
ತುಮಕೂರು: ಯಶಸ್ಸು ಎಂಬುದು ಬದುಕಿನ ಸಾರ್ಥಕತೆಯ ಮೊದಲ ಮೆಟ್ಟಿಲು. ಮಕ್ಕಳಿಗೆ ಹಸಿವು, ಬಡತನ ಮತ್ತು ಅವಮಾನದ ಅರಿವಿದ್ದಾಗ ಮಾತ್ರ ಅವರಿಗೆ ಸಾಧನೆಯ ಹಾದಿಯಲ್ಲಿ ದೃಢವಾದ ಪ್ರೇರಣೆ ಲಭ್ಯವಾಗುತ್ತದೆ ಎಂದು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮ ಶೇಖರ್ ಅವರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮಾ. ೨೬ರ ಗುರುವಾರದಂದು ಆಯೋಜಿಸಲಾಗಿದ್ದ ೨೦೨೫-೨೬ನೇ ಸಾಲಿನ ಪ್ರೇರಣಾ ಉಪನ್ಯಾಸ – ೦೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ ಅವರು, ಯಶಸ್ಸು ಎಂಬುದು ನಮ್ಮ ಆಸೆ ಮತ್ತು ಆಕಾಂಕ್ಷೆಗಳಿಗೆ ಸಿಗುವ ತೃಪ್ತ ಭಾವನೆ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ, ಕಠಿಣ ಶ್ರಮ, ಏಕಾಗ್ರತೆ ಮತ್ತು ಛಲದಿಂದ ಮಾತ್ರ ಇದನ್ನು ಪಡೆಯಲು ಸಾಧ್ಯ. ಪೋಷಕರ ಕನಸುಗಳೊಂದಿಗೆ ವಿದ್ಯಾರ್ಥಿಗಳ ಕನಸುಗಳು ಸಮೀಕರಣಗೊಂಡಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಶಿಷ್ಯರು ತಮ್ಮ ಗುರುಗಳನ್ನು ಮೀರಿಸುವಂತಹ ಸ್ಥಾನಕ್ಕೇರಬೇಕು ಎಂದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನದ ಹಾದಿಯು ವಿದ್ಯಾರ್ಥಿಗಳಿಗೆ ಮಾದರಿಯಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಮಹಾರಾಜ್ ಅವರು ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಅತ್ಯಂತ ಅವಶ್ಯಕ. ಗುರಿ ಇಲ್ಲದ ಜೀವನ ವ್ಯರ್ಥ. ಬದುಕು ಅಂದುಕೊ0ಡಷ್ಟು ಸುಲಭವಲ್ಲ, ಹಾಗಾಗಿ ಮನುಷ್ಯ ಮನುಷ್ಯನಾಗಿಯೇ ಬದುಕುವುದು ಮೊದಲ ಗುರಿಯಾಗಲಿ. ಪ್ರಾಣಿಗಳಂತೆ ಶಿಸ್ತಿಲ್ಲದ ಬದುಕನ್ನು ಬಿಟ್ಟು ಪ್ರಾಮಾಣಿಕತೆಯನ್ನು ಜೀವ ನದ ಆಧಾರವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತುಮಕೂರು ವಿವಿಯ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ. ಪಿ. ಪರಮಶಿವಯ್ಯ ಮಾತನಾಡಿ, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದೆ. ಯುವಜನತೆ ಸಮಯವನ್ನು ವ್ಯರ್ಥ ಮಾಡದೆ, ಕಠಿಣ ಶ್ರಮ ಮತ್ತು ಶಿಸ್ತಿನಿಂದ ಸಾರ್ಥಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೇರಣಾ ಉಪನ್ಯಾಸ ಸಮಿತಿ ಅಧ್ಯಕ್ಷರಾದ ಪ್ರೊ. ಜಿ. ಸುದರ್ಶನ ರೆಡ್ಡಿ ಸ್ವಾಗತಿಸಿದರು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್ ಎಸ್. ವಂದಿಸಿದರು. ವೇದಿಕೆಯಲ್ಲಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್. ಎಸ್., ಸಮಿತಿ ಸಂಚಾಲಕರಾದ ಡಾ. ನೀಲಕಂಠ ಎನ್. ಟಿ., ಡಾ.ಅಶ್ವಿನಿ, ಡಾ. ವನಜಾಕ್ಷಿ ಇ. ಇನ್ನಿತರರು ಉಪಸ್ಥಿತರಿದ್ದರು.





