ಚಿಕ್ಕನಾಯಕನಹಳ್ಳಿ :
ಮುಂದಿನವಾರದಲ್ಲಿ ತಾಲ್ಲೂಕಿನ ಹಲವೆಡೆ ಸುಮಾರು 20ರಿಂದ 30ಕೋಟಿರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗವುದೆಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಬಾಳನಕೆರೆ ಹಳ್ಳದ ಬಳಿ ರೂ.1ಕೋಟಿ ವೆಚ್ಚದ ಚೆಕ್ಡ್ಯಾಂ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಪೂಜೆಸಲ್ಲಿಸಿಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಸಬಹೋಬಳಿ ಹೊಸಳ್ಳಿ ಗೊಲ್ಲರಹಟ್ಟಿ ನಡುವೆ 2ಕೋಟಿ ರೂ. ಅಂದಾಜಿನ ಚೆಕ್ಡ್ಯಾಂ ನಿರ್ಮಾಣ ಮತ್ತು ಹಂದನಕೆರೆ ಹೋಬಳಿ ಓಟಿಕೆರೆಬಳಿ 1.20ಕೋಟಿರೂ.ಗಳ ಚೆಕ್ಡ್ಯಾಂಗಳ ಕಾಮಗಾರಿಗಳನ್ನು ಇಂದು ಆರಂಭಿಸಲಾಗವುದೆಂದರು. ಹಲವು ಅಭಿವೃದ್ದಿ ಕೆಲಸಗಳ ಚಾಲನೆಗೆ ಇದುವರೆಗೂ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿತ್ತು.
ಮುಂದಿನ ವಾರದಲ್ಲಿ ತಾಲ್ಲೂಕಿನೆಡೆ ಸುಮಾರು 20ರಿಂದ 30 ಕೋಟಿರೂ.ಗಳ ಕಾಮಗಾರಿಗಳು ಆರಂಭಗೊಳ್ಳಲಿದೆ. ಈಗಾಗಲೇ ತಾಲ್ಲೂಕಿಗೆ ನಾಲೆಯಿಂದ ನೀರು ಹರಿದುಬರುತಿದ್ದು ಅಂತರ್ಜಲ ಸಹಜವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಅವಶ್ಯವಿರುವಡೆ ಚೆಕ್ಡ್ಯಾಂ, ಸೇತುವೆಗಳ ನಿರ್ಮಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಆದ್ಯತೆನೀಡಲಾಗುವುದು. ಇದರಿಂದ ಕೃಷಿ, ತೋಟ ನಂಬಿದ ರೈತರು ನೆಮ್ಮದಿಯಿಂದ ತಮ್ಮ ಕೃಷಿಕಾಯಕದಲ್ಲಿ ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ತೊಡಗಬಹುದಾಗಿದೆ ಎಂದರು.
ಹೇಮಾವತಿ ನಾಲೆಯಿಂದ ಸಾಸಲುಕೆರೆ ಭಾಗದಿಂದ ತಾಲ್ಲೂಕಿನ ದಬ್ಬೆಘಟ್ಟ ಭಾಗಕ್ಕೆ ನೀರು ಹರಿಯಲು ಕೆಲವೊಂದು ತೊಡಕುಗಳು ನಿವಾರಣೆಯಾಗಬೇಕಿದ್ದು ಈಗಾಗಲೆ ಅದನ್ನು ಸರಿಪಡಿಸಲು ಪ್ರಯತ್ನ ನಡೆದಿದೆ. ಹಿಂದಿನ ಗುತ್ತಿಗೆದಾರರು ಭೂಸ್ವಾಧೀನವಾಗದ ಕಾರಣಕ್ಕೆ ನಷ್ಟವಾಗಿದೆ ಎಂದು ನ್ಯಾಯಾಲಯದ ಮೊರೆಹೋಗಿದ್ದಾರೆ. ಅವರ ಬದಲಿಗೆ ಬೇರೊಬ್ಬರಿಗೆ ಹೊಸದಾಗಿ ಗುತ್ತಿಗೆ ನೀಡುವಬಗ್ಗೆ ಮಾತುಕತೆ ನಡೆದಿದ್ದು ಹಳೆಯಟೆಂಡರ್ ರದ್ದುಮಾಡುವ ಬಗ್ಗೆ ಹಿಂದಿನ ಗುತ್ತಿಗೆದಾರರೂಸಹ ಇದಕ್ಕೆ ಒಪ್ಪಿದ್ದಾರೆ ಹಾಗೂ ಈ ಭಾಗದಲ್ಲಿ ಒಂದೆರಡು ಪ್ರಕರಣಗಳಲ್ಲಿ ಭೂಸ್ವಾಧೀನವಾಗಬೇಕಿದ್ದು ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಿ ಹೊಸದಾಗಿ ಟೆಂಡರ್ ಕರೆಯಲಾಗುವುದೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಿರಂಜನ್, ಶಿವರಾಜ್, ಕೇಶವಮೂರ್ತಿ ಸಣ್ಣನೀರಾವರಿ ಇಂಜಿನಿಯರ್ ಹಾಗೂ ಸಿಬ್ಬಂದಿ ಮುಂತಾದವರಿದ್ದರು.