ತುಮಕೂರು: ಪರವಾನಗಿ ಪಡೆಯದೆ ಗೃಹ ಬಳಕೆ ಕೀಟ ನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿ ಮಳಿಗೆಯ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ೩೨ ಸಾವಿರ ರೂ. ಮೌಲ್ಯದ ಗೃಹ ಬಳಕೆ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಮಂಡಿಪೇಟೆಯ ಮುಖ್ಯ ರಸ್ತೆಯಲ್ಲಿರುವ ರಾಜಾರಾಂ ಅಂಡ್ ಕಂ. ದಿನಸಿ ಮಳಿಗೆಯಲ್ಲಿ ಗೃಹ ಬಳಕೆ ಕೀಟನಾಶಕ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಪರವಾನಗಿ ಪಡೆಯದೆ, ದಾಖಲಾತಿ ನಿರ್ವಹಣೆ ಮಾಡದೆ ಕಿಂಗ್ ಮತ್ತು ಡೆಡ್ಲೈನ್ ಎಂಬ ಎರಡು ಗೃಹ ಬಳಕೆ ಕೀಟನಾಶಕಗಳನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ದಿನಸಿ ಸಾಮಗ್ರಿಗಳ ಜತೆ ೪೨ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ತುಂಬಿಟ್ಟಿದ್ದ ೩೨ ಸಾವಿರ ರೂ. ಮೌಲ್ಯದ ೨೩೭೯೯ ಗೃಹ ಬಳಕೆ ಕೀಟನಾಶಕಗಳ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡು ಕೀಟನಾಶಕ ಮಾದರಿಗಳನ್ನು ತೆಗೆದು ಗುಣ ನಿಯಂತ್ರಣ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ. ಹಾಗೆಯೇ ಮಾರಾಟಗಾರರು, ಸರಬರಾಜುದಾರರು, ವಿತರಕರು ಮತ್ತು ಉತ್ಪಾದಕರಿಗೂ ನೋಟಿಸ್ ಮೂಲಕ ತಿಳುವಳಿಕೆ ಪತ್ರ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಜಾರಿ ದಳ-೨ ಸಹಾಯಕ ನಿರ್ದೇಶಕ ಅಶ್ವತ್ಥ್ನಾರಾಯಣ, ಕೃಷಿ ಅಧಿಕಾರಿ ಶೋಭಾ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
(Visited 1 times, 1 visits today)