ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್ಗಳಲ್ಲಿ ಕುಸಿದಿದೆ. ಕೂಡಲೇ ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಹಾಗೂ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ (ಎನ್ಡಿಎ) ವತಿಯಿಂದ ಆ ೧೦ ರ ಸೋಮವಾರದಂದು ಹೇಮಾವತಿ ಕಛೇರಿ ಮುಂಭಾಗ ಅಹೋ ರಾತ್ರಿ ಧರಣಿ ಮಾಡಲಾಗುವುದು ಎಂದು ಜೆಡಿಎಸ್ ನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದೆ. ರೈತರ ಆರ್ಥಿಕ ಬೆಳೆಗಳಾದ ತೆಂಗು ಮತ್ತು ಅಡಿಕೆ ಮರಗಳು ನೀರಿಲ್ಲದೇ ಸೊರಗಿವೆ. ಈ ಮಧ್ಯೆ ಜಿಲ್ಲೆಯ ರೈತರಿಗೆ ಆಶಾಕಿರಣವಾಗಿರುವ ಹೇಮಾವತಿ ನೀರನ್ನು ಕೂಡಲೇ ಕಾಲುವೆಗಳ ಮೂಲಕ ಎಲ್ಲಾ ಕೆರೆ ಕಟ್ಟೆಗಳಿಗೆ ಹರಿಸಬೇಕು. ಹೇಮಾವತಿ ಡ್ಯಾಂ ನಲ್ಲಿ ಈಗಾಗಲೇ ಸುಮಾರು ೨೯ ಟಿಎಂಸಿ ನೀರಿದೆ. ಈ ಹಿಂದೆ ೧೯ ಟಿಎಂಸಿ ನೀರಿದ್ದ ವೇಳೆಯೇ ಕಾಲುವೆಗಳ ಮೂಲಕ ನೀರು ಹರಿಸಲಾಗಿತ್ತು. ಈಗ ಸಾಕಷ್ಟು ನೀರಿದ್ದರೂ ಸಹ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿರುವ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯನ್ನು ಕೂಡಲೇ ತಡೆ ಹಿಡಿಯಬೇಕು. ಯಾವುದೇ ಕಾರಣಕ್ಕೂ ಅದನ್ನು ಮುಂದುವರೆಸಬಾರದು. ಈ ಕುರಿತು ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು. ರೈತರಿಗೆ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ರೈತರ ಬದುಕು ದುಃಸ್ಥಿತಿಯಲ್ಲಿದೆ.
ರಾಜ್ಯದ ಬಹುಪಾಲು ಡ್ಯಾಂ ಗಳು ನೀರಿಲ್ಲದೇ ಬಣಗುಡುತ್ತಿವೆ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ. ರಾಜ್ಯದ ಜನತೆಯ ಹಿತಕ್ಕೆ ಮೊದಲು ಆಧ್ಯತೆ ನೀಡಬೇಕು. ರಾಜ್ಯದ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿದ ನಂತರ ತಮಿಳುನಾಡಿಗೆ ನೀರು ಹರಿಸಲಿ ಎಂದು ಹೇಳಿದರು.
ತಾಲೂಕಿನ ಹಿತದೃಷ್ಠಿಯಿಂದ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷಿ÷್ಮÃನಾರಾಯಣ್ ಮನವಿ ಮಾಡಿಕೊಂಡರು.
ತಾಲೂಕಿನ ಹಿರಿಯ ರೈತ ಮುಖಂಡ ಅರಳೀಕೆರೆ ಶಿವಯ್ಯನವರು ತಾಲೂಕಿನ ಪ್ರಮುಖ ಕೆರೆ ಕಟ್ಟೆಗಳ ಸಾಂದ್ರತೆ ಮತ್ತು ಬಳಕೆಯ ಬಗ್ಗೆ ಸಭೆಗೆ ವಿವರ ನೀಡಿದರು. ಈ ವೇಳೆ ಜೆಡಿಎಸ್ ನ ತಾಲೂಕು ಅಧ್ಯಕ್ಷ ಸಾರಿಗೇಹಳ್ಳಿ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ಹಲವಾರು ನಾಯಕರು ಉಪಸ್ಥಿತರಿದ್ದರು.
(Visited 1 times, 1 visits today)





