
ಹುಳಿಯಾರು: ಇಲ್ಲಿನ ಬಾಲಾಜಿ ಥಿಯೇಟರ್ ಹಿಂಭಾಗದ ಇಂದಿರಾ ನಗರದ ೪ ನೇ ವಾರ್ಡಿನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ರಸ್ತೆ ಒತ್ತುವರಿ ಸಮಸ್ಯೆ ಕೊನೆಗೂ ಸೌಹಾರ್ದಯುತವಾಗಿ ಬಗೆಹರಿದಿದೆ.
ರಸ್ತೆ ಒತ್ತುವರಿ ಸಮಸ್ಯೆಯ ಹಿನ್ನೆಲೆ: ಇಂದಿರಾ ನಗರದ ವಾರ್ಡ್ ನಂ. ೪ ರಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಅಜಗರ್ ಅವರ ಮನೆಯಿಂದ ಅಲೀಂಜಾನ್ ರವರ ಮನೆಯವರೆಗೆ ಹೊಸದಾಗಿ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿತ್ತು. ಆದರೆ, ಸ್ಥಳೀಯ ನಿವಾಸಿಯೊಬ್ಬರು ತಮಗೆ ಸೇರಿದ ಸೈಟ್ ನಂ. ೧೨೭ ರ ನಿಗದಿತ ಅಳತೆಗಿಂತ ಹೆಚ್ಚಾಗಿ ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌAಡ್ ಮತ್ತು ಮೆಟ್ಟಿಲು ನಿರ್ಮಿಸಿದ್ದರು. ಇದರಿಂದಾಗಿ ಕಳೆದ ೫-೬ ತಿಂಗಳುಗಳಿAದ ಮಂಜೂರಾಗಿದ್ದ ರಸ್ತೆ ಕಾಮಗಾರಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಇದೇ ಕಾರಣಕ್ಕೆ ಈ ಹಿಂದೆ ಸುಮಾರು ೩ ರಿಂದ ೪ ಬಾರಿ ರಸ್ತೆ ಕಾಮಗಾರಿ ಸ್ಥಳಾಂತರಗೊAಡು ಸಾರ್ವಜನಿಕರಿಗೆ, ವೃದ್ಧರಿಗೆ ಹಾಗೂ ರೋಗಿಗಳಿಗೆ ಓಡಾಡಲು ತೀವ್ರ ತೊಂದರೆಯಾಗಿತ್ತು.
ಸ್ಥಳದಲ್ಲಿ ಸಾರ್ವಜನಿಕರ ಪ್ರತಿಭಟನೆ: ರಸ್ತೆ ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿದರೆ ನಾವೂ ಕೂಡ ಖುಲ್ಲಾ ಮಾಡಿಕೊಡುತ್ತೇವೆ ಎಂದು ಇತರ ಇಬ್ಬರು ನಿವಾಸಿಗಳು ಒಪ್ಪಿದ್ದರೂ, ಮುಖ್ಯವಾಗಿ ಒಬ್ಬರು ಮಾತ್ರ “ಎಲ್ಲರ ಮನೆಯನ್ನು ನಕ್ಷೆಯಂತೆ ಅಳತೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ನಂತರ ಬನ್ನಿ” ಎಂದು ಹಠ ಹಿಡಿದಿದ್ದರು. ಇದರಿಂದ ಆಕ್ರೋಶಗೊಂಡ ವಾರ್ಡಿನ ಸಾರ್ವಜನಿಕರು ಇಂದು ರಸ್ತೆಯಲ್ಲೇ ಜಮಾಯಿಸಿ, ಪ್ರತಿಭಟನೆ ನಡೆಸಿ “ನಮಗೆ ರಸ್ತೆ ಸಂಪರ್ಕ ಮಾಡಿಕೊಡಲೇಬೇಕು” ಎಂದು ಪಟ್ಟು ಹಿಡಿದರು.
ಅಧಿಕಾರಿಗಳ ಭೇಟಿ ಮತ್ತು ಪರಿಹಾರ: ಪ್ರತಿಭಟನೆಯ ತೀವ್ರತೆಯನ್ನು ಅರಿತು ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಇಂಜಿನಿಯರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಮಾಜಿ ಕೌನ್ಸಿಲರ್ ರಾಘವೇಂದ್ರ ಹಾಗೂ ಹಾಲಿ ಕೌನ್ಸಿಲರ್ ಹೇಮಂತ್ ಕುಮಾರ್ ಅವರು ತಕ್ಷಣ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಆಗಮಿಸಿದರು.
ಸ್ಥಳದಲ್ಲಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ನಕ್ಷೆಯ ಪ್ರಕಾರ ಮನೆ ಹಾಗೂ ರಸ್ತೆಯ ಜಾಗವನ್ನು ಅಳತೆ ಮಾಡಿಸಿದರು. ಒತ್ತುವರಿಯಾಗಿರುವ ಭಾಗವನ್ನು ಇಂಜಿನಿಯರ್ ಮಂಜುನಾಥ್ ಅವರು ಮಾರ್ಕ್ ಮಾಡಿಸಿ, ತಕ್ಷಣವೇ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ತಪ್ಪಿದಲ್ಲಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊನೆಗೂ ಒಪ್ಪಿದ ನಿವಾಸಿಗಳು: ಅಧಿಕಾರಿಗಳ ಎಚ್ಚರಿಕೆ ಮತ್ತು ವಾದ-ವಿವಾದಗಳ ನಂತರ, ಒತ್ತುವರಿ ಮಾಡಿಕೊಂಡಿದ್ದ ನಿವಾಸಿಯು ಪರಿಸ್ಥಿತಿಯನ್ನು ಅರಿತು ತಾವೇ ಸ್ವತಃ ಒತ್ತುವರಿ ತೆರವುಗೊಳಿಸಲು ೫ ದಿನಗಳ ಕಾಲಾವಕಾಶ ಕೋರಿದರು. ಅದಕ್ಕೆ ಅಧಿಕಾರಿಗಳು ಸಮ್ಮತಿಸಿ ಗಡುವು ನೀಡಿದ್ದಾರೆ. ಇದರಿಂದಾಗಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ನಗರದ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸಾಧಿಕ್ ಸಾಬ್, ಮಂಜುನಾಥ್, ಜಾನಕಮ್ಮ, ಕೆಂಚಪ್ಪ, ವಿಶಾಲಾಕ್ಷಮ್ಮ, ದಾದಾಪೀರ್, ಅಲಮ್ಮಿ, ಜಾಫರ್ ಸಾಬ್, ಕಲೀಂ ಷರೀಷ್, ನೂರ್ ಜಾನ್, ಸಿದ್ದಿಕ್, ನಬಿ ಸೇರಿದಂತೆ ವಾರ್ಡಿನ ನಿವಾಸಿಗಳು ಉಪಸ್ಥಿತರಿದ್ದರು.

