ತುಮಕೂರು : 

      ಕೃಷಿಕರು ಸಾವಯವ ಪದ್ಧತಿಯನ್ನ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಹಿಂದೆ ಸಿರಿಧಾನ್ಯಗಳು ಬಡವರ ಧಾನ್ಯಗಳಾಗಿದ್ದವು. ಆದರೆ ಇಂದು ಖಾಯಿಲೆಗಳ ಅಬ್ಬರದಿಂದ ಬಡವರ ಧಾನ್ಯಗಳು ಸಿರಿಧಾನ್ಯಗಳಾಗಿ ಮಾರ್ಪಟ್ಟಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

      ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಕೃಷಿ ಭವನ ಕಟ್ಟಡದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ನಂತರ ಕೃಷಿ ಸುಧಾರಿಸಿದೆ. ಕೃಷಿ ಉಳಿದರೆ ರೈತರು ಉಳಿಯುತ್ತಾರೆ. ದೇಶ ಉಳಿಯುತ್ತದೆ. ಇಲ್ಲವಾದರೆ ದೇಶವೇ ನಾಶವಾಗುತ್ತದೆ.  ಇಂತಹ ಮಹತ್ವವಿರುವ ಕೃಷಿ ಕಾಯಕವನ್ನು ನಾವು ಮರೆಯುತ್ತಿದೇವೆ. ಇದು ತುಂಬಾ ನೋವಿನ ಸಂಗತಿ. ರೈತರು ಕೊಡುಗೈ ದಾನಿಗಳು. ದೇಶಕ್ಕೆ ಅನ್ನವನ್ನು ಕೊಡುತ್ತಿದ್ದಾರೆ. ಆದರೆ ಬದಲಾದ ವಾತಾವರಣದ ಸಮಯದಲ್ಲಿ ಇಂದು ಕೃಷಿ ಪದ್ಧತಿಯಲ್ಲಿ ಬದಲಾವಣೆ ಬೇಕಿದೆ. ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಕೋಲಾರದಲ್ಲಿ ನೀರಾವರಿ ಕ್ಷೇತ್ರ ಕಡಿಮೆ ಇದ್ದರೂ ಸಹ ಅಲ್ಲಿನ ರೈತರು ಮಿಶ್ರ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ಆ ಭಾಗದಲ್ಲಿ ರೈತರ ಆತ್ಮಹ್ಯತೆಯು ಕಡಿಮೆ ಇದೆ. ಆದ್ದರಿಂದ ಈ ಭಾಗದ ರೈತರು ಇಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿದ್ದ ರೈತರಲ್ಲಿ ಸಚಿವರು ಮನವಿ ಮಾಡಿದರು.

      ರಾಜ್ಯದಲ್ಲಿ 61 ಸಾವಿರ ಎಕರೆಗಳಲ್ಲಿ 41 ಸಾವಿರ ಮೆಟ್ರಿಕ್ ಟನ್ ಸಿರಿಧಾನ್ಯ ಬೆಳೆಯಲಾಗುತ್ತಿದೆ, ರಾಗಿ, ನವಣೆ ಆರಕ, ಉದ್ದು ಸೇರಿದಂತೆ ಅನೇಕ ಸಿರಿ ಧಾನ್ಯಗಳಲ್ಲಿ ಪೌಷ್ಠಿಕ ಅಂಶಗಳಿವೆ. ಪ್ರತಿಯೊಂದರಲ್ಲಿ ಹಲವಾರು ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಇದರ ಉಪಯುಕ್ತತೆ ಜನರಿಗೆ ತುಂಬಾ ಅವಶ್ಯಕವಾದ್ದರಿಂದ ಆರೋಗ್ಯದ ದೃಷ್ಠಿಯಿಂದ ಬಹಳ ಒಳ್ಳೆಯದು ಎಂದು ತಿಳಿಸಿದರು.

     ಕೋವಿಡ್ ನಂತರ ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದೆ. ಈ ಪದಾರ್ಥಗಳಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿರುವುದರಿಂದ ವಿದೇಶಗಳಿಂದ ದೇಶಿಯ ಸಾಂಬಾರ್ ಪದಾರ್ಥಗಳ ಬೇಡಿಕೆ ಹೆಚ್ಚುತ್ತಿದೆ. ಅಂತಹ ಮಹತ್ವ ಈ ಧಾನ್ಯಗಳಲ್ಲಿ ಇದೆ. ರೈತರು ಈ ನಿಟ್ಟಿನಲ್ಲಿ ಇಂತಹ ಸಿರಿಧಾನ್ಯಗಳನ್ನು ಬೆಳೆದು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು. ಅಲ್ಲದೇ ಕೋವಿಡ್‍ನಿಂದ ನಗರ ಪ್ರದೇಶದಿಂದ ಬಂದ ಗ್ರಾಮೀಣ ಭಾಗದ ಯುವಕರು ತಮ್ಮ ಪ್ರದೇಶಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

      ಐದಾರು ರೈತರು ಒಗ್ಗೂಡಿ ಸಹಕಾರ ಮಾರುಕಟ್ಟೆಗಳನ್ನು ಸ್ಥಾಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು. ರೈತರ ಆದಾಯ ದ್ವಿಗುಣಗೊಳಿಸಲು ಸಿ.ಎಫ್.ಟಿ.ಆರ್.ಐ ನಿಂದ ಜನವರಿ 11 ರಿಂದ ಮಾರ್ಚ್ 31ರವರೆಗೆ ರೈತರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಮೋದಿಯವರು “ಒಂದು ಜಿಲ್ಲೆ ಒಂದು ಉತ್ಪನ್ನ’’ ಯೋಜನೆಯಡಿ 10 ಸಾವಿರ ಕೋಟಿ. ರೂಗಳನ್ನು ಆಹಾರ ಸಂಸ್ಕರಣೆಗೆ ಮೀಸಲಿರಿಸಿದ್ದಾರೆ. ಅದರಿಂದ ರೈತರು ಇದರ ಪ್ರಯೋಜನಾ ಪಡೆದು ಕೊಳ್ಳಬೇಕು ಎಂದರು.

      ಸಿರಿಧಾನ್ಯ ಹಬ್ಬ ಮತ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಜೆ.ಸಿ. ಮಾಧುಸ್ವಾಮಿ ಅವರು ಪ್ರಕೃತಿ ನಮಗೆಲ್ಲ ಬಹು ದೊಡ್ಡ ವಿಜ್ಞಾನಿ, ವೈದ್ಯ, ವಿನ್ಯಾಸಕಾರ, ಮಾರ್ಗದರ್ಶಕ. ಪ್ರಕೃತಿಗಿಂತ ದೊಡ್ಡವರು ಯಾರು ಇಲ್ಲ. ಹಾಗೆಯೇ ಆಯಾ ಪ್ರದೇಶಕ್ಕನುಗುಣವಾಗಿ ಮಳೆ, ಬೆಳೆ ಆಗುತ್ತಿದೆ. ಆದರೆ ಇಂದು ನಾವುಗಳು ಅದರ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ಅದಕ್ಕೆ ಪರಿಣಾಮಗಳನ್ನು ಎದುರಿಸಿದ್ದೇವೆ. ತುಳಿತಕ್ಕೆ ಒಳಗಾಗಿ, ಅಕ್ಷರದಿಂದ ದೂರ ಉಳಿದು ಗುಲಾಮಗಿರಿಯ ಹಿನ್ನೆಲೆಯಿಂದ ನಾವು ಇಂತಹ ಸ್ಥಿತಿಯಲ್ಲಿದ್ದೇವೆ. ಬ್ರಿಟಿಷರು ಬಿಟ್ಟು ಹೋಗಿರುವ ಸಂಸ್ಕøತಿ, ಊಟ, ಉಡುಗೆ, ಆಚರಣೆಗಳನ್ನು ಅನುಕರಣೆ ಮಾಡಿ ಆಹಾರ ಪದ್ಧತಿಯಲ್ಲಿ ಇಂದು ಬದಲಾವಣೆಗಳಾಗಿವೆ. ಆದ್ದರಿಂದ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪುನಃ ದೇಶಿಯ ಸಂಸ್ಕ್ರತಿಯನ್ನು ಪ್ರತಿಷ್ಠಾಪಿಸಬೇಕಾಗಿದೆ ಎಂದರು.

      ಪ್ರದೇಶಕ್ಕನುಗುಣವಾದ ಬೆಳೆ ನಮಗೆ ಅಮೃತ ಸಮಾನ. ಆದರೆ ಇಂದು ನಾವು ಬೇರೆಡೆಯ ಪದಾರ್ಥಗಳನ್ನು ಅವಲಂಬಿಸಿದ್ದೇವೆ. ರೈತ ತಾನು ಬೆಳೆದ ಆಹಾರ ಪದಾರ್ಥವನ್ನೇ ತಾನು ತಿನ್ನುತ್ತಿಲ್ಲ. ನಾವು ಬೆಳೆದ ಬೆಳೆಯನ್ನು ನಾವೇ ಬಳಸದೆ ಹೋದರೆ ಯಾರು ನಮ್ಮ ಬೆಳೆಯನ್ನು ಬಳಸುತ್ತಾರೆ? ಆದ್ದರಿಂದ ಅತ್ಯಧಿಕ ಪೌಷ್ಠಿಕಾಂಶಗಳಿರುವ ಬೆಳೆಗಳನ್ನು ನಾವು ಇಂದು ಮಾರುತ್ತಿದ್ದೇವೆ. ನಾವು ಮೊದಲು ತಿಂದು ಉಳಿದುದನ್ನು ನಾವು ಮಾರಬೇಕು. ಆಗ ನಮಗೇ ಒಳ್ಳೆಯ ಆರೋಗ್ಯ ಲಭಿಸುತ್ತದೆ ಎಂದರು.

      ಭೌಗೋಳಿಕವಾಗಿ ಪ್ರದೇಶಕ್ಕನುಗುಣವಾದ ಬೆಳೆಗಳನ್ನು ಬೆಳೆಯದೆ ಆರ್ಥಿಕತೆಕ್ಕನುಗುಣವಾದ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅದಕ್ಕೆ ಸಿರಿಧಾನ್ಯಗಳ ಬೆಳೆ ಕುಂಠಿತವಾಗುತ್ತಿದೆ. ಇಂದು ಕುರಿ, ದನದ ಕೊಟ್ಟಿಗೆ ಗೊಬ್ಬರದ ಬದಲು ರಸಗೊಬ್ಬರಗಳನ್ನು ಬಳಸಿ ಇಳುವರಿ ಕಡಿಮೆಯಾಗಿದೆ. ಸಿರಿಧಾನ್ಯಗಳು ಬರೀ ಪ್ರದರ್ಶನಕ್ಕೆ ಬಾರದೇ ಬಳಕೆಗೆ ಯೋಗ್ಯವಾಗಬೇಕು. ಆಗ ರೈತರ ಬದುಕು ಸಾರ್ಥಕ ಎಂದರು. ಸ್ವಾತಂತ್ರ್ಯ ನಂತರ ಆಹಾರ ಧಾನ್ಯ ಕೊರತೆ ಹೆಚ್ಚಿತ್ತು. ನಂತರ ಬಾಬು ಜಗಜೀವನ್ ರಾಂ ಅವರು ಹಸಿರು ಕ್ರಾಂತಿ ಮಾಡಿ ದೇಶದ ಆಹಾರ ಉತ್ಪಾದನೆ ಹೆಚ್ಚಿಸಿ ಒಂದು ತಿರುವು ಕೊಟ್ಟರು. ಅನಂತರ ಅಣೆಕಟ್ಟು ನಿರ್ಮಾಣ ಮಾಡಿಕೊಂಡ ನಾವು ಮಾಡಿ ನೀರಾವರಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಇಂದು ವಿಶ್ವದಲ್ಲಿ ಭಾರತ ಎರಡನೇ ಆಹಾರ ಉತ್ಪ್ಪಾದನಾ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು.

      ಒಂದೇ ಬೆಳೆಗೆ ಒತ್ತು ಕೊಡದೇ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ನಾವು ಬೇರೆಡೆಗೆ ಅವಲಂಬಿತರಾಗುವುದು ತಪ್ಪುತ್ತದೆ. ರಾಗಿ ಆಹಾರ ಪದಾರ್ಥದಿಂದ ಅನೇಕ ಉಪಯೋಗಗಳಿವೆ. ಆರೋಗ್ಯಕ್ಕೆ ಉತ್ತಮವಾದ ಆಹಾರ ವಾಗಿರುವುದರಿಂದ ನಾವು ಬೆಳೆಗಳಿಗೆ ಒಂದು ಆಕಾರ ಕೊಟ್ಟರೆ ಜನರು ಬಳಸಿ ಆರೋಗ್ಯವಂತರಾಗುತ್ತಾರೆ. ಎಣ್ಣೆ ಬೀಜಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕು. ಇಂದು ಹೊರ ರಾಷ್ಟ್ರಗಳಿಂದ ಎಣ್ಣೆ ಪದಾರ್ಥ ಆಮದು ಹೆಚ್ಚಾಗಿದೆ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಎಣ್ಣೆಬೀಜಗಳನ್ನು ಉತ್ಪಾದಿಸಬೇಕು ಎಂದು ಅವರು ಕರೆ ನೀಡಿದರು.

      ರಾಗಿಗೆ ಬೆಂಬಲ ಬೆಲೆ ಇದ್ದರೂ ರೈತರು ಮಾರುಕಟ್ಟೆಗೆ ಕ್ವಿಂಟಾಲ್‍ಗಟ್ಟಲೆ ರಾಗಿ ತರುತ್ತಿದ್ದಾರೆ. ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಲು ಸಾಲು ಟ್ರ್ಯಾಕ್ಟರ್‍ಗಳು ನಿಂತಿವೆ. ವ್ಯವಸಾಯ ಸೇವಾ ಸಹಕಾರ ಸಂಘ, ಟಿ.ಎ.ಪಿ.ಸಿ.ಎಂ.ಎಸ್.ಗಳ ಮೂಲಕ ರೈತರಿಂದ ರಾಗಿ ಖರೀದಿಸುವ ಕಾರ್ಯ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಮಾರಂಭದಲ್ಲಿ ಜಿಲ್ಲೆಯ ಸಿದ್ದಮ್ಮ, ಕೃಷ್ಣಮೂರ್ತಿ,ಕರಿಯಪ್ಪ ಇವರಿಗೆ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

      ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮಹಾನಗರ ಪಾಲಿಕೆ ಮಹಾಪೌರರಾದ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಕೃಷಿಕ ಸಮಾಜದ ಅಧ್ಯಕ್ಷ ಮಹೇಂದ್ರನಾಥ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ್ ಸಿಇಓ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿ.ಸಿ.ಪಾಪಣ್ಣ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ರಾಜಶೇಖರ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ ಸೇರಿದಂತೆ ಕೃಷಿಕ ಸಮಾಜದ ಸದಸ್ಯರು, ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ರೈತರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂತಾದವರು ಹಾಜರಿದ್ದರು.

 

(Visited 19 times, 1 visits today)