ತುಮಕೂರು:
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಗಿರಿರಾಜ್ ಸಿಂಗ್ ಅವರು ಜಿಲ್ಲೆಯ ಬೆಳ್ಳಾವಿ ಹೋಬಳಿ ಮಷಣಾಪುರ ಗ್ರಾಮದ ಪ್ರಗತಿಪರ ರೈತ ಎಂ.ಎಸ್. ಮೃತ್ಯುಂಜಯ ಅವರ ತೋಟಕ್ಕೆ ಭೇಟಿ ನೀಡಿ ಸಮಗ್ರ ಸಾವಯವ ಕೃಷಿ ವ್ಯವಸ್ಥೆಯಡಿ ಬೆಳೆದಿರುವ ವಿವಿಧ ತೋಟಗಾರಿಕಾ ಮಿಶ್ರ ತಳಿ ಬೆಳೆಗಳನ್ನು ವೀಕ್ಷಿಸಿದರು.
ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಅಡಿಕೆ, ಮೆಣಸು, ಏಲಕ್ಕಿ, ಕಾಫಿ, ಸಪೋಟ, ಸೀಬೆ, ಮಾವು, ಡ್ರ್ಯಾಗನ್ ಫ್ರೂಟ್, ರೋಸ್‍ಆ್ಯಪಲ್, ಮಲೆಯನ್ ಆ್ಯಪಲ್, ಎಗ್‍ಪ್ರೂಟ್, ಜಾಕಾಯಿ ಸೇರಿದಂತೆ 250ಕ್ಕೂ ಹೆಚ್ಚು ದೇಸಿ-ವಿದೇಶಿ ಫಲ-ಪುಷ್ಪ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದು, ರೈತ ಎಂ.ಎಸ್. ಮೃತ್ಯುಂಜಯ ಅವರ ಮಗ ಕೇಶವಸ್ವಾಮಿ ಅವರೊಂದಿಗೆ ತೋಟಕ್ಕೆ ತೆರಳಿದ ಸಚಿವರು ಪ್ರತಿಯೊಂದು ಬೆಳೆಯ ಬಗ್ಗೆಯೂ ತೀವ್ರ ಕುತೂಹಲದೊಂದಿಗೆ ಮಾಹಿತಿ ಪಡೆದರು.
ನಂತರ ಸಚಿವರು, ಸದರಿ ರೈತ ಮಾಡಿರುವ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದರಿ ರೈತ ತೆಂಗು, ಅಡಿಕೆಯಂತಹ ದೀರ್ಘಾವಧಿ ಬೆಳೆಗಳ ನಡುವೆ ಮಿಶ್ರ ಬೆಳೆಗಳನ್ನು ಬೆಳೆದು ವಾರ್ಷಿಕ 20ಲಕ್ಷ ರೂ.ಗಳಿಗೂ ಹೆಚ್ಚು ಲಾಭ ಗಳಿಸಿದ್ದಾರೆ ಎಂದರಲ್ಲದೆ, ರೈತನ ಸಾಧನೆಯನ್ನು ಸ್ಥಳೀಯ ಗ್ರಾಮಪಂಚಾಯತಿಯು ಗುರುತಿಸಿ ರೈತನು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಗಳ ಬಗ್ಗೆ ಇತರ ರೈತರಿಗೂ ತಿಳಿಯುವಂತೆ ಹೆಚ್ಚಿನ ಪ್ರಚಾರ ಕೈಗೊಂಡು ತರಬೇತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಮೃತ್ಯುಂಜಯ ಅವರ ತೋಟದಲ್ಲಿ ಬೆಳೆಸಿರುವ ಅಂಜೂರ ಮರವು ಸುಮಾರು 10 ವರ್ಷದ್ದಾಗಿದ್ದು, 2 ರಿಂದ 3 ಕ್ವಿಂಟಾಲ್ ಹಣ್ಣು ಉತ್ಪಾದನೆ ಮಾಡುತ್ತಿದ್ದು, ಕೆ.ಜಿ.ಗೆ 100ರೂ.ಗಳಂತೆ ವಹಿವಾಟು ಮಾಡಿ ಲಾಭವನ್ನು ಗಳಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ರೈತ ಕೇಶವಸ್ವಾಮಿ ನೆನಪಿನ ಕಾಣಿಕೆಯಾಗಿ ಅಂಜೂರದ ಸಸಿಯನ್ನು ಸಚಿವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಚಿವರು ರೈತನ ತೋಟದಲ್ಲಿ ಬಾದಾಮಿ ಸಸಿಯನ್ನು ನೆಟ್ಟು ನೀರೆರೆದರು. ತದ ನಂತರ ಸಾತೇನಹಳ್ಳಿ ಗ್ರಾಮದ ಜಲಾನಯನ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಮೊದಲಿಗೆ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದಂತಹ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ವೀಕ್ಷಿಸಿ, ಇದರಿಂದ ಬರುವಂತಹ ಲಾಭಾಂಶದ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದರು. ರೈತ ಉತ್ಪಾದಕ ಸಂಘ, ಸ್ವ-ಸಹಾಯ ಸಂಘ ಮತ್ತು ಸ್ಥಳೀಯ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಶ್ರೀಗಂಧ ಕೃಷಿಯು ಅತ್ಯಂತ ಲಾಭದಾಯಕ ಎಂದ ಸಚಿವರು, ಶ್ರೀಗಂಧ ಮತ್ತು ತೇಗ ಬೆಳೆಯುವ ಬಗ್ಗೆ ರೈತರ ಅಭಿಪ್ರಾಯವನ್ನು ಆಲಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ರೈತರು, ಶ್ರೀಗಂಧ ಬೆಳೆಯು ಕೈಗೆ ಬರಲು 20 ವರ್ಷ ಕಾಯಬೇಕು. ಅಲ್ಲದೆ ಮರ ಬೆಳೆದಂತೆಲ್ಲಾ ಕಳ್ಳರ ಉಪಟಳ ಹೆಚ್ಚು ಎಂದು ಸಚಿವರಿಗೆ ವಿವರಿಸಿದರು.
ತದ ನಂತರ ಸಚಿವರು ಮಾತನಾಡಿ, ಕೇವಲ 3 ವರ್ಷದಲ್ಲಿ ಶ್ರೀಗಂಧದ ಬೀಜ ಲಭ್ಯವಾಗಿ ಅದರಿಂದ ಎಣ್ಣೆಯನ್ನು ಉತ್ಪಾದಿಸಿ ರೈತರು ಲಾಭ ಪಡೆಯಬಹುದು. ಶ್ರೀಗಂಧ ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಮನವರಿಕೆ ಮಾಡಿದರು.
ಈ ಸಂದರ್ಭ ಸಚಿವರು ರೈತ ಮೃತ್ಯುಂಜಯ ಅವರ ತೋಟದ ಎಳನೀರು, ಹಲಸಿನ ಹಣ್ಣು ಸವಿದರು.
ಸಂಸದರಾದ ಜಿ.ಎಸ್. ಬಸವರಾಜು, ಕೇಂದ್ರ ಭೂ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಜಯ್ ತಿರ್ಕೆ, ಜಂಟಿ ಕಾರ್ಯದರ್ಶಿ ಉಮಾಕಾಂತ್ ಮತ್ತು ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳಾದ ವೆಂಕಟೇಶ್, ಉಮಾಮಹದೇವನ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದು ಕೇಂದ್ರ ಸಚಿವರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.

(Visited 6 times, 1 visits today)