ತುಮಕೂರು:
ಹಿಜಾಬ್, ಹಲಾಲ್ ಕಟ್, ವ್ಯಾಪಾರ ಬಂದ್ ನಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು, ಸದ್ದುಗದ್ದಲವಿಲ್ಲದೆ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ, ಜನ ಸಾಮಾನ್ಯರ ಜೇಬಿಗೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕತ್ತರಿ ಹಾಕುತ್ತಿದೆ ಎಂದು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ಆರೋಪಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಯುವ ಕಾಂಗ್ರೆಸ್ ವತಿಯಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡುತಿದ್ದ ಅವರು, ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿರುವ ಬೆಲೆ ಹೆಚ್ಚಳದ ಬಗ್ಗೆ ಮಾತನಾಡದ ಬಿಜೆಪಿ ನಾಯಕರು, ಸಂಘಪರಿವಾರ ಮತ್ತು ಅದರ ಮಿತ್ರಮಂಡಳಿಗಳು ಹೂಡುತ್ತಿರುವ ಷಡ್ಯಂತ್ರಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ,ದೇಶವನ್ನು ಅದೋಗತಿಗೆ ತಳ್ಳುತ್ತಿದೆ ಎಂದರು.
ಭಾರತ ಒಂದು ಜಾತ್ಯಾತೀತ ರಾಷ್ಟ್ರ.ಇಲ್ಲಿ ಎಲ್ಲ ಧರ್ಮಿಯರು ನೆಮ್ಮದಿಯಿಂದ ವ್ಯಾಪಾರ, ವಹಿವಾಟು ನಡೆಸಿಕೊಂಡು ಹೋಗಲು ಮುಕ್ತ ಅವಕಾಶವಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಹಲಾಲ್ ಕಟ್ ಹೆಸರಿನಲ್ಲಿ ಮಾಂಸ ವ್ಯಾಪಾರವನ್ನು, ಜಾತ್ರೆಗಳಲ್ಲಿ ಮುಸ್ಲಿಂ ಧರ್ಮಿಯರಿಗೆ ಅವಕಾಶ ಇಲ್ಲ ಎಂದು ಒಂದು ಸಮುದಾಯವನ್ನು ಗುರಿಯಾಗಿ,ಅವರ ಅರ್ಥಿಕ ವಹಿವಾಟುಗಳನ್ನು ಕುಸಿತಗೊಳಿಸಿ,ತಮ್ಮ ಬೆಳೆ ಬೆಯಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ಬಜರಂಗದಳ,ಆರ್.ಎಸ್.ಎಸ್ ಹಾಗೂ ಅದರ ಅಂಗಸಂಸ್ಥೆಗಳು ಮಾಡುತ್ತಿದ್ದರೂ,ಇಂತಹ ಮತಾಂಧರ ವಿರುದ್ದ ಕಾನೂನು ಕ್ರಮ ಜರುಗಿಸಿ, ಎಲ್ಲರಿಗೂ ರಕ್ಷಣೆ ನೀಡಬೇಕಾದ ಸರಕಾರ, ಒಂದು ವರ್ಗದ ಪರ ನಿಂತು, ಸಂಘ ಸಂಸ್ಥೆಗಳ ಹೇಳಿಕೆಗೂ ನಮಗೂ ಸಂಬಂಧಿವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ. ಇದರ ವಿರುದ್ದ ಕಾಂಗ್ರೆಸ್ ಪಕ್ಷ, ಅದರಲ್ಲಿಯೂ ಯುವ ಕಾಂಗ್ರೆಸ್ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸುವುದಲ್ಲದೆ,ಬಿಜೆಪಿಯ ಮೋಸಕ್ಕೆ ಬಲಿಯಾಗುತ್ತಿರುವ ಯುವಜನತೆಗೆ ಜಾಗೃತಿ ಮೂಡಿಸುವುದಾಗಿ ಶಶಿಹುಲಿಕುಂಟೆ ಮಠ್ ತಿಳಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳ ಮಾಡಿದ್ದರ ಬಗ್ಗೆ ಅಂದಿನ ಮನಮೋಹನ್ ಸಿಂಗ್ ಸರಕಾರದ ವಿರುದ್ದ ಬೀದಿಗೆ ಇಳಿದಿದ್ದ, ಕೆಲವರು ದ್ವನಿ ಇಂದು ಅಡಗಿದೆ. ಕೇಂದ್ರ ಸರಕಾರ ಹಾಕುವ ದೇಶದೋಹ ಕೇಸುಗಳಿಗೆ ಹೆದರಿ,ಜನರು ಸರಕಾರದ ವಿರುದ್ದ ಮಾತನಾಡಲು ಹಿಂಜರಿಯುವಂತಹ ಸ್ಥಿತಿ ಇದೆ.
ಐಟಿ, ಇಡಿ, ಪೊಲೀಸ್ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡು ವಿರೋಧಪಕ್ಷಗಳನ್ನು ಸದ್ದು ಅಡಿಗಿಸುವಂತಹ ನೀಚ ಕೆಲಸಕ್ಕೆ ಬಿಜೆಪಿ ಕೈಹಾಕಿದೆ. ಇದರ ವಿರುದ್ದ ಯುವಜನರು ಹೋರಾಟ ರೂಪಿಸಬೇಕಿದೆ ಎಂದರು.
ನಗರದ ಬಾಳನಕಟ್ಟೆಯಲ್ಲಿರುವ ಇಂದಿರಾ ಕ್ಯಾಟೀನ್‍ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು,ಅಡುಗೆ ಅನಿಲ್ ಸಿಲಿಂಡರ್ ಮತ್ತು ಮೋಟಾರ್ ಬೈಕ್‍ನನ್ನು ಜಟಕಾ ಗಾಡಿಯಲ್ಲಿಟ್ಟು ಮೆರವಣಿಗೆ ಮಾಡುವ ಮೂಲಕ ತೈಲಬೆಲೆ ನಿಯಂತ್ರಿಸದ ಸರಕಾರದ ವಿರುದ್ದ ಘೋಷಣೆ ಕೂಗಿದರು.ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್.ಜೆ, ಕಾರ್ಯದರ್ಶಿ ಇಲಾಯಿ ಸಿಖಂದರ್, ರಾಜೇಶ್, ಯಶ್ವಂತ್, ಜಿಲ್ಲಾ ಉಪಾಧ್ಯಕ್ಷ ಸುಮುಖ ಕೊಂಡವಾಡಿ, ಮೋಹನ್ ಕುಮಾರ್ ಟಿ.ಪಿ, ಅಜರ್,ನಿಖಿಲ್, ವೇಣು, ರಫಿ, ಮುಬಾ, ಸಿಜ್ಹಾನ್, ತಾಲೂಕು ಅಧ್ಯಕ್ಷರುಗಳಾದ ಯೋಗೀಶ್, ಲೋಹಿತ್, ಸುರ್ಜಿತ್, ನೂರ್ ಮತ್ತಿತರರು ಪಾಲ್ಗೊಂಡಿದ್ದರು.

(Visited 2 times, 1 visits today)