
ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ನಲ್ಲಿ ಪ್ರಸ್ತುತ ನೂತನವಾಗಿ ಮೆನು ಸಿದ್ಧಪಡಿಸಲಾಗಿದ್ದು, ಈ ಮೆನುವಿನಂತೆ ಬೆಳಗಿನ ಉಪಹಾರದಲ್ಲಿ ರೈಸ್ಬಾತ್, ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ-ಸಾಂಬಾರ್-ಚಟ್ನಿ; ಮಧ್ಯಾಹ್ನದ ಊಟಕ್ಕೆ ಮುದ್ದೆ, ಅನ್ನ, ಸಾಂಬಾರ್, ಮೊಸರನ್ನ, ಚಪಾತಿ ಹಾಗೂ ರಾತ್ರಿ ಊಟಕ್ಕೆ ರೈಸ್ಬಾತ್ ಮತ್ತು ಮೊಸರನ್ನ ನೀಡಲಾಗುವುದು ಎಂದು ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ೪ ಇಂದಿರಾ ಕ್ಯಾಂಟೀನ್ಗಳೊAದಿಗೆ ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ ೨ ಇಂದಿರಾ ಕ್ಯಾಂಟೀನ್ಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಹೊಸದಾಗಿ ೨ ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗಿದ್ದು, ಮೇ ೧೭ರಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಉದ್ಘಾಟಿಸಿದ್ದಾರೆ.
ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಡಜನರು ಅವರ ಸಮತೋಲಿತ ಹಾಗೂ ಪೌಷ್ಠಿಕ ಆಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರವು ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ಅನ್ನು ಪ್ರಾರಂಭಿಸಿ ೫ ರೂ.ಗಳಿಗೆ ಬೆಳಗಿನ ಉಪಹಾರ ಹಾಗೂ ೧೦ ರೂ.ಗಳಿಗೆ ಮಧ್ಯಾಹ್ನ ಮತ್ತು ಸಂಜೆಯ ಊಟಗಳನ್ನು ಒದಗಿಸುತ್ತಿದೆ.
ನಗರದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಸುಸಜ್ಜಿತ ಮತ್ತು ಆಧುನಿಕವಾದ ಮಾಸ್ಟರ್ ಕಿಚನ್ ಅನ್ನು ಒಳಗೊಂಡಿವೆ. ಪ್ರತಿ ಕ್ಯಾಂಟೀನ್ಗಳಲ್ಲಿ ಶುದ್ಧ ಹಾಗೂ ಆರೋಗ್ಯಕರ ಕುಡಿಯುವ ನೀರನ್ನು ಸರಬರಾಜು ಮಾಡಲು ಆರ್.ಓ ಪ್ಲಾಂಟ್ನ್ನು ಅಳವಡಿಸಲಾಗಿದೆ.
ನಗರ ಸೇರಿದಂತೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ಬಡಜನರು, ಅಸಂಘಟಿತ ವಲಯದ ಕಾರ್ಮಿಕರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ಇಂದಿರಾ ಕ್ಯಾಂಟೀನಿನ ಪ್ರಯೋಜನ ಪಡೆಯುತ್ತಿದ್ದಾರೆ.
ಸಾರ್ವಜನಿಕರನ್ನು ಆಕರ್ಷಿಸಲು ನಗರದ ಇತರೆ ಖಾಸಗಿ ಹೋಟೆಲ್ಗಳಿಗಿಂತ ವಿಭಿನ್ನ ರೀತಿಯಲ್ಲಿ ಕ್ಯಾಂಟೀನುಗಳನ್ನು ಹೂಗುಚ್ಛ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶಿಷ್ಟ ಮತ್ತು ಮಾದರಿಯಾಗಿ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಂಡು ಇಂದಿರಾ ಕ್ಯಾಂಟೀನಿನ ಲಾಭ ಪಡೆಯಬೇಕು. ಊಟದ ರುಚಿ ಹಾಗೂ ಶುಚಿತ್ವದಲ್ಲಿ ಕೊರತೆಗಳಿದ್ದಲ್ಲಿ ನೇರವಾಗಿ ಪಾಲಿಕೆಗೆ ದೂರು ನೀಡಬಹುದಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಅಭಿಪ್ರಾಯ
ಹೊಸದಾಗಿ ಆರಂಭಿಸಲಾದ ಜಿಲ್ಲಾಸ್ಪತ್ರೆ ಆವರಣ ಮತ್ತು ಎಪಿಎಂಸಿ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ಗಳ ಲಾಭ ಪಡೆಯುತ್ತಿರುವ ಸಾರ್ವಜನಿಕರನ್ನು ಮಾತನಾಡಿಸಿದಾಗ ಉತ್ತಮವಾದ ರುಚಿಯಾದ ಆಹಾರವನ್ನು ಕಡಿಮೆ ಬೆಲೆಯಲ್ಲಿ ವಿತರಿಸುತ್ತಿರುವುದರಿಂದ ಗ್ರಾಮೀಣ ಭಾಗದಿಂದ ಆಗಮಿಸುತ್ತಿರುವ ನಮ್ಮಂತಹವರಿಗೆ ಅನುಕೂಲವಾಗಿದೆ ಎಂದು ಖುಷಿಯಿಂದ ಹೇಳುತ್ತಾರೆ ಎಂದು ಅಶ್ವಿಜ ಅವರು ತಿಳಿಸಿದ್ದಾರೆ.
(Visited 1 times, 1 visits today)