ತುಮಕೂರು:

      ವರದಿಯನುಸಾರ ಜಿಲ್ಲೆಯಲ್ಲಿ 337 ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಅಂಗನವಾಡಿ ಕೇಂದ್ರಗಳು ಕೂಡಲೇ ಇಂತಹ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿರುವ “ಪೌಷ್ಠಿಕ ಪುನರ್ವಸತಿ ಕೇಂದ್ರ”(ಓಖಅ)ಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿತು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತಂತೆ ಅಧ್ಯಕ್ಷ ಡಾ: ಎನ್. ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿ ಸುಜಾತ ಹೊಸಮನಿ, ಸದಸ್ಯರಾದ ವಿ.ಬಿ. ಪಾಟೀಲ್, ಡಿ.ಜಿ.ಹಸಬಿ, ಮಂಜುಳಾಬಾಯಿ, ಬಿ.ಎ.ಮಹಮ್ಮದ್ ಅಲಿ ಅವರನ್ನೊಳಗೊಂಡ ಆಯೋಗವು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿತು.

      ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಆಹಾರ ಭದ್ರತಾ ಕಾಯ್ದೆಯು ದೇಶದಲ್ಲಿ 2013ರಲ್ಲಿಯೇ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ 2017ರ ಜುಲೈ 5ರಂದು ಆಯೋಗ ರಚನೆಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆಯೋಗ ಕಾರ್ಯಾರಂಭಿಸಿದ ನಂತರ ರಾಜ್ಯದ ಹಿಂದುಳಿದ ರಾಯಚೂರು, ಬೀದರ್, ಗುಲ್ಬರ್ಗಾ, ಚಾಮರಾಜನಗರ, ಬಿಜಾಪುರ ಜಿಲ್ಲೆ ಸೇರಿದಂತೆ 14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಹಾರ ಯೋಜನೆ ಶಾಲೆಗಳು, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ತೀವ್ರ ಅಪೌಷ್ಟಿಕ ಮಕ್ಕಳ ಉಪಚಾರ ಘಟಕ, ವಸತಿ ನಿಲಯಗಳ ಅಹಾರ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಆಯೋಗವು ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಈಗಾಗಲೇ ಜನವರಿ 2 ರಿಂದ 5ರವರೆಗೆ ಜಿಲ್ಲೆಯ 8 ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ 1,24,087 ಸಾಮಾನ್ಯ ಮಕ್ಕಳು, 337 ತೀವ್ರ ಅಪೌಷ್ಠಿಕ, 12633 ಸಾಧಾರಣ ಪೌಷ್ಠಿಕ ಮಕ್ಕಳಿದ್ದು, ತೀವ್ರ ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳನ್ನು ಸಾಮಾನ್ಯ ಮಕ್ಕಳಾಗಿ ರೂಪಿಸುವ ಜವಾಬ್ದಾರಿ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ(ಆರ್‍ಬಿಎಸ್‍ಕೆ)ದಡಿ ನೇಮಕವಾಗಿರುವ ವೈದ್ಯರು ಪ್ರತಿ 2 ತಿಂಗಳಿಗೊಮ್ಮೆ ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ತಪಾಸಣೆ ಮಾಡದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿ.ಎಚ್.ಓ. ಡಾ: ಚಂದ್ರಿಕಾ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‍ಆರ್‍ಸಿ ಕೇಂದ್ರವನ್ನು ಸುಸಜ್ಜಿತ ವಾರ್ಡಿಗೆ ಸ್ಥಳಾಂತರಿಸಬೇಕೆಂದು ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ ಅವರಿಗೆ ನಿರ್ದೇಶನ ನೀಡಿದರು.

      ಆಯೋಗದ ಸದಸ್ಯ ವಿ.ಬಿ.ಪಾಟೀಲ್ ಮಾತನಾಡಿ, ಪರಿಶೀಲನಾ ಸಮಯದಲ್ಲಿ ನಿರ್ಲಕ್ಷ್ಯ ಅಧಿಕಾರಿ/ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ. ವಿನಾಕಾರಣ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಆಯೋಗದ ಉದ್ದೇಶವಲ್ಲ. ಅವ್ಯವಸ್ಥೆಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರಲ್ಲದೆ, ಆಯೋಗ ಪ್ರವಾಸ ಕೈಗೊಂಡ ನಂತರ ಸಾಕಷ್ಟು ಸುಧಾರಣೆಗಳಾಗಿರುವುದು ಗಮನಕ್ಕೆ ಬಂದಿದೆ ಎಂದು ಸಮಾಧಾನದಿಂದ ಹೇಳಿದರು.

      ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಸಂಖ್ಯೆ, ಹಾಜರಾತಿ, ದಾಸ್ತಾನು ವಹಿ, ಸಿಬ್ಬಂದಿಗಳ ಜವಾಬ್ದಾರಿ, ಅಪೌಷ್ಠಿಕ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕುಣಿಗಲ್ ತಾಲ್ಲೂಕು ಮಹದೇವನಗರ ಹಾಗೂ ಕೊರಟಗೆರೆ ಅಜ್ಜಿಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಕೊರತೆಯಿರುವುದು ಕಂಡು ಬಂತು. ಮಕ್ಕಳಿಗೆ ಬೆಳಿಗ್ಗೆ 11 ಗಂಟೆಯಾದರೂ ಕುಡಿಯುವ ಹಾಲನ್ನು ನೀಡಿರಲಿಲ್ಲ. ಬೆಳೆಯುವ ಮಕ್ಕಳಿಗೆ ನಿಗಧಿತ ಸಮಯದಲ್ಲಿ ಆಹಾರ ನೀಡದಿದ್ದರೆ ಪೌಷ್ಠಿಕ ಮಕ್ಕಳಾಗಿ ಬೆಳೆಯಲು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮಕ್ಕಳಿಗೆ ಕಲಿಕೆಯೊಂದಿಗೆ ಪೌಷ್ಠಿಕ ಆಹಾರ ನೀಡಿ ಆರೈಕೆ ಮಾಡುವಂತೆ ಸೂಚನೆ ನೀಡಿದರಲ್ಲದೆ ತಿಪಟೂರು ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿರುವ ಸುವ್ಯವಸ್ಥೆ, ಸಮರ್ಪಕ ನಿರ್ವಹಣೆ, ನೈರ್ಮಲ್ಯತೆ ಕಾಪಾಡಿಕೊಂಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿರುವ 4095 ಅಂಗನವಾಡಿಗಳ ಪೈಕಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 1489 ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ ಹಾಗೂ 2115 ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಎಂದು ಸಭೆಯ ಗಮನಕ್ಕೆ ತಂದಾಗ ಕೂಡಲೇ ಪ್ರತಿಕ್ರಿಯಿಸಿದ ವಿ.ಬಿ.ಪಾಟೀಲ್ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯ ಒದಗಿಸಲು ಕಟ್ಟಡದ ಮಾಲೀಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

      ಸದಸ್ಯ ಕಾರ್ಯದರ್ಶಿ ಸುಜಾತ ಹೊಸಮನಿ ಮಾತನಾಡಿ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಇರುವ ಅವ್ಯವಸ್ಥೆಗಳನ್ನು ಜಿಲ್ಲಾ ಮಟ್ಟದಲ್ಲಿ ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ರಾಜ್ಯ ಮಟ್ಟದ ಸಭೆಯಲ್ಲಿ ಪರಿಹರಿಸಲಾಗುವುದು ಎಂದರಲ್ಲದೆ, ಆಯೋಗದಿಂದ ಈಗಾಗಲೇ 20 ರಾಜ್ಯಮಟ್ಟದ ಸಭೆಗಳನ್ನು ನಡೆಸಲಾಗಿದೆ. ಅಧಿಕಾರಿಗಳಿಗೆ ಇಚ್ಛಾಶಕ್ತಿಯಿದ್ದಾಗ ಮಾತ್ರ ಇಂಥ ಕಾಯ್ದೆಗಳು ಫಲಪ್ರದವಾಗುತ್ತದೆ ಎಂದರು.

      ಆಯೋಗದ ಸದಸ್ಯೆ ಮಂಜುಳಾಬಾಯಿ ಮಾತನಾಡಿ, ಪಾವಗಡ ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅಡಿಗೆಗೆ ಶುದ್ಧ ನೀರು ಬಳಸದೆ ತೆರೆದ ಬಾವಿ ಹಾಗೂ ಕೊಳವೆ ಬಾವಿ ನೀರನ್ನು ಬಳಸುತ್ತಿರುವುದು ಸರಿಯಲ್ಲ. ಕೂಡಲೇ ಶುದ್ಧ ನೀರಿನ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿ ನೈರ್ಮಲ್ಯತೆ, ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

      ಮತ್ತೊಬ್ಬ ಸದಸ್ಯ ಡಿ.ಜಿ.ಹಸಬಿ ಮಾತನಾಡಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಶೇಖರಿಸಿಡುವುದರಿಂದ ಧಾನ್ಯಗಳು ಹಾಳಾಗುವುದಿಲ್ಲ. ನ್ಯಾಯಬೆಲೆ ಅಂಗಡಿಗಳ ನಿರ್ವಹಣೆ ಬಗ್ಗೆ ಯಾವುದೇ ದೂರುಗಳಿಲ್ಲ. ಪಡಿತರ ವಿತರಣೆಯಲ್ಲಿ ತೂಕ ಹಾಗೂ ಪೆಟ್ರೋಲ್ ಬಂಕ್‍ಗಳಲ್ಲಿ ಅಳತೆಯಲ್ಲಿ ಮೋಸವಾಗದಂತೆ ಅಧಿಕಾರಿಗಳು ನಿಗಾ ಇಟ್ಟಿರಬೇಕೆಂದರು. ಗ್ರಾಹಕರಿಗೆ ಅನ್ಯಾಯ ಮಾಡುವಂತ ನ್ಯಾಯಬೆಲೆ ಅಂಗಡಿಗಳನ್ನು ಸೀಜ್ ಮಾಡಬೇಕೆಂದು ತಾಕೀತು ಮಾಡಿದರು.

      ಇನ್ನೋರ್ವ ಸದಸ್ಯ ಬಿ.ಎ.ಮಹಮ್ಮದ್ ಅಲಿ ಮಾತನಾಡಿ ಅಕ್ಷರ ದಾಸೋಹ ಹಾಗೂ ಬಿಸಿಯೂಟ ವ್ಯವಸ್ಥೆ ಬಗ್ಗೆ ಪ್ರಗತಿ ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಮಾತನಾಡಿ, ಆಯೋಗದ ಕಣ್ಣಿಗೆ ಕಂಡಿರುವ ನ್ಯೂನ್ಯತೆ/ ಲೋಪದೋಷಗಳನ್ನು ಮುಂದಿನ ಭೇಟಿಯೊಳಗಾಗಿ ಸರಿಪಡಿಸಿಕೊಂಡು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆಂದು ಆಯೋಗಕ್ಕೆ ತಿಳಿಸಿದರು.

      ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಸರ್ಜನ್ ಡಾ: ವೀರಭದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ದೇವರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್ ಕುಮಾರ್, ಸಿಡಿಪಿಓಗಳು, ಮತ್ತಿತರರು ಹಾಜರಿದ್ದರು.

(Visited 44 times, 1 visits today)