ಬೆಂಗಳೂರು/ತುಮಕೂರು: “ಭಾರತ್ ಜೋಡೋ” ಲೋಗೋವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಲೋಗೋ ಅನಾವರಣವು ರಾಜ್ಯಾದ್ಯಂತ “ಭಾರತ್ ಜೋಡೋ” ಕಾರ್ಯಕ್ರಮದ ಅನುಷ್ಠಾನದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಹೊಸ ಲೋಗೋವು ಏಕತೆ, ಒಗ್ಗಟ್ಟು, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕರ್ನಾಟಕದ ಜನತೆಯ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. “ಭಾರತ್ ಜೋಡೋ” ಕಾರ್ಯಕ್ರಮದ ಮೂಲ ಆಶಯ ಹಾಗೂ ದೂರದೃಷ್ಟಿಯನ್ನು ಪ್ರತಿನಿಧಿಸುವ ರೀತಿಯಲ್ಲಿ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟç ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ “ಭಾರತ್ ಜೋಡೋ” ಎಂದು ಹೇಳಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ರೂಪಿಸುವ ನಿಟ್ಟಿನಲ್ಲಿ “ಭಾರತ್ ಜೋಡೋ” ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು ೨೫೫ ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು ಎಂದು ತಿಳಿಸಿದರು.
ಲೋಗೋ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ವೃತ್ತಿಪರವಾಗಿ ನಡೆಸುವ ಉದ್ದೇಶದಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ಗೆ ವಹಿಸಲಾಗಿತ್ತು ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್ ವತಿಯಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿ ಹಾಗೂ ಮೌಲ್ಯಮಾಪನ ನಡೆಸಿದ ಬಳಿಕ ಎರಡು ಲೋಗೋಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಈ ಎರಡೂ ವಿನ್ಯಾಸಗಳನ್ನು ಅಂತಿಮವಾಗಿ ಅನುಮೋದಿಸಲಾಯಿತು. ಎರಡೂ ಅಂತಿಮ ವಿನ್ಯಾಸಗಳಲ್ಲಿನ ಪ್ರಮುಖ ಅಂಶಗಳು ಹಾಗೂ ಪರಿಕಲ್ಪನೆಗಳನ್ನು ಸೃಜನಾತ್ಮಕವಾಗಿ ಸಂಯೋಜಿಸಿ, “ಭಾರತ್ ಜೋಡೋ” ಕಾರ್ಯಕ್ರಮಕ್ಕೆ ವಿಶಿಷ್ಟ ಹಾಗೂ ಅರ್ಥಪೂರ್ಣ ದೃಶ್ಯ ಗುರುತನ್ನು ನೀಡುವ ಅಂತಿಮ ಲೋಗೋವನ್ನು ರೂಪಿಸಲಾಗಿದೆ ಎಂದರು.
(Visited 1 times, 1 visits today)





