ತುಮಕೂರು: ಅಂದು ಅನಂತಮೂರ್ತಿ ಅವರು ಆರಂಭಿಸಿದ ಚಲನೆಯು ಇಂದು ಬಾನು ಮುಷ್ತಾಕ್ರಿಂದ ಪೂರ್ಣವಾಗಿದೆ. ಬಾನು ಮತ್ತು ಭಾಸ್ತಿ ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದು ಕನ್ನಡ ಭಾಷೆಯ ಕಂಪನ್ನು ಜಗತ್ತಿಗೆ ಪಸರಿಸಿದ್ದಾರೆ ಹಾಗೂ ಈ ಪ್ರೇರಣೆಯಿಂದ, ಬಾನು ಅವರ ಕಥೆಗಳ ಪ್ರಭಾವದಿಂದ ಇನ್ನಷ್ಟು ಕನ್ನಡ ಮೂಲ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಯಲಿದೆ ಎಂದು ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ಕುಂಡದ ಬೇರು ಕಥಾ ಸಂಕಲನ ಬಿಡುಗಡೆ  ಸಮಾರಂಭದಲ್ಲಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿಲಿಟರಿ ಪ್ರಕಾಶನ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕುಂಡದ ಬೇರು ಕಥಾ ಸಂಕಲನನ್ನು ಲೋಕಾರ್ಪಣೆಗೊಳಿಸಿದ ಅವರು “ಲೇಖಕಿ ಪ್ರತಿಭಾ ನಂದಕುಮಾರ್ ಅವರ ಮಾತನ್ನು ನೆನೆಯುತ್ತಾ ಬದುಕು ಮತ್ತು ಸಾಹಿತ್ಯದ ನಡುವಿನ ಗೆರೆಯನ್ನು ಅಳಿಸಿದಾಗ ಕನ್ನಡದ ಅಪ್ಪಟ ಸಾಹಿತ್ಯದ ಗುರುತಿಸುವಿಕೆ ಸಾಧ್ಯ” ಎಂದರು. ಕುಂಡದ ಬೇರು ಕೃತಿಯ ಕುರಿತು ಮಾತನಾಡಿದ ಅವರು “ಜಾತಿಯ ಪ್ರಜ್ಞೆಯನ್ನು, ಹರೆಯದ ಭಾವಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಇಲ್ಲಿನ ಕಥೆಗಳು ಚೊಚ್ಚಲ ಕೃತಿ ಅನ್ನಿಸದಷ್ಟು ಸಶಕ್ತವಾಗಿವೆ ಎಂದರು.
ನಂತರ ಕೃತಿ ಕುರಿತು ಮಾತು ಆರಂಭಿಸಿದ ವಿಮರ್ಶಕಿ ಗೀತಾ ವಸಂತ ಅವರು “ಹೆಣ್ಣು ಮಕ್ಕಳ ಕಥನ ವಿಸ್ತಾರವಾಗುತ್ತಿದೆ ಅಂದರೆ ಅವರ ಜಗತ್ತು ಸಹ ವಿಸ್ತಾರವಾಗುತ್ತಿದೆ ಎಂದರ್ಥ. ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಪ್ರಾದೇಶಿಕ – ಸಾಂಸ್ಕೃತಿಕ ವ್ಯತ್ಯಾಸವಿದ್ದರೂ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರೆತಿರುವುದು ಎಲ್ಲಾ ಹಣ್ಣುಗಳ ಕೇಂದ್ರ ಸಂವೇದನೆ ಒಂದೇ ಆಗಿರುವುದರಿಂದ. ಅವರು ಕನ್ನಡ ಜಗತ್ತನ್ನು ಮತ್ತು ಮುಸ್ಲಿಂ ಹೆಣ್ಣು ಮಕ್ಕಳ ಜಗತ್ತನ್ನು ವಿಶ್ವಾತ್ಮಕ ಭಾಷೆಯಾಗಿಸಿದ್ದಾರೆ. ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳ ನೋವಿನ ಮತ್ತು ಕ್ರೌರ್ಯದ ಭಾಷೆ ಒಂದೇ ಆಗಿರುತ್ತದೆ” ಎಂದರು. ನಂತರ ಕೃತಿಯ ಕುರಿತು “ಇಲ್ಲಿನ ಎಲ್ಲಾ ಕಥೆಗಳಲ್ಲಿ ಬಹು ಸೂಕ್ಷ್ಮವಾದ ಮಾನವೀಯ ನೆಲೆಗಳುಳ್ಳವಾಗಿದ್ದು ಹೆಣ್ಣು ಮತ್ತು ಗಂಡಿನ ಜಗತ್ತೆರಡನ್ನೂ ಸಹ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಇಲ್ಲಿ ದಟ್ಟವಾದ, ವೈವಿಧ್ಯಮಯವಾದ, ಸಾಂಸ್ಕೃತಿಕವಾಗಿ ಗ್ರಹಿಸುವ ಅನುಭವ ಲೋಕವಿದೆ” ಎಂದ ಅವರು ಮುಂದುವರೆಸುತ್ತಾ “ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ದೇಹ ಭಾಷೆಯ ಕುರಿತು ಮಾತನಾಡುವುದು ಸಾಧ್ಯವಾಗಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ತನ್ನ ದೇಹದ ಬಗ್ಗೆ, ಭಾವನೆಗಳ ಬಗ್ಗೆ ಹೆಣ್ಣು ಮುಕ್ತವಾಗಿ ಮಾತನಾಡುವುದು ವ್ಯರ್ಜ್ಯವಾಗದೆ. ಅದರಿಂದ ಅನೇಕ ಟ್ರೋಲ್ ಗಳನ್ನು ಹೆಣ್ಣುಮಕ್ಕಳು ಈಗಲೂ ಎದುರಿಸಬೇಕಾಗಿರುವುದು ವಿಪರ್ಯಾಸ” ಎನ್ನುತ್ತಾ ಮಮತಾ ಸಾಗರ್ ಅವರ ಕವನವು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದ ಸಾಮಾಜಿಕ ತಲ್ಲಣವನ್ನ ಪ್ರಸ್ತಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾ ಬಸವರಾಜು ಅವರು “ಸಾಮಾಜಿಕ ಒತ್ತಡಗಳೂ ಸಹ ಗಂಡನ್ನು ಮಾನವೀಯತೆಯಿಂದ ದೂರವಾಗಿಸಿ, ಗಂಡಾಳ್ವಿಕೆಯನ್ನು ಮುಂದುವರೆಸುವ ಕ್ರೌರ್ಯವನ್ನು ಇಲ್ಲಿನ ಕಥೆಗಳು ಸಶಕ್ತವಾಗಿ ತೆರೆದಿಡುತ್ತವೆ. ತುಮಕೂರಿನ ಕಥೆಗಳು ಹೀಗೆ ಹಬ್ಬಲಿ” ಎಂದು ತುಮಕೂರಿನ ಕಥೆಗಾರರ ಪ್ರಾಮುಖ್ಯತೆಯನ್ನು ತಿಳಿಸಿದರು.
“ಇಲ್ಲಿನ ಕಥೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ದಟ್ಟವಾದ ನಿರೂಪಣೆಯಿಂದ ಕೂಡಿದ್ದು ಯಾವುದೇ ಸಿದ್ಧಾಂತ ತತ್ವ ಮತ್ತು ಹೇಳಿಕೆಗಳ ಹೇರಿಕೆಗಳಿಲ್ಲ” ಎಂದು  ಕವಿ ಶ್ರುತಿ ಬಿ. ಆರ್. ಕಥಾ ಸಂಕಲನದ ಕುರಿತು ಸ್ಪಂದಿಸಿದರು.
ನಂತರ ಮಾತನಾಡಿದ ಸಂಶೋಧನಾರ್ಥಿ ನವೀನ್ ಪೂಜಾರಳ್ಳಿ “ತುಮಕೂರು ಜಿಲ್ಲೆಯು ಕನ್ನಡ ಕಥಾ ಲೋಕಕ್ಕೆ ಹೆಚ್ಚು ಕಥೆಗಾರರನ್ನು ನೀಡಿದೆ. ಈಗ ಎಡೆಯೂರು ಪಲ್ಲವಿ ಹೊಸಸಂಕಲನ ನೀಡುತ್ತಿರುವುದು ಸಂತಸ ಮತ್ತು ಹೆಮ್ಮೆಯ ಕ್ಷಣ.  ಇಲ್ಲಿನ ಎಲ್ಲಾ ಕಥೆಗಳಲ್ಲಿ ಹೆಣ್ಣಿನ ಲೋಕಗಳು ದರ್ಶನವಾಗುತ್ತದೆ, ಈ ಕಥೆಗಳಲ್ಲಿ ಹೆಣ್ಣಿನ ತಲ್ಲಣ, ಸಂಕಷ್ಟಗಳನ್ನು ಹೇಳುತ್ತಲೇ ಜಾತಿ ಅಸ್ಪೃಶ್ಯತೆಯ ಕೌರ್ಯಗಳನ್ನು ಬಿಚ್ಚಿಡುತ್ತಾರೆ.  ಪುರುಷರಿಗೆ ಈ ಹೆಣ್ಣು ಲೋಕದ ಸಮಸ್ಯೆಯನ್ನು ತೋರಿಸುತ್ತಲೇ ಓದುಗರನ್ನು ಮಾನವೀಯರನ್ನಾಗಿಸುತ್ತಾರೆ” ಎಂದು ಮಾತನಾಡಿದರು.
ಸಮಾರಂಭದ ನಿರೂಪಣೆಯನ್ನು ಹೆಬ್ಬೂರಿನ ಸಯಾಯಕ ಪ್ರಾಧ್ಯಾಪಕ ಮಧುಸೂಧನ ಕೆ. ಪಿ. ಅವರು ನಿರ್ವಹಿಸಿದರೆ ಬರಹಗಾರರಾದ ಬಾ. ಹ. ರಮಾಕುಮಾರಿ, ರಂಗಮ್ಮ ಹೊದೇಕಲ್, ಸಿದ್ಧಲಿಂಗಪ್ಪ, ಗುರುಪ್ರಸಾದ್ ಕಂಟಲಗೆರೆ, ರವಿಕುಮಾರ್ ನೀಹ, ಗೋವಿಂದರಾಜು ಎಂ ಕಲ್ಲೂರು, ರೂಮಿ ಹರೀಶ್, ತುಂಬಾಡಿ ರಾಮಯ್ಯ, ಲತಾ ಶ್ರೀನಿವಾಸ್ ಮುಂತಾದ ಸಾಹಿತ್ಯ ಮನಸ್ಸುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(Visited 1 times, 1 visits today)