ಚಿಕ್ಕನಾಯಕನಹಳ್ಳಿ:
ದೊಡ್ಡವರ ಬಾಯಿಯ ಮಾತು, ಹುಚ್ಚನ ಕೈನಲ್ಲಿರುವ ಕಲ್ಲು ಯಾರಿಗೆ ಬೇಕಾದರು ಬೀಸಬಹುದು ಎಂಬಂತಾಗಿದೆ ಇಂದು ಸಚಿವ ಜೆ.ಸಿ.ಮಾಧುಸ್ವಾಮಿಯವರ ಹೇಳಿಕೆ ಎಂದು ತಿಮ್ಲಾಪುರ-ಲಕ್ಷ್ಮಗೊಂಡನಹಳ್ಳಿ ಗ್ರಾಮದ ರೈತ ಗಂಗಾಧರಯ್ಯ ನುಡಿದರು.
ತಾಲೂಕಿನ ಕುಡಿಯುವ ನೀರಿನ ಹೇಮಾವತಿ ಯೋಜನೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪರಿಹಾರ ಕೊಡುವಂತೆ ಒತ್ತಾಯಿಸಿ ಹೇಮಾವತಿ ನಾಲೆಯ ಹತ್ತಿರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಈ ಬಗ್ಗೆ ಸಚಿವರನ್ನು ಕೇಳಲು ಸಂತ್ರಸ್ತ ರೈತರು ಅವರ ಮನೆಗೆ ಹೋದಾಗ ಬಾಯಿಗೆ ಬಂದಂತೆ ಬೈದು ಅಂದು ನೀವು ಎರಡು ಸಾವಿರ ರೂಪಾಯಿಗಳಿಗೆ ಹೇಸಿಗೆ ತಿಂದಿದ್ದೀರಿ, ಇಂದು ಅದರ ಪರಿಣಾಮವನ್ನು ಅನುಭವಿಸಿ. ಎಂದು ಹೀನಾಯವಾಗಿ ರೈತರನ್ನು ನಿಂದಿಸಿ ಮನೆಯಿಂದ ಹೊರಗೆ ಅಟ್ಟಿದರು ಎಂದು ಸುಮಾರು 40 ವರ್ಷಗಳಿಂದ ಜೆ.ಸಿ.ಮಾಧುಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿದ್ದ ಗಂಗಾಧರಯ್ಯ ತಮ್ಮ ಆಕ್ರೋಶವನ್ನು ಹೊರಹಾಕಿದರು.
2011 ರಲ್ಲಿ ಆರಂಭವಾದ ಹೇಮಾವತಿ ಕಾಮಗಾರಿಗೆ, ಮೊದಲು ಬಿಟ್ಟುಕೊಟ್ಟದ್ದೆ ನಮ್ಮ ಜಮೀನು, 34/2. ಇವತ್ತಿನ ಈ ಘಟನೆಗೆ ಕಾರಣ, ಮಾನ್ಯ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರ ಮನೆಗೆ ಹೋಗಿ 6 ತಿಂಗಳ ಮುಂಚೆಯೇ ನಾನು ಇನ್ನು ಸಹ 8-10 ಜನರ ಪರಿಹಾರದ ಹಣ ಬರಬೇಕಾಗಿದೆ, ಕೊಡಿಸಿ ಕಾಮಗಾರಿಯನ್ನು ಮುಂದುವರೆಸಿ ಎಂದಿದ್ದಕ್ಕೆ, ಕಾಮಗಾರಿ ನಡೆಸಲು ಬಿಡದಿದ್ದರೆ, ಪೊಲೀಸ್ ಕರೆಸಿ ಕೆಲಸ ಮಾಡಿಸುತ್ತೇವೆ, ಬಿಡದಿದ್ದರೆ ನಿಮ್ಮನ್ನು ಒದ್ದು ಒಳಗೆ ಹಾಕಿಸುತ್ತೇವೆ ಎಂದರು. ನಾವು ಇವರಿಗೆ ಅಧಿಕಾರ ಕೊಡುವುದು ಜನಗಳ ಮೇಲೆ ದಬ್ಬಾಳಿಕೆ ನಡೆಸಲು ಅಲ್ಲ ಎಂದು ಅವರು ಖಂಡಿಸಿದರು.
ಹಿಂದಿನ ಶಾಸಕರಾದ ಸಿ.ಬಿ.ಸುರೇಶ್ ಬಾಬುರನ್ನು ಸಹ ಭೇಟಿ ಮಾಡಿ ವಿನಂತಿಸಿದ್ದೆವು, ಅವರು ಪರಿಹಾರ ಕೊಡಿಸುವ ಭರವಸೆ ಕೊಟ್ಟಿದ್ದರು. ನಾವು ನಮ್ಮ ಸ್ವಂತ ಪರಿಶ್ರಮದಿಂದ ಪರಿಹಾರ ಪಡೆದುಕೊಂಡಿದ್ದೇವೆಯೇ ಹೊರತು ಇದು ಮಾಧುಸ್ವಾಮಿಯವರ ಭಿಕ್ಷೆಯಲ್ಲ. ಇನ್ನು ಉಳಿದಿರುವ ನಮ್ಮ ರೈತ ಬಂಧುಗಳ ಪರಿಹಾರದ ಹಣಕ್ಕಾಗಿ ಈ ಹೋರಾಟ ಎಂದರು. ಈ ವಿಷಯವಾಗಿ ಸಚಿವರನ್ನು ಭೇಟಿ ಮಾಡಿದರೆ, ಅಂದು 2 ಸಾವಿರ ರೂಪಾಯಿಗೆ ಹೇಸಿಗೆ ತಿಂದ ನೀವು ಇಂದು ನನ್ನ ಬಳಿ ಹಣಕ್ಕಾಗಿ ಬಂದಿದ್ದೀರಿ ಎಂದು ಹೀಯಾಳಿಸಿದರು.
ನಾವು ಪ್ರಾಮಾಣಿಕ ರೈತರು, ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಕುತ್ತಿಗೆ ಕತ್ತರಿಸಿಕೊಂಡು ಸಾಯುತ್ತೇವೆ, ಹೊರತು ಸಚಿವರು ಹೇಳಿದ ಹಾಗೆ ಬೇರೆಯವರ ದುಡ್ಡಿಗೆ ಆಸೆ ಪಡುವುದಿಲ್ಲ. ಕಾಮಗಾರಿಗಾಗಿ ಬಿಟ್ಟುಕೊಟ್ಟಿರುವ ಜಮೀನುಗಳು ನಮ್ಮ ರೈತರದ್ದು, ಪರಿಹಾರದ ಹಣ ಸರ್ಕಾರದ್ದು, ಯಾರಪ್ಪನ ಮನೆಯ ಹಣವನ್ನೇನು ನಾವು ಕೇಳುತ್ತಿಲ್ಲ. ಶಾಸಕರು ಇದನ್ನು ವೈಭವೀಕರಿಸಿ ಹೇಳುವ ಅಗತ್ಯವೇನಿದೆ?
ನಮ್ಮ ರೈತರ ಪರಿಹಾರದ ಸಮಸ್ಯೆ ಇನ್ನು ಬಗೆಹರಿದಿಲ್ಲ, ರೈತರ ಜಮಿನನ್ನು ತೆಗೆದುಕೊಂಡು ಹೋಗಿದ್ದಾರೆ. ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಕ್ಕೆ, ನಮಗೆ ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಅವರು ಜಮೀನು ತೆಗೆದುಕೋಂಡಾಗ ನೀವೂ ಕೂಡ ಹಣತಿಂತಿದ್ದೀರಿ ಎಂದು ನಿಯತ್ತಾಗಿರುವ ನಮಗೆ ಹೇಳಿದರೆ ನಮ್ಮನ್ನೇನು ಇವರು ನಾಯಿಗಳನ್ನಾಗಿ ಮಾಡಿಕೊಂಡಿದ್ದಾರೆಯೇ?