
ತುಮಕೂರು: ಭೂಮಿ, ವಸತಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ,ವಿಶೇಷ ಘಟಕ ಯೋಜನೆಯ ಏಕಗವಾಕ್ಷಿ ನೀತಿ ಹಾಗೂ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ, ಜುಲೈ ೦೩ ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ದಲಿತ ಜನಾಗ್ರಹ ಸಮಾವೇಶವನ್ನು ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವುದಾಗಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಲಿತರ ಭೂಮಿ ಹಕ್ಕಿಗಾಗಿ ದಸಂಸ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ.ನಮ್ಮ ಹೋರಾಟದ ಭಾಗವಾಗಿಯೇ ಪಿಟಿಸಿಎಲ್ ಕಾಯ್ದೆಜಾರಿಗೆ ಬಂದರೂ ಸಮರ್ಪಕವಾಗಿ ದಲಿತರ ಜಮೀನು ಅವರಿಗೆ ದೊರೆತ್ತಿಲ್ಲ. ಪ್ರಸ್ತುತ ಡಿಸಿಎಂ ಆಗಿರುವ ದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಕಂದಾಯ ಮಂತ್ರಿಗಳು ಆಗಿದ್ದು, ಅದ್ಯತೆಯ ಮೇರೆಗೆ ದಲಿತರಿಗೆ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ದಲಿತರ ಹೋರಾಟದ ಫಲವಾಗಿ ಜಾರಿಗೆ ಬಂದ ಎಸ್.ಸಿ.ಪಿ ಮತ್ತು ಟಿ.ಎಸ್ಪಿ ಯೋಜನೆಯ ನಿಯಮಗಳನ್ನು ಮೀರಿ ಹಣಖರ್ಚು ಮಾಡಲಾಗಿದೆ. ಕಾಯ್ದೆ ಬಂದು ದಿನದಿಂದ ಇದುವರೆಗೂ ಸುಮಾರು ೩-೪.೫೦ ಲಕ್ಷಕೋಟಿ ರೂಗಳನ್ನು ಈ ವರ್ಗಗಳಿಗೆ ಖರ್ಚು ಮಾಡಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ ಬಹುತೇಕ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ, ರಸ್ತೆ ನಿರ್ಮಾಣದಂತಹ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ. ಇದರ ಬಗ್ಗೆ ಲೆಕ್ಕ ಕೇಳಿದರೂ ಸರಕಾರದಿಂದ ಉತ್ತರವಿಲ್ಲ. ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರೂ, ಪ್ರಸ್ತುತ ಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ ಆದರೂ ವಿಶೇಷ ಅಧಿವೇಶನ ಕರೆದು ದಲಿತರಿಗೆ ಮೀಸಲಿಟ್ಟ ಹಣವೆಷ್ಟು, ಎಷ್ಟು ಅನುದಾನವನ್ನು ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ದಿಗೆ ಖರ್ಚು ಮಾಡಲಾಗಿದೆ ಎಂದು ಅಂಕಿ ಅಂಶದ ಸಮೇತಚರ್ಚೆ ನಡೆಸಿ, ಸತ್ಯಾಂಶವನ್ನುಜನತೆಯ ಮುಂದಿಡಲಿ ಎಂಬುದು ನಮ್ಮ ಒತ್ತಾಯವಾಗಿದೆ. ಜುಲೈ ೦೩ ರಂದು ಪ್ರೀಡಂ ಪಾರ್ಕಿನಲ್ಲಿ ನಡೆಯುವ ದಲಿತ ಜನಾಗ್ರಹ ಸಮಾವೇಶದ ಸ್ಥಳಕ್ಕೆ ಸಿ.ಎಂ. ಹಾಗೂ ಡಿಸಿಎಂ ಆಗಮಿಸಿ ಮನವಿ ಪಡೆದು, ಸ್ಪಷ್ಟ ಭರವಸೆ ನೀಡಬೇಕು ಎಂದು ಮಾವಳ್ಳಿ ಶಂಕರ್ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮಾತನಾಡಿ, ದಲಿತ ಚಳವಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದ ತುಮಕೂರು ಜಿಲ್ಲೆ. ಜಿಲ್ಲೆಯ ಅಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ, ಅನಾಚಾರಗಳಂತಹ ಪ್ರಕರಣಗಳು ನಡೆದಾಗ ದಸಂಸ ಮುಂಚೂಣಿಯಲ್ಲಿದ್ದು, ಹೋರಾಟ ರೂಪಿಸಿ, ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಹಾಗಾಗಿ ಜುಲೈ ೦೩ ರ ದಲಿತ ಜನಾಗ್ರಹ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಿಂದ ೧೫೦೦ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದೇವೆ. ಅಂದು ಕಂದಾಯ ಸಚಿವರಾಗಿರುವ ಡಾ.ಜಿ.ಪರಮೇಶ್ವರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ನಮ್ಮ ಮನವಿ ಆಲಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ದಸAಸ ಸಂಘಟನಾ ಸಂಚಾಲಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಚೇಳೂರು ಶಿವನಂಜಪ್ಪ ಅವರುಗಳು ಮಾತನಾಡಿ, ಜುಲೈ ೦೩ರ ಸಮಾವೇಷಕ್ಕೆ ಜಿಲ್ಲೆಯಿಂದ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ಕುಂದೂರು ಮುರುಳಿ, ಮುಖಂಡರಾದ ಬಿ.ಕೆ.ಕೃಷ್ಣಕುಮಾರ್, ನರಸೀಯಪ್ಪ, ಚಂದ್ರಶೇಖರ್, ದಾದಾಪೀರ್ ಕೊರಟಗೆರೆ, ಚೇತನ್ ಗುಬ್ಬಿ, ರಂಜನ್ ತುಮಕೂರು, ಕೃಷ್ಣಸ್ವಾಮಿ, ಸುರೇಶ್, ಕರುಣಾಕರ್, ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

