ಕೊರಟಗೆರೆ:

      ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಶಾಲೆ ಮುಗಿಸಿ ತನ್ನ ತಂದೆಯೊಡನೆ ಮನೆಗೆ ವಾಪಾಸ್ಸು ಆಗುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

       ಪಟ್ಟಣದ ದೊಡ್ಡೇಗೌಡ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು ತುಮಕೂರು ಮಾರ್ಗದಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಮತ್ತು ಶಾಲೆ ಮುಗಿಸಿಕೊಂಡು ತಂದೆಯೊಟ್ಟಿಗೆ ಊರಿಗೆ ಹಿಂತಿರುತ್ತಿದ್ದ ದ್ವಿ ಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ.

      ತಾಲ್ಲೂಕಿನ ಸಿ.ಎನ್ ದುರ್ಗ ಹೋಬಳಿಯ ಮಾಲಿಂಗನಹಟ್ಟಿ ಗ್ರಾಮದ ವಾಸಿ ಗೋಪಾಲಕೃಷ್ಣ ತನ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದ್ದು, 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವರ್ಷಿತಾ(12ವರ್ಷ)ಎಂಬ ವಿದ್ಯಾರ್ಥಿನಿಯೇ ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಯಾಗಿದ್ದು, ತಂದೆಗೆ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

      ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕೊರಟಗೆರೆ ಪೋಲೀಸ್ ಠಾಣಾ ಪಿ.ಎಸ್.ಐ ಮುತ್ತುರಾಜು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

(Visited 13 times, 1 visits today)