ತುಮಕೂರು :

      ನಗರದ ಶ್ರೀ ಸಿದ್ದಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ ಸೋಂಕು ತಗುಲಿದ್ದು, ಆತನ ಜತೆ ಓದುತ್ತಿರುವವರು ಮತ್ತು ಶಿಕ್ಷಕ ವೃಂದದಲ್ಲಿ ಆತಂಕ ಸೃಷ್ಟಿಸಿದೆ.

      ಆಂಧ್ರಪ್ರದೇಶದ ಕರ್ನೂಲ್ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರಾಯಚೂರು ಮೂಲಕ ಜೂ. 15ರಂದು ಮಠಕ್ಕೆ ಬಂದಿದ್ದು ಆತನಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ನಂತರ ಕರ್ನೂಲ್ ಜಿಲ್ಲಾಡಳಿತ ಆತನಿಗೆ ಕರೊನಾ ಸೋಂಕು ತಗುಲಿರುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮಠಕ್ಕೆ ದೌಡಾಯಿಸಿದರು. ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮತ್ತೊಮ್ಮೆ ಪರೀಕ್ಷೆಗೆ ಗಂಟಲು ಸ್ರವ ಮಾದರಿ ಸಂಗ್ರಹಿಸಲಾಯಿತು.

       ಆತನೊಂದಿಗೆ ಕೊಠಡಿಯಲ್ಲಿ ಇದ್ದ ಮೂವರು ವಿದ್ಯಾರ್ಥಿಗಳನ್ನು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕಳೆದ 4 ದಿನಗಳಿಂದ ಈ ಪಾಸಿಟಿವ್ ವಿದ್ಯಾರ್ಥಿಯು ಇತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಬೆರೆತಿದ್ದಾನೆ.

      ಶಿವಕುಮಾರ ಸ್ವಾಮೀಜಿ ಶತಮಾನೋತ್ಸವ ಭವನದಲ್ಲಿ ಎಲ್ಲಾ ವಿದ್ಯಾರ್ಥಿಗಳ ಜತೆ ಒಟ್ಟಿಗೆ ಕುಳಿತು ಊಟ ಮಾಡಿದ್ದಾನೆ. ಶೌಚ, ಸ್ನಾನ ಗೃಹ ಕೂಡ ಬಳಸಿದ್ದಾನೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇಲ್ಲಿ ಒಂದು ಕಡೆ ಇರಿಸಲಾಗಿತ್ತು. ಇದು ಈಗ ಇತರ ಎಲ್ಲರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

(Visited 3,520 times, 1 visits today)