ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಯನ್ನು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.

      ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಕೊರಟಗೆರೆ ತಾಲೂಕು ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ ಅಜ್ಜಿಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಕೃಷಿಯ ನಂತರ ಉದ್ಯೋಗ ಸೃಷ್ಟಿಸಿದ್ದ ನಿರ್ಮಾಣ ವಲಯ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಯನ್ನು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಇದರಿಂದ ಆರ್ಥಿಕ ಸಂಚಲನವು ಸ್ಥಗಿತಗೊಂಡು ಕೃಷಿ, ವ್ಯಾಪಾರ ಮತ್ತು ಉದ್ಯೋಗದ ಮೇಲೆ ಬಾರೀ ಹಿನ್ನಡೆಗೆ ಕಾರಣವಾಗಿ ಕಾರ್ಮಿಕರ ಬದುಕು ದುಸ್ಥಿತಿಗೆ ಇಳಿದಿದೆ. ಆದ್ದರಿಂದ ನಿರ್ಮಾಣ ವಲಯವನ್ನು ರಕ್ಷಿಸಲು ಮತ್ತು ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುವಂತೆ, ಬೆಲೆ ಏರಿಕೆ ತಡೆದು ಹಿಂದೆ ಭರವಸೆ ನೀಡಿದಂತೆ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಪ್ರಧಾನಿಗಳು ತಮ್ಮ ಮಾತನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

      ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅವರ ಹಕ್ಕುಗಳನ್ನು ಉಳಿಸಲು ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಐಕ್ಯತೆ ಸಾಧಿಸುವುದು ಇಂದು ಅತ್ಯಂತ ತುರ್ತಾಗಿದೆ.ಕಾರ್ಮಿಕರು ಮೋಸಕ್ಕೆ ಒಳಗಾಗದೆ ತಮ್ಮ ಪರವಾದ ಸಂಘಟನೆಗಳ ಜೊತೆ ಸದಸ್ಯತ್ವ ಪಡೆದು ಕಲ್ಯಾಣ ಮಂಡಳಿಯಲ್ಲಿ ದೊರೆಯವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

       ಸಮಾವೇಶವನ್ನು ಉದ್ಘಾಟಿಸಿದ ಸಿಐಟಿಯು ತಾಲೂಕು ಕಾರ್ಯದರ್ಶಿ ನೌಷಾದ್ ಸೆಹಗನ್ ಮಾತನಾಡಿ, ತಾಲೂಕಿನಲ್ಲಿ ಸಂಘಟನೆಯಡಿ ಹೋರಾಟ ಮಾಡಿ ಪಾರಂಪರಿಕ ಕಲ್ಲುಕುಟ್ಟುವ ಕಾರ್ಮಿಕರ ಬದುಕನ್ನು ಮತ್ತು ಉದ್ಯೋಗವನ್ನು ರಕ್ಷಿಸಲಾಗಿದೆ. ರೈತ-ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಜನವರಿ 8 ಮತ್ತು 9ರಂದು ರಾಷ್ಟ್ರವ್ಯಾಪಿ ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ತಾಲೂಕಿನಲ್ಲಿ ಯಶಸ್ವಿಗೊಳಿಸುವ ಮೂಲಕ ರೈತ ಕಾರ್ಮಿಕರ ಬದುಕನ್ನು ಭದ್ರಪಡಿಸಬೇಕೆಂದು ಮನವಿ ಮಾಡಿದರು.

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ವಂತಿಗೆ ಹಣವನ್ನು ಪ್ರಧಾನಿಗಳು ಸಾಮಾಜಿಕ ಸುರಕ್ಷತೆ ಹೆಸರಿನಲ್ಲಿ ಸಾವಿರಾರು ಕೋಟಿಗಳ ಹಣವನ್ನು ಖಾಸಗಿಯವರು ಲೂಟಿ ಮಾಡಲು ಅವಕಾಶ ಕೊಡುವ ತಂತ್ರ ರೂಪಿಸಲಾಗುತ್ತಿದೆ. ಈಗಾಗಲೇ ಕೃಷಿಯ ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿಸಿಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ. ಅದರಂತೆಯೇ ಕಟ್ಟಡ ಕಾರ್ಮಿಕರ ಹಣವನ್ನು ಕೂಡ ಲಪಟಾಯಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.

      ಯಾವುದೇ ಕಾರಣಕ್ಕೂ ಕಟ್ಟಡ ಕಾರ್ಮಿಕರ ಪರಿಶ್ರಮದಿಂದ ಸಾರ್ವಜನಿಕರ ಕೊಡುಗೆ ಹಾಗೂ ಸರ್ಕಾರಿ ಯೋಜನೆಗಳ ಅಡಿ ಸಂಗ್ರಹವಾಗಿರುವ ಸೆಸ್ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು. ಯಾಕೆಂದರೆ ಈ ಹಣ ಬಜೆಟ್‍ನಲ್ಲಿ ಮೀಸಲಿಟ್ಟ ಹಣವಲ್ಲ. ಹಾಗಾಗಿ ಈ ಹಣವನ್ನು ಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿದರು.

      ಜಿಲ್ಲಾ ಮುಖಂಡ ಲಕ್ಷ್ಮಣ್ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ಅರಿವು ಮೂಡಿಸಿಕೊಂಡು ಸುಳ್ಳು ಭರವಸೆಗಳಿಗೆ ಮಾರು ಹೋಗದೆ ತಮ್ಮ ತಮ್ಮಲ್ಲಿ ಒಗ್ಗಟ್ಟನ್ನು ಸಾಧಿಸಬೇಕೆಂದು ಕರೆ ನೀಡಿದರು.
ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ, ಸಹಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾತನಾಡಿದರು. ವೇದಿಕೆಯಲ್ಲಿ ತುಮಕೂರು ತಾಲೂಕು ಅಧ್ಯಕ್ಷ ಗಂಗಾಧರ್, ತಾಲೂಕು ಮುಖಂಡರಾದ ರಾಜಮ್ಮ, ಅಣ್ಣಪ್ಪ, ವೆಂಕಟಸ್ವಾಮಿ(ಎಂಎಲ್‍ಎ ಮೂರ್ತಪ್ಪ) ಸರ್ದಾರ್, ಕಚೇರಿ ಕಾರ್ಯದರ್ಶಿ ನಾಗರಾಜು ವೇದಿಕೆಯಲ್ಲಿದ್ದರು.

(Visited 23 times, 1 visits today)