ತುಮಕೂರು: ಜಗತ್ತಿಗೆ ಮಾದರಿಯಾಗಿರುವ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ಆಚಾರವಿಚಾರಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ದೇಶಪ್ರೇಮ, ಸಹಬಾಳ್ವೆ, ಭಾವೈಕ್ಯತೆಯ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಬಿಜೆಪಿ ಮುಖಂಡರೂ ಆದ ಎಸ್.ಪಿ. ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್ ಹೇಳಿದರು.
ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ೩೯ನೇ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಭಾನುವಾರ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯವರು ಶ್ರೀ ಕೃಷ್ಣ, ಮಹಾಭಾರತ, ಭಗವದ್ಗೀತೆಯ ತತ್ವಾದರ್ಶಗಳನ್ನು ಹೊಸತಲೆಮಾರಿನವರಿಗೆ ಪರಿಚಯಿಸುವ, ನಮ್ಮ ಸಂಸ್ಕೃತಿ, ಪರಂಪರೆಯ ಮಹತ್ವ ಸಾರುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದರ ಜೊತೆಗೆ, ಕಣ್ಮರೆಯಾಗುತ್ತಿರುವ ನಮ್ಮ ಸಾಂಪ್ರದಾಯಕ ಕ್ರೀಡೆಗಳು, ಗೀತಗಾಯನ, ಕಂಠಪಾಠ, ಪ್ರಬಂಧ ರಚನೆ, ನೆನಪಿನ ಶಕ್ತಿ ಹೆಚ್ಚಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳು ಹಾಗೂ ಹಿರಿಯರು ಸಂಭ್ರಮಿಸುವ ವೇದಿಕೆ ಕಲ್ಪಿಸಿದ್ದಾರೆ. ಮಕ್ಕಳಲ್ಲಿ ಧೈರ್ಯ, ಸಾಹಸ, ಧಾರ್ಮಿಕ ಭಾವನೆ ಮೂಡಿಸುವ, ಸಂಸ್ಕಾರ ಬೆಳೆಸುವ ಕಾರ್ಯಕ್ರಮಗಳ ಮೂಲಕ ಆಚರಣಾ ಸಮಿತಿ ಎಲ್ಲರನ್ನೂ ಒಟ್ಟಗೂಡಿಸಿ, ಮಕ್ಕಳಲ್ಲಿ ಸ್ನೇಹ, ಸಹಬಾಳ್ವೆಯ ಗುಣ ಬೆಳೆಸುವ ಕಾರ್ಯಕ್ರಮ ಮಾಡುತ್ತಿದೆ ಎಂದು ಎಸ್.ಪಿ.ಚಿದಾನಂದ್ ಹೇಳಿದರು.
ಈ ತಿಂಗಳ ೧೭ರಂದು ೩೯ನೇ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ವಿವಿಧ ವಯೋಮಾನದ ಮಕ್ಕಳು ಹಾಗೂ ಹಿರಿಯರಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ವೇಳೆ ಜನಪದ ಗೀತೆ, ಭಜನಾ ಸ್ಪರ್ಧೆ, ನೆನಪಿನಶಕ್ತಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಂದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮುಂದಿನ ಭಾನುವಾರ ಭಗವದ್ಗೀತಾ ಕಂಠಪಾಠ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ದೇವರನಾಮ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸ್ಪರ್ಧೆಯ ನಾನಾ ವಿಭಾಗಗಳ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುತ್ತದೆ.
ಈ ವೇಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷೆ ರೇಖಾ ಮಹೇಶ್, ಗೌರವಾಧ್ಯಕ್ಷ ಸಂದೀಪ್ಗೌಡ, ಉಪಾಧ್ಯಕ್ಷರಾದ ಗ.ಸಿ.ಶ್ರೀನಿವಾಸ್, ಡಾ.ಜಿ.ಎಸ್.ಕೆಂಪಯ್ಯ, ಜಯಶಂಕರಮೂರ್ತಿ, ರೇಖಾ ಶಿವಕುಮಾರ್, ವಸಂತ ರಂಭಾಪುರಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಶಂಕರ್ ಉಪ್ಪಾರಹಳ್ಳಿ, ಅನಿತ ರಮೇಶ್, ಕಾರ್ಯದರ್ಶಿ ಜ್ಯೋತಿ ಚಂದನ್, ಖಜಾಂಚಿ ಕೆ.ಪರಶುರಾಮಯ್ಯ, ಪದಾಧಿಕಾರಿಗಳಾದ ಕಲ್ಪನಾ ಪ್ರಸಾದ್, ಪಲ್ಲವಿ ಅಶ್ವಿನ್, ರೂಪ ಶಿವಮಾಧು, ಪುಟ್ಟರುದ್ರಯ್ಯ, ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)