರ್ಗದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ರೂಟ್‌ಮ್ಯಾಪ್‌ನ ಬಗ್ಗೆ ೩೦ ಸೆಕೆಂಡಿನ ವಿಡೀಯೋವನ್ನು ಸಿದ್ದಪಡಿಸಿ ವಾಟ್ಸಾಪ್ ಗ್ರೂಫ್‌ಗಳಲ್ಲಿ ಶೇರ್ ಮಾಡಿ ಎಂದು ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ತಾತ್ಕಾಲಿಕ ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡಂತೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದಲ್ಲಿ ಆಟೋಗಳಿಗೆ ನಿಲ್ದಾಣವನ್ನು ಕಲ್ಪಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

      ನಿರ್ಮಾಣ ಕಾಮಗಾರಿ ಕೈಗೊಂಡಿರುವ ಎಂ.ಜಿ.ಕ್ರೀಡಾಂಗಣ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕಾಂಕ್ರೀಟ್, ಜಲ್ಲಿ ಸೇರಿದಂತೆ ಅವಶ್ಯಕತೆಯಿರದ ತ್ಯಾಜ್ಯ ವಸ್ತುಗಳನ್ನು ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿ ಗುರ್ತಿಸಿರುವ ಪ್ರದೇಶದಲ್ಲಿ ಸುರಿಯುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದ ಅವರು ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಮಾಡಲು ಚಿಂತಿಸಲಾಗಿದೆ ಎಂದರು.

     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ವಂಶಿಕೃಷ್ಣ, ಕೆಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಸೇರಿದಂತೆ ಸ್ಮಾರ್ಟ್ಸಿಟಿ, ಕೆಸ್ಸಾರ್ಟಿಸಿ ಅಧಿಕಾರಿಗಳು ಹಾಜರಿದ್ದರು.

(Visited 53 times, 1 visits today)