ತುಮಕೂರು : 

      ಕೇಂದ್ರ ಮತ್ತು ರಾಜ್ಯ ಸರಕಾರ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಅಗತ್ಯವಸ್ತುಗಳ ಬೆಲೆ ಹೆಚ್ಚಳ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ.ಸದಸ್ಯ ಕೆಂಚಮಾರಯ್ಯ,ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ, ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ರೂಪಿಸಿದ್ದ ಲಾಭದಾಯಕ ಸರಕಾರಿ ಸಾಮ್ಯದ ಕಂಪನಿಗಳನ್ನು ತಮ್ಮಗೆ ಇಷ್ಟ ಬಂದಷಕ್ಕೆ ಮಾರಾಟ ಮಾಡಿ,ದೇಶವನ್ನು ಅದೋಗತಿಗೆ ತಳ್ಳುತ್ತಿದ್ದಾರೆ.ಅಲ್ಲದೆ ಮೀಸಲಾತಿಯನ್ನೇ ಅಪ್ರಸ್ತುತ ಮಾಡಲು ಹೊರಟಿದೆ,ಇದು ಖಂಡಿ ನೀಯ. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು.

      ಅಭಿವೃದ್ದಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡದೆ, ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಬೇರೆಡೆಗೆ ಸೆಳೆದು, ಜನವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ.ಬಿಜೆಪಿ ಇದುವರೆಗೂ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ಇದನ್ನು ರಾಜ್ಯದ ಮನೆ ಮನೆಗೂ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಹೋರಾಟಗಳನ್ನು ರೂಪಿಸಲಿದೆ ಎಂದು ಕೆಂಚಮಾರಯ್ಯ ನುಡಿದರು.

      ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮುಖಂಡ ಡಾ.ಇಂತ್ತಿಯಾಜ್ ಮಾತನಾಡಿ,ಕೇಂದ್ರ ಸರಕಾರದ ಅವೈಜ್ಞಾನಿಕ ಜಿ.ಎಸ್.ಟಿ. ಮತ್ತು ನೋಟು ಅಮಾನಿಕರಣದಿಂದಾಗಿ ದೇಶದ ಸುಮಾರು 10 ಲಕ್ಷಕ್ಕೂ ಅಧಿಕ ಕೈಗಾರಿಕೆಗಳು ಮುಚ್ಚಿ ಹೋಗಿ, 10 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.ಬಿ.ಹೆಚ್.ಇ.ಎಲ್, ಹೆಚ್.ಎ.ಎಲ್ ಮತ್ತಿತರರ ಸರಕಾರದ ಕಂಪನಿಗಳನ್ನು ಮಾರಾಟ ಮಾಡಿ, ಖಾಸಗಿಯವರಿಗೆ ಲಾಭ ಮಾಡಿಕೊಡಲಾಗುತ್ತಿದೆ. ಈ ವ್ಯವಸ್ಥೆಯ ವಿರುದ್ದ ಹೋರಾಟ ಅನಿವಾರ್ಯ ಎಂದರು

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣ್ಣ ಸಿದ್ದಯ್ಯ, ಗೀತಾರುದ್ರೇಶ್,ಗೀತಮ್ಮ, ಸುಜಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷ,ವಿಜಯಕುಮಾರ್, ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಮಹೇಶ್, ಓಬಿಸಿ ಸೆಲ್‍ನ ಪುಟ್ಟರಾಜು, ಜಾರ್ಜ್, ಶ್ರೀನಿವಾಸ್, ಗೀತಮ್ಮ ಮತ್ತಿತರರು ಪಾಲ್ಗೊಂಡಿದ್ದರು.

(Visited 25 times, 1 visits today)