ತುಮಕೂರು


ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಅವರ ಸಂಸ್ಮರಣೆ ಅಂಗವಾಗಿ ಹುತಾತ್ಮರ ದಿನವನ್ನು ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಅಹಿಂಸೆಯನ್ನೇ ತನ್ನ ಹೋರಾಟದ ಆಸ್ತ್ರವಾಗಿಸಿಕೊಂಡು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ, ಬಡವರು, ದೀನದಲಿತರು, ಅಲ್ಸಸಂಖ್ಯಾತರು ಹಾಗೂ ಜನಸಾಮಾನ್ಯರ ಏಳಿಗೆಗೆ ದುಡಿದ ಉಕ್ಕಿನ ಮಹಿಳೆಯ ಇಂದಿರಾಗಾಂಧಿ ಹಾಗೂ ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶ ಅಭಿವೃದ್ದಿಗೆ ಮುನ್ನುಡಿ ಬರೆದ ರಾಜೀವ್‍ಗಾಂಧಿ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ,ತನ್ನ ಜೀವನದುದ್ದಕ್ಕೂ ಅಹಿಂಸೆಯನ್ನು ಪ್ರತಿಪಾದಿಸಿ,ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಜೀ ಸಾವನ್ನಪ್ಪಿದ್ದು ಹಿಂಸೆಯಿಂದ.ಇದು ಈ ದೇಶದ ದುರಂತ,ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಗಾಂಧೀಜಿಯ ಹೋರಾಟವನ್ನು ಸಹಿಸಿಕೊಂಡರು.ಆದರೆ ಸ್ವಾತಂತ್ರ ಬಂದ ನಂತರ ಒಂದು ವರ್ಷ ಕಾಲ ಅವರನ್ನು ಭಾರತೀಯರು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಂದು ಗಾಂಧಿ ಸಾವಿಗೆ ಪಿತೂರಿ ಮಾಡಿದ ವೀರ ಸಾರ್ವಕರ್ ಇಂದು ಬಿಜೆಪಿ ಪಕ್ಷದ ಪರಮಶ್ರೇಷ್ಠ ನಾಯಕ.ಈ ವಿಚಾರವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳ ಬೇಕು.ಅವರ ರೀತಿಯಲ್ಲಿಯೇ ದೇಶದ ಉಳಿವಿಗಾಗಿ ಹೋರಾಟ ನಡೆಸಿದ ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿ ಅವರು ಸಹ ಗುಂಡಿಗೆ ಬಲಿಯಾದರು.ಅವರ ಸಾವಿನ ಹಿಂದಿನ ತ್ಯಾಗ,ಬಲಿದಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಂಡು, ಅವರ ಸಾವು ವ್ಯರ್ಥವಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದರು.
ಡಿಸಿಸಿಯ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್ ಮಾತನಾಡಿ,ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಸುಮಾರು 4000 ಕಿ.ಮೀ ಹೆಚ್ಚು ಪಾದಯಾತ್ರೆ ನಡೆಸಿ ಶ್ರೀನಗರ ತಲುಪಿ ಲಾಲ್ ಚೌಕದಲ್ಲಿ ಭಾರತದ ತ್ರಿವರ್ಣ ದ್ವಜ ಹಾರಿಸಲು ಮುಂದಾದಾಗ ಹಲವರು ವಿರೋಧಿಸಿದ್ದರು.ಇದು ಖಂಡನೀಯ ಈ ದೇಶದಲ್ಲಿ ದ್ವೇಷ ಅಳಿಯಬೇಕು, ಪ್ರೀತಿ ಉದಯಿಸಲಿ ಎಂಬ ಮಹತ್ವದ ಉದ್ದೇಶ ಇಟ್ಟುಕೊಂಡು ಅವರು ನಡೆಸಿರುವ ಈ ಹೋರಾಟಕ್ಕಾಗಿ ಅವರಿಗೆ ಜಿಲ್ಲಾ ಕಾಮಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ದೇಶಕ್ಕೆ ಸ್ವಾತಂತ್ರ ತಂದುಕೊಡಬೇಕೆಂದು ಹೋರಾಟ ನಡೆಸಿದ ಮಹಾತ್ಮಗಾಂಧಿ ಗುಂಡಿಗೆ ಬಲಿಯಾದರೆ,ಪಂಜಾಬ್‍ನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ
ಉಗ್ರರ ಆಸೆಗೆ ತಣ್ಣೀರೆರಚಿ ,ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿದ ಇಂದಿರಾಗಾಂಧಿ,ಹಾಗೂ ಶ್ರೀಲಂಕಾ ಮತ್ತು ತಮಿಳಿರ ನಡುವಿನ ಯುದ್ದವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ ಕಳುಹಿಸಿ, ಪ್ರಪಂಚದಲ್ಲಿ ಶಾಂತಿ ನೆಲಸುವುದಂತೆ ಮಾಡಿದವರು ರಾಜೀವ್‍ಗಾಂಧಿ ಅವರು ಸಹ ಹುತಾತ್ಮರಾದರು.
ಇಂತಹ ಮಹನೀಯರು ನಮ್ಮ ಪಕ್ಷದ ನೇತಾರರು ಎಂಬುದ ನಾವು ಹೆಮ್ಮೆ ಪಡುವ ವಿಚಾರ.ನಾವು ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕೆಂದು ಚಂದ್ರಶೇಖರ್ ಗೌಡ ತಿಳಿಸಿದರು.
ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ,ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ,ಮುರುಳೀಧರ್ ಹಾಲಪ್ಪ, ರೇವಣ್ಣಸಿದ್ದಯ್ಯ, ಶಿವಾಜಿ,ಪ್ರಸನ್ನಕುಮಾರ್ ಅವರುಗಳು ಹುತಾತ್ಮರ ದಿನ ಕುರಿತು ಮಾತನಾಡಿದರು, ಮರಿಚನ್ನಮ್ಮ, ಡಾ.ಫಹ್ಹಾನ್, ಸುಜಾತ
ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)