
ಪಾವಗಡ: ತಾಲ್ಲೂಕಿನ ಜಂಗಮರಹಳ್ಳಿ ಗ್ರಾಮದಲ್ಲಿ ೬೦ ಅಡಿ ಆಳದ ನೀರಿನ ಬಾವಿಗೆ ಆಕಸ್ಮಿಕವಾಗಿ ಬಿದ್ದ ಎಚ್ಎಫ್ ತಳಿಯ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸತತ ೪ ಗಂಟೆ ೧೨ ನಿಮಿಷಗಳ ಸಾಹಸಮಯ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಿದ್ದಾರೆ.
ಪಾವಗಡ ತಾಲೂಕಿನ ಜಂಗಮರಹಳ್ಳಿ ಗ್ರಾಮದ ಶಿವಕುಮಾರ್ ಅವರ ಎಚ್ಎಫ್ ತಳಿಯ ಹಸು ತೋಟದಲ್ಲಿ ಮೇಯುತ್ತಿರುವ ವೇಳೆ ಕಾಲು ಜಾರಿ ಸುಮಾರು ೬೦ ಅಡಿ ಆಳದ ನೀರಿನ ಬಾವಿಗೆ ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪಾವಗಡ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಹಗ್ಗ, ಹೋಸ್ ಸೇರಿದಂತೆ ವಿವಿಧ ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕರಾದ ವೆಂಕಟೇಶ ನಾಡಗೌಡ, ನಾಗೇಶ ಎಂ.ಎನ್., ಚಾಲಕ ತಂತ್ರಜ್ಞ ಶೇಕ್ ಮನ್ಸೂರ್ ಅಹ್ಮದ್ ಹಾಗೂ ಅಗ್ನಿಶಾಮಕರಾದ ಸಂದೀಪ ದಾಮೋದರ ನಾಯಕ ಮತ್ತು ಹರೀಶ್ ಎನ್.ಎಂ. ಅವರ ತಂಡ ಸತತ ೪ ಗಂಟೆ ೧೨ ನಿಮಿಷಗಳ ಕಾಲ ಶ್ರಮಿಸಿ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಮಾಲೀಕರಿಗೆ ಒಪ್ಪಿಸಿದ್ದಾರೆ
ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಮತ್ತು ಜೀವ ರಕ್ಷಣೆಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

