ಹುಳಿಯಾರು: ಖಾಸಗಿ ಶಾಲೆಗಳ ಮಿತಿಮೀರಿದ ಆರ್ಭಟ, ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುತ್ತಿರುವ ಇಂದಿನ ಆತಂಕಕಾರಿ ದಿನಗಳ ನಡುವೆಯೂ, ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆ (ಈಗ ಕೆಪಿಎಸ್, ಆಗ ಎಂಪಿಎಸ್) ಇಂದಿಗೂ ಪೋಷಕರು ಮತ್ತು ಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿ ನಿಂತಿದೆ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ಹೆಮ್ಮೆಯ ವಿದ್ಯಾಕೇಂದ್ರ, ಕೇವಲ ಒಂದು ಕಟ್ಟಡವಲ್ಲ. ಇದು ಹುಳಿಯಾರಿನ ಸಾಂಸ್ಕöÈತಿಕ ಮತ್ತು ಶೈಕ್ಷಣಿಕ ಚರಿತ್ರೆಯ ಜೀವಂತ ಸಾಕ್ಷಿಯಾಗಿದೆ.

ಲಕ್ಷಾಂತರ ಸಾಧಕರನ್ನು ರೂಪಿಸಿದ ಜ್ಞಾನ ದೇಗುಲ: ಶತಮಾನ ಕಂಡಿರುವ ಈ ಶಾಲೆಯಲ್ಲಿ ಓದಿ ಬೆಳೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೇಷ್ಠ ಸಾಹಿತಿಗಳು, ನುರಿತ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ರಾಜಕಾರಣಿಗಳು ಹಾಗೂ ದಕ್ಷ ಅಧಿಕಾರಿಗಳು ಬಹುಮುಖ್ಯವಾಗಿ ಸಾಮಾಜಿಕ ಕಳಕಳಿಯುಳ್ಳವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಈ ಜ್ಞಾನದೇಗುಲಕ್ಕೆ ಸಲ್ಲುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡ ಈ ಸುಂದರ ಕಟ್ಟಡವು ಹಿಂದೆ ತಾಲೂಕು ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು ಎಂಬ ಇತಿಹಾಸದ ಉಲ್ಲೇಖವಿದೆ. ಪ್ರಸ್ತುತ ಈ ಐತಿಹಾಸಿಕ ಆವರಣದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಯಶಸ್ವಿಯಾಗಿ ನಡೆಯುತ್ತಿದ್ದು, ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ದಾಖಲಾತಿಗೆ ಮುಗಿಬೀಳುತ್ತಿರುವ ಪೋಷಕರು!: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಈ ಕೆಪಿಎಸ್ ಶಾಲೆಗೆ ದಾಖಲಾತಿ ಪಡೆಯಲು ಪೋಷಕರು ವರ್ಷದ ಆರಂಭದಲ್ಲೇ ಮುಗಿಬೀಳುತ್ತಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಅತ್ಯುತ್ತಮ ನಿದರ್ಶನವೆಂಬತೆ, ಸರ್ಕಾರವು ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಪ್ರವೇಶಕ್ಕಾಗಿ ಕೇವಲ ೩೦ ಮಕ್ಕಳಿಗೆ ಮಾತ್ರ ಅಧಿಕೃತ ಅವಕಾಶ ಕಲ್ಪಿಸಿದೆ. ಆದರೆ ಈ ಶಾಲೆಯ ಮೇಲಿರುವ ಅಭೂತಪೂರ್ವ ನಂಬಿಕೆಯಿAದಾಗಿ ಪ್ರಸ್ತುತ ೬೦ ರಿಂದ ೭೦ ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಕಬ್ಬಿಣದಂತಿರುವ ಗೋಡೆಗಳು, ಆದರೆ ಗಿಡಗಳ ಆಕ್ರಮಣದ ಭೀತಿ: ನೂರು ವರ್ಷಗಳಿಗಿಂತಲೂ ಹಳೆಯದಾದ ಈ ಕಟ್ಟಡವನ್ನು ಸಾಂಪ್ರದಾಯಿಕ ಗಾರೆಯನ್ನು ಬಳಸಿ ಅತ್ಯಂತ ಬಲಿಷ್ಠವಾಗಿ ನಿರ್ಮಿಸಲಾಗಿದೆ. ಇಂದಿಗೂ ಇದರ ಗೋಡೆಗಳು ಕಬ್ಬಿಣದಂತೆ ಗಟ್ಟಿಯಾಗಿದ್ದು, ಬ್ರಿಟಿಷ್ ಕಾಲದ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿವೆ. ಆದರೆ, ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಅಲ್ಲಲ್ಲಿ ಗೋಡೆಗಳ ಮೇಲೆ ಮತ್ತು ಮೇಲ್ಛಾವಣಿಯ ಬಿರುಕುಗಳಲ್ಲಿ ಕಾಡು ಗಿಡಗಳು ಬೆಳೆದು ನಿಂತಿವೆ. ಈ ಗಿಡಗಳ ಬೇರುಗಳು ಗೋಡೆಯ ಆಳಕ್ಕೆ ಇಳಿಯುತ್ತಿರುವುದರಿಂದ ಐತಿಹಾಸಿಕ ಕಟ್ಟಡಕ್ಕೆ ಹಾನಿಯಾಗುವ ಆತಂಕ ಎದುರಾಗಿದೆ. ಗೋಡೆಗಳ ಮೇಲಿರುವ ಈ ಗಿಡಗಳನ್ನು ತಕ್ಷಣವೇ ಕಿತ್ತುಹಾಕಿ, ಸಣ್ಣಪುಟ್ಟ ಬಿರುಕುಗಳನ್ನು ಪ್ಲಾಸ್ಟರಿಂಗ್ ಮಾಡಿದರೆ ಈ ಭವ್ಯ ಕಟ್ಟಡವು ಇನ್ನೂ ನೂರಾರು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಸುಸ್ಥಿತಿಯಲ್ಲಿ ಬಾಳಿಕೆ ಬರಬಲ್ಲದಾಗಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳ ಉದಾಸೀನತೆ: ಆದರೆ, ದುರದೃಷ್ಟವಶಾತ್ ಶಿಕ್ಷಣದ ಹೆಸರಿನಲ್ಲಿ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳ ಹಣವನ್ನು ವೆಚ್ಚ ಮಾಡುವ ನಮ್ಮ ಸರ್ಕಾರ ಹಾಗೂ ಸಂಬAಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ಅಪರೂಪದ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಕನಿಷ್ಠ ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ಹೊಸ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲು ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡುವ ಇವರು, ಅತ್ಯಲ್ಪ ಹಣದಲ್ಲಿ ಇಂತಹ ಭವ್ಯ ಇತಿಹಾಸವಿರುವ ಕಟ್ಟಡವನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡಲು ಮುಂದಾಗುತ್ತಿಲ್ಲ ಎಂಬ ತೀವ್ರ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪಾರಂಪರಿಕ ಕಟ್ಟಡವಾಗಿ ಘೋಷಿಸಲು ಆಗ್ರಹ: ಇದು ಕೇವಲ ಕಲ್ಲು, ಮಣ್ಣು, ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿದ ಸಾಮಾನ್ಯ ಕಟ್ಟಡವಲ್ಲ. ಇದು ಹುಳಿಯಾರಿನ ಇತಿಹಾಸ, ಸಂಸ್ಕöÈತಿ ಮತ್ತು ಶೈಕ್ಷಣಿಕ ಅಸ್ಮಿತೆಯ ಹೆಮ್ಮೆಯ ಕುರುಹು. ಇಂತಹ ಪಾರಂಪರಿಕ ಹಿನ್ನೆಲೆಯುಳ್ಳ ಕಟ್ಟಡವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಪುರಾತತ್ವ ಇಲಾಖೆ ತಕ್ಷಣವೇ ಗಮನಹರಿಸಿ ಇದನ್ನು ‘ಪಾರಂಪರಿಕ ಶಾಲಾ ಕಟ್ಟಡ’ ಎಂದು ಘೋಷಿಸಿ, ಅಗತ್ಯವಿರುವ ಜೀರ್ಣೋದ್ಧಾರ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿದೆ.
ಮುಂದಿನ ತಲೆಮಾರಿಗೆ ಪ್ರೇರಣೆಯಾಗಿ ನಿಲ್ಲಿಸಿ: ನಾನು ಅಕ್ಷರ ಕಲಿತ ಹಾಗೂ ಅಕ್ಷರ ಕಲಿಸಿದ ಈ ಪವಿತ್ರ ಜ್ಞಾನದೇಗುಲ ಕೇವಲ ಇಟ್ಟಿಗೆ-ಗಾರೆಯ ಕಟ್ಟಡವಲ್ಲ, ಇದು ಹುಳಿಯಾರಿನ ಅಸ್ಮಿತೆ. ಇಂತಹ ಸಾಂಸ್ಕöÈತಿಕ ಪರಂಪರೆಯುಳ್ಳ ಶಾಲೆಯ ಗೋಡೆಗಳ ಮೇಲೆ ಗಿಡಗಳು ಬೆಳೆದು ಶಿಥಿಲಗೊಳ್ಳುತ್ತಿರುವುದನ್ನು ಕಂಡಾಗ ಮನಸ್ಸಿಗೆ ತೀವ್ರ ನೋವಾಗುತ್ತದೆ. ಹೊಸ ಕಾಂಕ್ರೀಟ್ ಗೋಡೆಗಳು ಜ್ಞಾನದ ಇತಿಹಾಸವನ್ನು ಸೃಷ್ಟಿಸಲಾರವು; ಆದರೆ ಇಂತಹ ಐತಿಹಾಸಿಕ ಪಾರಂಪರಿಕ ಕಟ್ಟಡಗಳು ಮುಂದಿನ ತಲೆಮಾರಿಗೆ ಪ್ರೇರಣೆಯಾಗಿ ನಿಲ್ಲುತ್ತವೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಅತ್ಯಲ್ಪ ವೆಚ್ಚದಲ್ಲೇ ಸಾಧ್ಯವಿರುವ ಈ ದುರಸ್ತಿ ಕಾರ್ಯವನ್ನು ಕೈಗೊಂಡು ನಮ್ಮ ಹೆಮ್ಮೆಯ ಶಾಲೆಯನ್ನು ಸಂರಕ್ಷಿಸಬೇಕು.
ಮುಂದಿನ ಪೀಳಿಗೆಗಾಗಿ ಉಳಿಸಿಕೊಡುವುದು ಕರ್ತವ್ಯ: ನಾವು ಬಾಲ್ಯದಲ್ಲಿ ಓದಿದ, ನಮ್ಮ ಬದುಕಿಗೆ ದಾರಿ ತೋರಿದ ನಮ್ಮ ಹೆಮ್ಮೆಯ ಶಾಲೆ ಇಂದು ಈ ಸ್ಥಿತಿಗೆ ತಲುಪಿರುವುದನ್ನು ಪ್ರತಿದಿನ ಕಣ್ಣಾರೆ ನೋಡುವಾಗ ಎದೆಯುರಿಯುತ್ತದೆ. ನಿತ್ಯ ಇಲ್ಲಿಗೆ ವಾಕಿಂಗ್ ಬಂದಾಗಲೆಲ್ಲಾ ಈ ಐತಿಹಾಸಿಕ ಕಟ್ಟಡದ ಗೋಡೆಗಳ ಮೇಲೆ ಬೆಳೆದಿರುವ ಗಿಡಗಳು, ಉದುರುತ್ತಿರುವ ಗಾರೆ ನಮ್ಮ ಹೆಮ್ಮೆಯ ಇತಿಹಾಸವನ್ನೇ ನುಂಗಿಹಾಕುತ್ತಿರುವAತೆ ಭಾಸವಾಗುತ್ತದೆ. ಈ ಭವ್ಯ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಕೈ ಮೀರಿ ಹೋಗುವ ಮುನ್ನವೇ ಸಂಬAಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉದಾಸೀನತೆ ಬಿಟ್ಟು ಎಚ್ಚರಗೊಳ್ಳಬೇಕಿದೆ. ಇತಿಹಾಸದ ಕುರುಹಾಗಿರುವ ಈ ಶಾಲೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿಕೊಡುವುದು ಅವರ ಕರ್ತವ್ಯ.
ದುರಸ್ತಿಗಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ: ಹೌದು ಬ್ರಿಟಿಷರ ಕಾಲದಲ್ಲಿ ಕಟ್ಟಿದ ಕಟ್ಟಡ ಈಗಲೂ ಕೂಡ ಗಟ್ಟಿಮುಟ್ಟಾಗಿದೆ. ಇಂತಹ ಕಟ್ಟಾಳುಗಳನ್ನು ಉಳಿಸಿಕೊಳ್ಳುವ ಸಲುವಾಗಿ ದುರಸ್ತಿಗಾಗಿ ಅನುದಾನಕ್ಕೆ ಎಸ್ಟಿಮೆಂಟ್ ಮಾಡಿಸಿ ಕಳಿಸಿಕೊಡಲಾಗಿದೆ. ಇನ್ನು ಅಪ್ರುವಲ್ ಆಗಿಲ್ಲ. ಅಪ್ರುವಲ್ ಆದ ತಕ್ಷಣ ದುರಸ್ಧಿಕಾರ್ಯ ಆರಂಭಿಸುತ್ತೇವೆ.

(Visited 1 times, 1 visits today)