ತುರುವೇಕೆರೆ:

      ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಸಾರ್ವನಿಕರ ಹಿತದೃಷ್ಟಿಯಿಂದ ಕ್ಷೇತ್ರದಾದ್ಯಂತ ಶನಿವಾರದಿಂದಲೇ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಅಂಗಡಿಮುಂಗಟ್ಟುಗಳನ್ನು ತೆರೆದು ಅನಂತರ ಜನತಾ ಕಫ್ರ್ಯೂ ಜಾರಿ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಪೊಲೀಸ್, ಆರೋಗ್ಯ ಇಲಾಖೆ ಹಾಗು ತಾಲ್ಲೂಕು ಆಡಳಿತದ ಜಂಟಿ ಸಭೆ ನಡೆಸಿ ಮಾತನಾಡಿದರು.

      ಬಾಂಬೆಯಿಂದ ಬಂದು ತಾಲ್ಲೂಕಿನಲಿ ಕ್ವಾರಂಟೈನ್‍ನಲ್ಲಿದ್ದ 4 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ತಾಲ್ಲೂಕಿನ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳಿಂದ ಸಲಹೆ ಪಡೆದು ಈ ಹಿಂದೆ ಇದ್ದ ನಿಗಧಿತ ಅವಧಿಯ ಜನತಾ ಕಫ್ರ್ಯೂವನ್ನು ಮೇ23ರಿಂದ 30 ತನಕ ಜಾರಿಗೆ ತರಲು ಎಲ್ಲರ ಒಮ್ಮತದ ಮೇರೆಗೆ ನಿರ್ಧಾರಕ್ಕೆ ಬರಲಾಗಿದೆ.

      ಔಷಧಿ ಅಂಗಡಿ, ಖಾಸಗಿ ಕ್ಲಿನಿಕ್, ಮಧುವೆ ಕಾರ್ಯಗಳು ಹಾಗು ಅಗತ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಈಗಾಗಲೇ ಘೋಷಣೆಯಾಗಿರುವಂತೆ ಭಾನುವಾರ ಪೂರ್ಣ ಜನತಾ ಕಫ್ರ್ಯೂ ಮುಂದುವರೆಯಲಿದೆ.

      ಈಗಾಗಲೇ ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ತುರುವೇಕೆರೆ ತಾಲ್ಲೂಕಿಗೆ ಬಂದವರಿಗೆ ಮೊರಾರ್ಜಿಶಾಲೆಯಲ್ಲಿ ಕ್ವಾರಂಟೈನ ಮಾಡಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಹಾಗು ಅನಾವಶ್ಯಕವಾಗಿ ತಾಲ್ಲೂಕಿನ ಓಡಾಡುವವರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಂಡದ ಬರೆ ಹಾಕಲಿದ್ದಾರೆ.

      ಬಾಂಬೆ ಮತ್ತು ಹೊರ ರಾಜ್ಯಗಳಿಂದ ತಾಲ್ಲೂಕಿಗೆ ಬರುವವರ ಸಂಖ್ಯೆ ತೀವ್ರಗೊಳ್ಳುತ್ತಿದ್ದು ಇಂತಹವರ ಬಗ್ಗೆ ಸಂಬಂಧಪಟ್ಟ ಕುಟುಂಬದವರು ಹಾಗು ಅಕ್ಕಪಕ್ಕದ ಮನೆಯವರು ತಾಲ್ಲೂಕು ಆಡಳಿತ ಹಾಗು ಪೊಲೀಸರಿಗೆ ಮಾಹಿತಿ ನೀಡುವಂತೆ ಕ್ಷೇತ್ರದಾದ್ಯಂತ ದ್ವನಿವರ್ಧಕದಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದರು.

     ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಶೀಲ್ದಾರ್‍ಗಳಾದ ಆರ್.ನಯಿಂಉನ್ನೀಸಾ, ಪ್ರದೀಪ್ ಹಿರೇಮಠ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಎಪಿಎಂಸಿ ಅಧ್ಯಕ್ಷ ನರಸಿಂಹರಾಜು, ಪಿಎಸ್‍ಐ.ಪ್ರೀತಮ್ ವಿವಿಧ ಸಂಘದ ಪದಾಧಿಕಾರಿಗಳು ಇದ್ದರು.

(Visited 10 times, 1 visits today)