ತುಮಕೂರು:

      ಐತಿಹಾಸಿಕ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಡಿ.15ಮತ್ತು16ರಂದು ನಡೆಯಲಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.

      ನರಕ ಚರ್ತುದರ್ಶಿಯಂದು ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡಿದ್ದು, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಡಿಸೆಂಬರ್ 15ರಂದು ಮಹಾಗಣಪತಿಯ ಉತ್ಸವ ಹಾಗೂ 16ರಂದು ಗೂಳೂರು ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ

      ಡಿ.15ರಂದು ರಾತ್ರಿ 8ಗಂಟೆಗೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ನಿರ್ಮಿಸಿರುವ ಸರ್ವಾಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಲಾಗುವುದು ನಂತರ ಇಡೀರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಕರಡಿಮಜಲು, ನಾಸಿಕ್ ಡೋಲ್, ನಂದಿಕೋಲು, ಕೀಲು ಕುದುರೆ, ಬೊಂಬೆಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ ಜೊತೆಗೆ ಬಾಣಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಮೆರವಣಿಗೆ ನಡೆಸಲಾಗುವುದು.

      ಮೆರವಣಿಗೆ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಸುರೇಶ್‍ಗೌಡ, ಹೆಚ್.ನಿಂಗಪ್ಪ, ಮಾರುತಿ ಸಾಮಿಲ್‍ನ ಹನುಮಂತಪ್ಪ, ಸ್ಫೂರ್ತಿ ಡೆವಲಪ್‍ರ್ಸ್ ಚಿದಾನಂದ್, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಎಲೆಕ್ಟ್ರಿಕ್‍ನ ನರಸಿಂಹಮೂರ್ತಿ, ಗೂಳೂರಿನವರಾದ ಜಿ.ನಂಜೇಗೌಡ, ಲಕ್ಷ್ಮೀಕಾಂತ ಮತ್ತಿತರರರು ಪಾಲ್ಗೊಳ್ಳಲಿದ್ದಾರೆ. ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬರುವ ಭಕ್ತಾದಿಗಳು ಹಾಗೂ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

      ಡಿಸೆಂಬರ್ 16ರ ಮಧ್ಯಾಹ್ನ 12ಗಂಟೆಗೆ ಉತ್ಸವ ಪುನಾರಂಭವಾಗಲಿದ್ದು, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಗಣಪತಿಯ ವಿಸರ್ಜನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಮಹಾಗಣಪತಿಯ ಕೃಪೆಗೆ ಪಾತ್ರರಾಗುವಂತೆ ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿ ಅಧ್ಯಕ್ಷ ಶಿವಕುಮಾರ್ ಮನವಿ ಮಾಡಿದ್ದಾರೆ.

(Visited 27 times, 1 visits today)