
ತುಮಕೂರು: ಪಂಚಾ0ಗ ನೋಡುವುದಕ್ಕಿಂತ ನಮ್ಮ ದೇಹದ ಪಂಚ ಅಂಗಗಳ ಕಡೆ ಗಮನ ನೀಡಿ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನವಿರಲಿ” ಎಂದು ಪ್ರಖ್ಯಾತ ಪವಾಡ ಬಯಲು ಸಂಶೋಧಕ ಹಾಗೂ ಚಿಂತಕ ಪ್ರೊ.ಹುಲಿಕಲ್ ನಟರಾಜ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪವಾಡ ಬಯಲು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ತಮ್ಮ ವಿಶಿಷ್ಟ ಶೈಲಿಯ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸಿದ ಅವರು, ಹಲವು ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಸಾಬೀತುಪಡಿಸಿದರು.
“ಮನುಷ್ಯ ಕಂಡುಹಿಡಿದ ತಂತ್ರಜ್ಞಾನ ಸದಾ ಅಪ್ಡೇಟ್ ಆಗುತ್ತಿದೆ, ಆದರೆ ಮನುಷ್ಯನ ಮನಸ್ಸು ಮಾತ್ರ ಔಟ್ ಡೇಟೆಡ್ ಆಗುತ್ತಿದೆ. ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಬೇಕೇ ಹೊರತು ಅದಕ್ಕೆ ದಾಸರಾಗಬಾರದು. ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರ ಸರಿದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನವೇ ನಿಜವಾದ ಶಕ್ತಿ. ಇಂದಿನ ಶಿಕ್ಷಣ ಮಾರುಕಟ್ಟೆಯ ಸರಕಾಗುವುದಕ್ಕಿಂತ ಮಾನವೀಯತೆಯ ಸರಕಾಗಬೇಕಿದೆ. ಶಿಕ್ಷಣವು ಕೇವಲ ಪರೀಕ್ಷೆಗಾಗಿ ಇರದೆ, ಪ್ರತಿಭಾವಂತರನ್ನು ಮತ್ತು ಪ್ರಜ್ಞಾವಂತರನ್ನು ಸೃಷ್ಟಿಸಬೇಕು. ಸಮಾಜದಲ್ಲಿರುವ ಮೂಢನಂಬಿಕೆಗಳು ಅಳಿಯಬೇಕು ಮತ್ತು ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಚಿಂತನೆ ಬೆಳೆಯಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕ ಗಳಿಸುವ ಯಂತ್ರಗಳನ್ನು ಸೃಷ್ಟಿಸಬಾರದು. ಅದು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು” ಎಂದರು.
ಕಾರ್ಯಕ್ರಮದುದ್ದಕ್ಕೂ ಹುಲಿಕಲ್ ನಟರಾಜ್ ಅವರು ನಡೆಸಿಕೊಟ್ಟ ವೈಜ್ಞಾನಿಕ ಪ್ರಯೋಗಗಳು ಮತ್ತು ಚಮತ್ಕಾರಗಳ ಹಿಂದಿನ ರಹಸ್ಯಗಳನ್ನು ಕಂಡು ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಕೇವಲ ಮನರಂಜನೆ ಮಾತ್ರವಲ್ಲದೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.ಕೋಟಿ ವರ್ಷಗಳ ಕ್ಯಾಲೆಂಡರ್ ಅನ್ನು ನೆನಪಿನಲ್ಲಿರಿಸಿಕೊಂಡು ದಿನಾಂಕಗಳನ್ನು ಹೇಳುವ ಕ್ಯಾಲೆಂಡರ್ ಶಿವಕುಮಾರ್ ತಮ್ಮ ದಿನಾಂಕಗಳನ್ನು ಕಂಡುಕೊಳ್ಳುವ ವಿಧಾನವನ್ನು ಪ್ರದರ್ಶಿಸಿದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಚೆನ್ನಬಸವ ಪ್ರಸಾದ್, ಜಂಟಿ ಕಾರ್ಯದರ್ಶಿ ಡಾ.ಸಾಯಿ ಪ್ರಸಾದ್, ಹಿರಿಯ ಕಾರ್ಯ ನಿರ್ವಾಹಕ ಸದಸ್ಯ ಮುನಿಗಂಗಪ್ಪ, ಶೈಕ್ಷಣಿಕ ಸಂಯೋಜಕರಾದ ಮಿಥಿಲಾ, ಮುಖ್ಯೋಪಾಧ್ಯಾಯಿನಿ ವನಿತಾ ಕೆ. ಉಪಸ್ಥಿತರಿದ್ದರು. ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಈ ವಿಶಿಷ್ಟ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಟಿ.ನರೇಂದ್ರಬಾಬು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಿಕ್ಷಕಿ ಶಶಿಕಲಾ ಟಿ.ಎಸ್. ಸ್ವಾಗತಿಸಿದರು. ಶಿಕ್ಷಕಿ ಎಚ್.ಬಿ. ಸುಮಾ ವಂದಿಸಿದರು.

