ತುಮಕೂರು:

      ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರ ಲಾಲ್ ನೆಹರು ದೇಶದ ಅಭಿವೃದ್ದಿ ದೃಷ್ಟಿಯಿಂದ ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳು, ಯೋಜನಾ ಆಯೋಗವನ್ನ ಇಂದಿನ ಪ್ರಧಾನಿ ನರೇಂದ್ರ ಮೋದಿ ಬದಲಾಯಿಸುವ ಮೂಲಕ ದೇಶವನ್ನು ಅದೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪಂಡಿತ ಜವಹರಲಾಲ್ ನೆಹರು ಅವರ 129ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ದೇಶದ ಸರ್ವತೋಮುಖ ಅಭಿವೃದ್ದಿಗಾಗಿ ಮುಂದಿನ ಐದು ವರ್ಷಗಳ ಕಾಲ ಯಾವ ವಿಷಯಗಳಿಗೆ ಅದ್ಯತೆ ನೀಡಬೇಕೆಂದು ನಿರ್ಧರಿಸುವ ಪಂಚವಾರ್ಷಿಕ ಯೋಜನೆಗಳು ಹಾಗೂ ಅದನ್ನು ನಿರ್ಧರಿಸುವ ಯೋಜನಾ ಆಯೋಗವನ್ನು ನೀತಿ ಆಯೋಗವನ್ನು ಬದಲಿಸಿದ ಪರಿಣಾಮ, ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡು,ಅದೋಗತ್ತಿಯತ್ತ ಸಾಗುತ್ತಿದೆ ಎಂದರು.

      ಸ್ವಾತಂತ್ರ ಪಡೆಯುವ ಉದ್ದೇಶದಿಂದ ರಚನೆಯಾದ ಕಾಂಗ್ರೆಸ್,ಸ್ವಾತಂತ್ರ ನಂತರದಲ್ಲಿ ರಾಜಕೀಯ ಪಕ್ಷವಾಗಿ ಪರಿವರ್ತನೆ ಯಾಗಿದ್ದು ಇತಿಹಾಸ. ಕಳೆದ 70  ವರ್ಷಗಳಲ್ಲಿ ಕಾಂಗ್ರೆಸ್ ರಾಷ್ಟ್ರಕ್ಕೆ ಏನು ಕೊಡುಗೆ ನೀಡಿದೆ ಎಂದು ಕೇಳುವ ಪ್ರಧಾನಿ ಆದಿಯಾಗಿ ಬಿಜೆಪಿ ಪಕ್ಷದ ಮುಖಂಡರು ಭಾರತದ ರಾಜಕೀಯ ಇತಿಹಾಸವನ್ನೋಮ್ಮೆ ಓದಿಕೊಳ್ಳಬೇಕಿದೆ. ನೆಹರು ಅವರ ಆಡಳಿತದಲ್ಲಿ ಹಾಕಿದ ಭದ್ರ ಬುನಾದಿಯ ಪರಿಣಾಮ ಇಂದು ದೇಶ ಪ್ರಪಂಚದ ಇತರೆ ರಾಷ್ಟ್ರಗಳಿಗೆ ಶಕ್ತಿಯನ್ನು ಬೆಳೆಸಿ ಕೊಂಡಿದೆ.ಅರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದೆ. ದೊಡ್ಡ ದೊಡ್ಡ ಕೈಗಾರಿಕೆ ಸ್ಥಾಪನೆಯಾಗಿ ಲಕ್ಷಾಂತರ ಜನ ಉದ್ಯೋಗ ಪಡೆದಿದ್ದಾರೆ. ಸಾರ್ವಜನಿಕ ವಲಯದ ಉದ್ದಿಮೆಗಳು ಕಾಂಗ್ರೆಸ್ ಕಾಲದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದವು. ದುರಾದೃಷ್ಟ ಬಿಜೆಪಿ ಕಾಲದಲ್ಲಿ ನಷ್ಟದತ್ತ ದಾಪುಗಾಲು ಇಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಮೋದಿ ಅವರ, ಖಾಸಗಿ ಸ್ನೇಹಿ ಪರ ನೀತಿಗಳು ಎಂದು ಕುಟುಕಿದರು.

      ಮೋದಿ ಆಡಳಿತದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳಾದ ಸಿಬಿಐ, ಇಡಿ, ಐ.ಬಿ.ಗಳನ್ನು ದುರುಯೋಗ ಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆ.ನೋಟು ಅಮಾನೀಕರಣದಿಂದ ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಇದುವರೆಗೂ ನಿವಾರಣೆಯಾಗಿಲ್ಲ.ಕಪ್ಪು ಹಣ ಮತ್ತು ಭಯೋತ್ಪಾಧನೆಯಂತಹ ಕೃತ್ಯಗಳಿಗೆ ಸರಕಾರ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.ಇದುವರೆಗೂ ಎಷ್ಟು ಕಪ್ಪು ಹಣ ಬಂದಿದೆ ಎಂದು ದೇಶದ ಜನರಿಗೆ ಲೆಕ್ಕ ನೀಡಿಲ್ಲ.ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಜನರು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಮತ ನೀಡಿದ್ದಾರೆ ಎಂದರು ಡಾ.ಜಿ.ಪರಮೇಶ್ವರ್ ನುಡಿದರು.

      ಕಳೆದ ನಾಲ್ಕುವರೆ ವರ್ಷದಲ್ಲಿ ರೈತರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರಕಾರ ಹಲವು ಯೋಜನೆಗಳ ಮೂಲಕ ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ಬಂದಿದೆ.ಆದರೆ ಕೇಂದ್ರ ಸರಕಾರ ಒಂದು ನೈಯಾ ಪೈಸ ಪರಿಹಾರ ನೀಡಿಲ್ಲ. ದಲಿತರ ಕಗ್ಗೊಲೆ, ಮಹಿಳೆಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವಲ್ಲಿ ಕೇಂದ್ರದ ಬಿಜೆಪಿ ವಿಫಲವಾಗಿದೆ.ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ.ಮುದ್ದಹನುಮೇಗೌಡರೇ ಮೈತ್ರಿ ಸರಕಾರದ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ.ಹಾಗಾಗಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು, ರಾಹುಲ್‍ಗಾಂಧಿ ಅವರನ್ನು ಪ್ರಧಾನಿ ಮಾಡಲು ಮುಂದಾಗಬೇಕಿದೆ ಎಂದರು.

     ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, 1912ರಲ್ಲಿ ಭಾರತೀಯ ನ್ಯಾಷನಲ್ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ನೆಹರು ಮಹಾತ್ಮಗಾಂಧಿ ಅವರೊಂದಿಗೆ ಸ್ವಾತಂತ್ರ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದರು.ಸ್ವಾತಂತ್ರ ನಂತರದ ಭಾರತದ ಮೊದಲ ಪ್ರಧಾನಿಯಾಗಿ, ದೇಶ ಆರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬರಲು ನೆಹರು ಕಾರಣ.ಅವರು ಜಾರಿಗೆ ತಂದ ಪಂಚಶೀಲ ತತ್ವಗಳು ಇಂದಿಗೂ ವಿದೇಶಾಂಗ ನೀತಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಮಾಜಿ ಅಧ್ಯಕ್ಷರಾದ ಎಸ್.ಷಪಿಅಹಮದ್,ಕೆಂಚಮಾರಯ್ಯ,ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ,ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್ ಪಾಷ,ಮುಖಂಡರಾದ ಅಪ್ತಾಬ್ ಅಹಮದ್, ನರಸೀಯಪ್ಪ,ಲಿಂಗರಾಜು,ಟಿ.ಬಿ.ಮಲ್ಲೇಶ್,ಮಹಿಳಾ ಘಟಕದ ಇಂದಿರಾ ದೇನಾನಾಯಕ್,ಗೀತಮ್ಮ,ಪಾಲಿಕೆ ಸದಸ್ಯರಾದ ಮಹೇಶ್, ಕುಮಾರ್, ಇನಾಯತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

(Visited 27 times, 1 visits today)