ತುಮಕೂರು:


ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂಸ್ಮರಣ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ ಚಳವಳಿಯ ನೇತಾರ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪುಷ್ಪನಮನ ಸಲ್ಲಿಸುವ ಮೂಲಕ 1942ರ ಆಗಸ್ಟ್ 09 ರಂದು ಆರಂಭಗೊಂಡ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಮಾಡು, ಇಲ್ಲವೇ ಮಡಿ ಹೋರಾಟಕ್ಕೆ ಚಾಲನೆಯಾದ ದಿನವನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಭಾರತದ ಸ್ವಾತಂತ್ರ ಇತಿಹಾಸದಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿ ಒಂದು ಮಹತ್ತರ ಘಟ್ಟ. ಮಹಾತ್ಮಗಾಂಧಿ ನೇತೃತ್ವದ ಹಲವಾರು ಮಾದರಿ ಹೋರಾಟಗಳಿಗೆ ಬ್ರಿಟಿಷರು ಬಗ್ಗದೆ ಇದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನೆಹರು, ಪಟೇಲ್ ಸೇರಿದಂತೆ ಹಲವರೊಂದಿಗೆ ಸೇರಿ, ಹೇಗಾದರೂ ಮಾಡಿ ಬ್ರಿಟಿಷರನ್ನು ಭಾರತದಿಂದ ಹೋಡಿಸಬೇಕೆಂಬ ಪಣತೊಟ್ಟ ಮುಖಂಡರು, 1942ರ ಆಗಸ್ಟ್ 08 ರಂದು ಕ್ವಿಟ್ ಇಂಡಿಯಾ ಚಳವಳಿಯನ್ನು ಘೋಷಿಸಿದರು. ಈ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ತರವಾದುದ್ದು ಎಂದರು.
ನಮ್ಮ ನಾಯಕರಾಗಿರುವ ಸಿದ್ದರಾಮಯ್ಯ ಅವರು ಹೇಳಿರುವಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷವಾಗಲಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಬಿಜೆಪಿ ಮನುಧರ್ಮದ ರಕ್ಷಣೆಗಾಗಿ, ಚಾರ್ತುವರ್ಣ ಪದ್ದತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ 1925ರಲ್ಲಿ ಜನಸಂಘದ ಹೆಸರಿನಲ್ಲಿ ಹುಟ್ಟಿಕೊಂಡಿದೆ. ಜೆಡಿಎಸ್ ಪಕ್ಷ ಹುಟ್ಟಿರುವುದೇ ಒಂದು ಜಾತಿಯ ಅಭಿವೃದ್ದಿಗಾಗಿ, ದೇಶದ ಸ್ವಾತಂತ್ರಕ್ಕಾಗಿಯೇ ಹುಟ್ಟಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನೆಹರು ಅವರ ತಂದೆ ಮೋತಿಲಾಲ್ ನೆಹರು, ಇಂದಿನ ತ್ರಿಮೂರ್ತಿ ಭವನ ಸೇರಿದಂತೆ ಸುಮಾರು ಮೂರು ಸಾವಿರ ಕೋಟಿ ರೂಗಳಿಗೆ ಬೆಲೆ ಬಾಳುವ ತಮ್ಮ ಸ್ವಂತ ಆಸ್ತಿಯನ್ನು ದೇಶಕ್ಕೆ ಅರ್ಪಿಸಿದರು.
ಅಂತಹ ನೆಹರು ಮನೆತನವನ್ನು ಇಂದಿನ ಬಿಜೆಪಿ ಮುಖಂಡರು ಸುಳ್ಳು ಆರೋಪಗಳ ಮೂಲಕ ಕಳ್ಳರು ಎಂಬಂತೆ ಬಿಂಬಿಸಲು ಹೊರಟಿದೆ. ಇದಕ್ಕೆ ತಕ್ಕ ಉತ್ತರವನ್ನು ಕಾಂಗ್ರೆಸ್ ಮುಖಂಡರುಗಳು ನೀಡಲೇಬೇಕಿದೆ ಎಂದು ತಿಳಿಸಿದರು.
2019ರ ಚುನಾವಣೆಯ ವೇಳೆ 2022ರ ವೇಳೆಗೆ ದೇಶದ ಎಲ್ಲಾ ಪ್ರಜೆಗಳಿಗೂ ಸೂರು ನೀಡುವ ವಾಗ್ಧಾನ ಮಾಡಿದ್ದ ನರೇಂದ್ರಮೋದಿ ಅವರು, ಹರ್ ಘರ್ ತಿರಂಗ ಎನ್ನುವ ಘೋಷಣೆ ಮಾಡುವ ಬಾವುಟ ನೀಡಿ, ಜನರಿಗೆ ಕಿವಿಗೆ ಹೂವು ಮುಡಿಸಲು ಹೊರಟಿದೆ. ರೈತರ, ಬಡವರ ಸಾಲ ಮನ್ನ ಮಾಡಲು ಹಿಂದೇಟು ಹಾಕುವ ಸರಕಾರ, ಉದ್ಯಮಿಗಳ 11 ಲಕ್ಷ ಕೋಟಿ ಸಾಲ ಮನ್ನ ಮಾಡಿ, ದೇಶವನ್ನು ಮತ್ತಷ್ಟು ಅದೋಗತಿಗೆ ತರುತ್ತಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮತದಾರರು, ಅಭ್ಯರ್ಥಿಯ ಜಾತಿ, ಮತ, ಹಣ ನೋಡದೆ, ಪಕ್ಷದ ಸಾಧನೆ ನೋಡಿ ಮತ ನೀಡುತ್ತಾರೋ ಅಂದೇ ಈ ದೇಶ ಉನ್ನತ್ತಿಯತ್ತ ಸಾಗಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ತುಮಕೂರುನಗರ ಮತ್ತು ಕೊರಟಗೆರೆ ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿ ಕೇಶವಮೂರ್ತಿ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಬಹಿಷ್ಕರಿಸಿದ್ದ ಆರ್.ಎಸ್.ಎಸ್ ಮತ್ತು ಹಿಂದೂ ಮಹಾಸಭಾ ಇಂದು ಅಧಿಕಾರದಲ್ಲಿದೆ. ಇದು ಈ ದೇಶದ ದುರಂತ.ಕ್ವಿಟ್ ಇಂಡಿಯಾ ಚಳವಳಿಯ ವೇಳೆ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಇಸನೂರಿನಲ್ಲಿಯೂ ಒಂದು ಬೃಹತ್ ಹೋರಾಟ ನಡೆಯಿತು.ಅಂದೇ ಭಾರತದ ತ್ರಿವರ್ಣ ದ್ವಜವನ್ನು ಗ್ರಾಮದಲ್ಲಿ ಹಾರಿಸುವ ಮೂಲಕ ದೇಶದ ಮೊದಲು ಬ್ರಿಟಿಷ್ ಮುಕ್ತ ಗ್ರಾಮವನ್ನಾಗಿ ಘೋಷಿಸಲಾಯಿತು. ಇದರ ಇತಿಹಾಸವನ್ನು ಯುವಜನರು ತಿಳಿದು ಮತ ನೀಡಬೇಕಾಗಿದೆ ಎಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್‍ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಮಾಡು, ಇಲ್ಲವೇ ಮಡಿ ಎಂಬ ತತ್ವದ ಮೂಲಕ ಸ್ವಾತಂತ್ರ ಹೋರಾಟಕ್ಕೆ ಭದ್ರ ಬುನಾದಿ ಹಾಕಿದರು.
ಆದರೆ ಇಂದು ಯುವಜನರಲ್ಲಿ ಸ್ವಾತಂತ್ರ ಹೋರಾಟ, ಇದುವರೆಗಿನ ದೇಶದ ಅಭಿವೃದ್ದಿ ಮೋದಿ ಅವರ ಕಾಲದಲ್ಲಿ ಎಂಬಂತೆ ಬಿಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ.ಇದನ್ನು ಹೋಗಲಾಡಿಸಿ, ಜನರಿಗೆ ಸತ್ಯ ತಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿ.ಮಿ.ಗಳ ಪಾದಯಾತ್ರೆ ಹಮ್ಮಿಕೊಂಡಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಆಗಸ್ಟ್ 11ರ ಗುರುವಾರ ನಗರದ ಬಿ.ಜಿ.ಪಾಳ್ಯ ಸರ್ಕಲ್‍ನಿಂದ ಕಾಂಗ್ರೆಸ್ ಪಕ್ಷದ ಪ್ರಿಡಂ ಪಾರ್ಕ್ ಜಾಥಾ ಆರಂಭವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ವಹಿಸಿದ್ದರು. ಇತರರು ಭಾಗವಹಿಸಿದ್ದರು.

(Visited 4 times, 1 visits today)