ತುಮಕೂರು:

      ತುಮಕೂರು ತಾಲ್ಲೂಕು ಗೂಳೂರು ಹೋಬಳಿಯ ಕಾಳಿಂಗಯ್ಯನ ಪಾಳ್ಯ ಗ್ರಾಮದ ವಾಸಿಯಾದ ಲಕ್ಷ್ಮೀನರಸಮ್ಮನವರ ಸುಮಾರು 85 ಸಾವಿರ ಬೆಲೆಬಾಳುವ 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಪುಟ್ಟೇಗೌಡ ಎಂಬಾತ ಕಿತ್ತುಕೊಂಡು ಹೋಗಿರುವ ಆರೋಪಕ್ಕೆ 2 ವರ್ಷ ಜೈಲುವಾಸ ಮತ್ತು 10,000 ರೂ. ದಂಡ ವಿಧಿಸಿ 4ನೇ ಅಪರ ಸಿ.ಜೆ. ಮತ್ತು 5 ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿನೋದ್ ಬಾಲ್ ನಾಯ್ಕ ಅವರು ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:

      ಆರೋಪಿ ಪುಟ್ಟೇಗೌಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕಿ ಲಕ್ಷ್ಮೀನರಸಮ್ಮ ಅವರನ್ನು ದಾರಿ ಮಧ್ಯೆ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿರುವುದು ವಿಚಾರಣೆಯಿಂದ ಸಾಬೀತಾಗಿದೆ.

      ಆರೋಪಿಗೆ ವಿಧಿಸಿರುವ ದಂಡದ ಮೊತ್ತ ಕೊಡಲು ತಪ್ಪಿದರೆ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹೆಬ್ಬೂರು ಠಾಣೆಯ ತನಿಖಾಧಿಕಾರಿ ಹಾಗೂ ಕ್ಯಾತ್ಸಂದ್ರ ವೃತ್ತದ ಸಿ.ಪಿ.ಐ ಕೆ.ಆರ್. ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಈ.ಡಿ. ಶ್ರೀನಿವಾಸ್ ವಾದ ಮಂಡಿಸಿದ್ದರು.

(Visited 16 times, 1 visits today)