ಹುಳಿಯಾರು:

      ಭಾರತ ದೇಶ ಧಾರ್ಮಿಕ ಭಾವನೆಗಳುಳ್ಳ ದೇಶ. ವಿವಿಧ ಜಾತಿ, ಮತಗಳನ್ನು ಹೊಂದಿರುವ ಹಾಗೆಯೇ ವಿವಿಧ ಸಂಪ್ರದಾಯಗಳ ಸಂಗಮವಾಗಿದ್ದು ವಿಶ್ವಕ್ಕೆ ಭಾವೈಕ್ಯತೆಯ ಸಂದೇಶ ನೀಡುವುದಕ್ಕದರೂ ಬಿಜೆಪಿಯವರು ಟಿಪ್ಪು ಜಯಂತಿ ಆಚರಿಸಲು ಸಹಕರಿಸಬೇಕು ಎಂದು ಜಿಲ್ಲಾ ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ಸೈಯದ್ ಜಬೀಉಲ್ಲಾ ತಿಳಿಸಿದರು.

      ಹುಳಿಯಾರಿನ ಶನಿವಾರ ಸರಳವಾಗಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದ ಜಾತ್ಯತೀತ ಮೌಲ್ಯಗಳು ಹಾಗೂ ಬಹುಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಹಾಗೂ ಸೌಹಾರ್ದತೆ ಪ್ರತಿಯೊಬ್ಬರ ಉಸಿರಾಗಬೇಕು. ಆದರೆ ಬಿಜೆಪಿಯವರು ಟಿಪ್ಪು ಜಯಂತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ, ಧರ್ಮದ ನಡುವೆ ಸಾಮರಸ್ಯ ಕದಡುತ್ತಿದ್ದಾರೆ ಎಂದು ಆಪಾದಿಸಿದರಲ್ಲದೆ ಬಸವಣ್ಣ, ಕನಕ, ವಾಲ್ಮೀಕಿ ಸಮುದಾಯದವರು ಕೇಳಿದಂತೆ ಮುಸ್ಲಿಂ ಸಮುದಾಯ ಟಿಪ್ಪು ಜಯಂತಿ ಕೇಳಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದು ಸಂವಿಧಾನ ಆಶಯವಾಗಿದ್ದು ಅದರಂತೆ ಟಿಪ್ಪು ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

       ತಾಪಂ ಸದಸ್ಯ ಎಚ್.ಎನ್.ಕುಮಾರ್, ತಿಮ್ಲಾಪುರ ಗ್ರಾಪಂ ಅಧ್ಯಕ್ಷ ಎನ್.ಬಿ.ದೇವರಾಜು, ಗ್ರಾಪಂ ಸದಸ್ಯೆ ನೂರ್ ಜಾನ್, ಚಲನಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ಪ್ರಸನ್ನ ಕುಮಾರ್, ಅಪ್ರೋಜ್, ಮೈದೀನ ಶಾ, ಇಮ್ರಾಜ್, ಸಾದತ್, ನಾಸೀರ್ ಬೇಗ್, ಮುನ್ ಪೈಜ್ ಮತ್ತಿತರರು ಇದ್ದರು. 

(Visited 18 times, 1 visits today)