ತುಮಕೂರು: ಸಿದ್ದಗಂಗಾ ಶ್ರೀಗಳ ಕುರಿತು ಬರೆಯುವುದೆಂದರೆ ಭಗವಂತನ ಕುರಿತು ಬರೆದಂತೆ. ಹಾಗಾಗಿ ಶ್ರೀಸಿದ್ದಗಂಗಾ ಶ್ರೀಗಳ ಬಗ್ಗೆ ಕನ್ನಡ, ಸಂಸ್ಕೃತದಲ್ಲಿ ಇರುವ ಸಾಹಿತ್ಯವನ್ನು ಇಂಗ್ಲಿಷ್ಗೆ ತರ್ಜುಮೆ ಮಾಡಿ, ನಾಡಿನ ಮೂಲೆ ಮೂಲೆಗೂ ತಲುಪುವಂತೆ ಮಾಡಬೇಕಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ನಾಡೋಜ ಗೋ.ರು.ಚನ್ನಬಸಪ್ಪ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀಉದ್ಯಾನ ಶಿವಯೋಗಿಗಳ ಸಮುದಾಯ ಭವನದಲ್ಲಿ ಜಾನಪದ ವಿದ್ವಾಂಸ ಹಾಗೂ ಸಿದ್ದಗಂಗಾ ಮಾಸಪತ್ರಿಕೆಯ ಸಂಪಾದಕರಾದ ಹೆಚ್.ಎಸ್.ಸಿದ್ದಗಂಗಪ್ಪ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಜೀವನ, ಸಾಧನೆ, ಸಂದೇಶ ಕುರಿತು ಬರೆದಿರುವ ಪದ್ಮಭೂಷಣ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಎಂಬ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು,ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಭಕ್ತರಲ್ಲಿಯೇ ದೇವರನ್ನು ಕಂಡವರು.ಧಾರ್ಮಿಕತೆಗೆ ಹೊಸ ಭಾಷ್ಯ ಬರೆದ ಇವರನ್ನು ವರ್ಣಿಸಿದರೆ, ದೇವರನ್ನು ಪರಿಚಯಿಸಿದಂತೆ ಎಂದರು.
ಪದ್ಮಭೂಷಣ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಕೃತಿಯ ಲೇಖಕರಾದ ಹೆಚ್.ಎಸ್.ಸಿದ್ದಗಂಗಪ್ಪ ಅವರು ಶ್ರೀಗಳನ್ನು ಹತ್ತಿರದಿಂದ ಬಲ್ಲವರು ಹಾಗಾಗಿಯೇ ಹೆಚ್ಚು ನಿಖರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ.ನಾಡಿನ ಹಲವು ಗುರುಗಳನ್ನು ನೋಡಿದ್ದೇನೆ.ಯಾವ ಗುರುವರ್ಯರಿಗೂ ಶ್ರೀಶಿವಕುಮಾರಸ್ವಾಮೀಜಿಗಳ ಕುರಿತು ಬಂದಿರುವಷ್ಟು ಕೃತಿಗಳು ಪ್ರಕಟಗೊಂಡಿಲ್ಲ.ಹಾಗಾಗಿ ಇವರೆಲ್ಲಾ ಕೃತಿಗಳನ್ನು ಸಂಪಾದಿಸಿ,ಅವುಗಳನ್ನು ಸಣ್ಣ ಸಣ್ಣ ಪುಸ್ತಕದ ರೂಪದಲ್ಲಿ ಇಂಗ್ಲಿಷ್ಗೆ ಭಾ಼ಷಾಂತರಿಸುವ ಕೆಲಸ ಆದರೆ ಹೆಚ್ಚಿನವರಿಗೆ ಶ್ರೀಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ.ಶ್ರೀಗಳ ಜೀವನ ಶಾಲಾ, ಕಾಲೇಜುಗಳ ಪಠ್ಯವಾಗುವಂತೆ ಮಾಡಿದರೆ ಮತ್ತಷ್ಟು ಜನರನ್ನು ತಲುಪಬಹುದು ಎಂದು ಗೋ.ರು.ಚನ್ನಬಸಪ್ಪ ನುಡಿದರು.
ಲೇಖಕರಾಗಿರುವ ಹೆಚ್.ಎಸ್.ಸಿದ್ದಗಂಗಪ್ಪ ಅವರು ಡಾ.ಶ್ರೀಶಿವಕುಮಾರಸ್ವಾಮಿಜಿಗಳ ಸಮಗ್ರ ಚಿತ್ರಣವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ಇದು ಶ್ರೀಗಳ ಬಗ್ಗೆ ಸಂಶೋಧನೆ ಕೈಗೊಳ್ಳುವವರಿಗೆ ಒಳ್ಳೆಯ ಅಕರ ಗ್ರಂಥವಾಗಲಿದೆ.ಪದ್ಮಭೂಷಣ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಕೃತಿ ಪುರಾಣದ ಗ್ರಂಥವಲ್ಲ. ಪ್ರಮಾಣದ ಗ್ರಂಥ.ಇAತಹ ಕೃತಿಯನ್ನು ಪ್ರತಿಯೊಬ್ಬರು ಕೊಂಡು ಓದುವಂತಾಗಬೇಕು ಎಂದು ಗೋ,ರು.ಚನ್ನಬಸಪ್ಪ ತಿಳಿಸಿದರು.
ಕೃತಿಯ ಲೇಖಕರಾದ ಹೆಚ್.ಎಸ್.ಸಿದ್ದಗಂಗಪ್ಪ ಮಾತನಾಡಿ,ಸುಮಾರು ೯೦೦ ಪುಟಗಳ ಈ ಗ್ರಂಥದಲ್ಲಿ ಶ್ರೀಗಳ ಪ್ರತಿಯೊಂದು ಕ್ಷಣವನ್ನು ಅಕ್ಷರ ರೂಪಕ್ಕೆ ತರಲು ಪ್ರಯತ್ನಿಸಲಾಗಿದೆ.ಪ್ರತಿದಿನ ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯ ವೇಳೆ ಶ್ರೀಗಳು ಮಾಡಿರುವ ನೀತಿ ಬೋಧನೆಯ ಭಾಷಣಗಳು, ವಿವಿಧ ಕೃತಿಗಳಿಗೆ ಬರೆದಿರುವ ಮುನ್ನುಡಿ, ಆಶಯನುಡಿಗಳ ಸಂಗ್ರಹವೂ ಇದೆ.ಸರಳ ಕನ್ನಡದಲ್ಲಿ ಎಲ್ಲರಿಗೂ ಅರಿವಾಗುವ ರೀತಿ ಈ ಕೃತಿಯನ್ನು ರಚಿಸಲಾಗಿದೆ.ಬಳ್ಳಾರಿಯ ಸಿರಗುಪ್ಪದ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಇದರ ಮುದ್ರಣದ ಜವಾಬ್ದಾರಿ ಹೊತ್ತಿದ್ದಾರೆ.ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಬಾಲಚಂದ್ರ ಅವರು, ಹೇಗೆ ಭಗವದ್ಗೀತೆಯನ್ನು ಇಸ್ಕಾನ್ ಸಂಸ್ಥೆಯವರು, ವಿವೇಕಾನಂದರನ್ನು ರಾಮಕೃಷ್ಣ ಮಿಷನರಿಗಳು ನಾಡಿಗೆ ಪರಿಚಯಿಸಿದ ರೀತಿ, ನಡೆದಾಡುವ ದೇವರಾಗಿದ್ದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಜೀವನ, ಸಾಧನೆ ಮತ್ತು ಸಂದೇಶಗಳನ್ನು ನಾಡಿನ ಎಲ್ಲಾ ಭಾಷೆಗಳಲ್ಲಿಯೂ ಮುದ್ರಿಸಿ, ಕಟ್ಟೆ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲಿದೆ.ಅದರ ಮೊದಲ ಹೆಜ್ಜೆ ಇದಾಗಿದೆ ಎಂದರು.
ಇದೇ ವೇಳೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘದಿAದ ಪದ್ಮಭೂಷಣ ಡಾ.ಶ್ರೀಶಿವಕುಮಾರಸ್ವಾಮಿಜಿಗಳು ಕೃತಿಯ ಲೇಖಕರಾದ ಹೆಚ್.ಎಸ್.ಸಿದ್ದಗಂಗಪ್ಪ ಅವರಿಗೆ ಶ್ರೀಸಿದ್ದಗಂಗಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೋ.ರಂ.ಬಸವರಾಜು ಅವರುಗಳು ಕೃತಿಯ ಕುರಿತು ಮಾತನಾಡಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರಸ್ವಾಮೀಜಿಗಳು,ಗೀತಾಂಜಲಿ ಗ್ರಾಫಿಕ್ ಮಾಲೀಕರದ ಜಿ.ನಾಗಸುಂದರ್,ಗುತ್ತಿಗೆದಾರರಾದ ಆರ್.ಸಿ.ಪಂಪನಗೌಡರ್,ಮುದ್ರಣ್ಣನವರು, ಮರೇಗೌಡ ಸೇರಿದಂತೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.