ತುಮಕೂರು :

      ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಒಳ್ಳೆಯ ಬೆಳೆ ಬೆಳೆದು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಉಪಾಧ್ಯಕ್ಷ ರಂಗಸ್ವಾಮಯ್ಯ ತಿಳಿಸಿದರು.

      ತಾಲ್ಲೂಕಿನ ಕಂಬಳಾಪುರದಲ್ಲಿ ಐಡಿಎಫ್ ಸಂಸ್ಥೆ, ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಹೆಬ್ಬೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಬರದ ಹಿನ್ನೇಲೆಯಲ್ಲಿ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ಕೃಷಿ, ಕೃಷಿ ಯಂತ್ರಧಾರೆ, ಸಾವಯವ ಕೃಷಿ, ಕೃಷಿ ಭಾಗ್ಯ, ಇಸ್ರೇಲ್ ಮಾದರಿ ಕೃಷಿ ಹೀಗೆ ರೈತರಿಗೆ ಹತ್ತು ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಇವುಗಳ ಸದ್ಬಳಕೆಯನ್ನು ಪ್ರತಿಯೊಬ್ಬ ರೈತರು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಪ್ರಯತ್ನ ಮಾಡುವಲ್ಲಿ ಮುಂದಾಗಬೇಕು ಎಂದರು.

      ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ಡಿ.ಲೋಕೇಶ್ ಮಾತನಾಡಿ ಅವರು, ನೈಸರ್ಗಿಕ ಮತ್ತು ಸಾವಯವ ಕೃಷಿಯಿಂದ ರೈತರು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜತೆಗೆ ಹೆಚ್ಚು ಆದಾಯವನ್ನು ಪಡೆಯಬಹುದು. ಐಡಿಎಫ್ ಸಂಸ್ಥೆಯು ಸುಸ್ಥಿರ ಮತ್ತು ಸಾವಯವ ಕೃಷಿಯ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಮತ್ತು ವಿಡಿಯೋ ಚಿತ್ರಗಳ ಮೂಲಕ ರೈತರಿಗೆ ನಿರಂತರ ಮಾಹಿತಿ ನೀಡುತ್ತಾ ಬಂದಿದೆ. ರೈತರಿಗೆ ಹೈನುಗಾರಿಕೆ ಮತ್ತು ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಕೆಲವು ನಾಟಿ ತಳಿ ಬಿತ್ತನೆ ಬೀಜ, ಕೃಷಿ ಉಪಕರಣ ಮತ್ತು ಪಶು ಆಹಾರವನ್ನು ಒದಗಿಸುತ್ತಿದ್ದು ರೈತರು ಇದರ ಉಪಯೋಗವನ್ನು ಮಾಡಿಕೊಂಡು ವ್ಯವ್ಯಸಾಯ ಮಾಡಬೇಕು ಎಂದರು.

     ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ರಂಗರಾಮಯ್ಯ, ಹಾಲು ಉತ್ಪಾದಕರ ಸಂಘ ಬ್ಯಾಟರಾಯಪ್ಪ, ರೈತ ಮುಖಂಡರಾದ ಗಂಗಣ್ಣ, ವೆಂಕಟರಂಗಯ್ಯ, ಕ್ಷೇತ್ರಾಧಿಕಾರಿಗಳಾದ ಕೆ.ಮಧುಸೂಧನ್, ಸಿ.ಮೋಹನ್‍ಕುಮಾರ್, ಹೆಚ್.ನರಸಿಂಹಮೂರ್ತಿ ಹಾಗೂ ಕೃಷಿಕರ ಸಂಘದ ಸದಸ್ಯರು ಭಾಗವಹಿಸಿದ್ದರು.

 

(Visited 41 times, 1 visits today)